ಕರ್ನಾಟಕ

karnataka

By ETV Bharat Karnataka Team

Published : Jun 18, 2024, 9:27 PM IST

ETV Bharat / state

ಮಲೆನಾಡಿನಲ್ಲಿ ಧಾರಾಕಾರ ಮಳೆ : ಸೇತುವೆ ಮೇಲೆ ಹರಿದ ನೀರು, ರಸ್ತೆ ಸಂಪರ್ಕ ಬಂದ್ - heavy rainfall in chikkamagaluru

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ವಿಪರೀತ ಮಳೆ ಸುರಿದಿದೆ. ಇದರಿಂದಾಗಿ ಮೂಡಿಗೆರೆ ತಾಲೂಕಿನಲ್ಲಿ ಹಾಡಹಗಲೇ ವಾಹನ ಸವಾರರು ಲೈಟ್​ ಆನ್ ಮಾಡಿಕೊಂಡು ಸಂಚರಿಸಿದ್ದಾರೆ. ಅಲ್ಲದೇ ಬಾಳೆಹೊನ್ನೂರು-ಕಳಸ ರಾಜ್ಯ ಹೆದ್ದಾರಿ ಬಂದ್ ಆಗಿದೆ.

heavy-rainfall-in-chikkamagaluru
ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ (ETV Bharat)

ಮಲೆನಾಡಿನಲ್ಲಿ ಧಾರಾಕಾರ ಮಳೆ (ETV Bharat)

ಚಿಕ್ಕಮಗಳೂರು :ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಧಾರಾಕಾರ ಮಳೆಗೆ ಇಲ್ಲಿನ ಜನರ ಬದುಕು ಅಕ್ಷರಶಃ ಅಸ್ತವ್ಯಸ್ತವಾಗಿದೆ. ಮೂಡಿಗೆರೆಯಲ್ಲಿ ಮಧ್ಯಾಹ್ನವೇ ವಾಹನಗಳ ಲೈಟ್ ಆನ್ ಮಾಡಿಕೊಂಡು ಓಡಾಡುವಂತಾಗಿದ್ರೆ, ಕಳಸ-ಬಾಳೆಹೊನ್ನೂರಿನಲ್ಲಿ ಸುರಿದ ಮಳೆಗೆ ರಸ್ತೆಯೇ ಮಾಯವಾಗಿ ಸಂಪರ್ಕವೇ ಕಡಿತಗೊಂಡಿದೆ.

ಜಿಲ್ಲೆ ಎನ್​. ಆರ್ ಪುರ ತಾಲೂಕಿನ ಮಹಲ್ಗೋಡು ಸೇತುವೆ ಮೇಲೆ ನೀರು ಹರಿದು ರಸ್ತೆ ಮಾಯವಾಗಿದೆ. ಮಧ್ಯಾಹ್ನದ ನಂತರ ಎನ್‌. ಆರ್ ಪುರ-ಕಳಸ ತಾಲೂಕಿನ ಭಾರೀ ಮಳೆಗೆ ಸೇತುವೆ ಕಾಣದಂತೆ ಮಳೆ ನೀರು ಹರಿದಿದೆ. ಇದರಿಂದ ಬಾಳೆಹೊನ್ನೂರು-ಕಳಸ ರಾಜ್ಯ ಹೆದ್ದಾರಿಯೇ ಬಂದ್ ಆಗಿದೆ.

ಇದರಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೋಗಿದ್ದ ಭಕ್ತರು ರಸ್ತೆ ಮಧ್ಯೆ ಸಿಲುಕಿಕೊಂಡಿದ್ದು ಕಿ. ಮೀಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಳೆ ನೀರಲ್ಲಿ ಕೊಚ್ಚಿ ಬಂದ ಕಸ ಸೇತುವೆಗೆ ಸಿಕ್ಕಿ ನೀರು ಹರಿಯದಂತಾಗಿತ್ತು. ಆಗ ಮಹಲ್ಗೋಡು ಯುವಕರು ಸೊಂಟದ ಎತ್ತರದ ನೀರಲ್ಲಿ ದಾರಿ ಇಲ್ಲದ ಕಡೆಯೂ ಜೀವದ ಹಂಗು ತೊರೆದು ಸೇತುವೆಗೆ ಅಡ್ಡ ಇದ್ದ ಕಸವನ್ನ ತೆಗೆದು, ನೀರು ಸರಾಗವಾಗಿ ಹರಿಯುವಂತೆ ಮಾಡಿದರು.

ಈ ಸೇತುವೆ ಬಗ್ಗೆ ಅಸಮಾಧಾನ ಹೊರಹಾಕಿದ ಸ್ಥಳೀಯ ಕಿರಣ್ ಕುಮಾರ್, ''ಮಹಲ್ಗೋಡ್​ನಲ್ಲಿ ಇದೇ ಫಸ್ಟ್​ ಈ ರೀತಿ ಹಳ್ಳ ಬಂದು ಜಾಮ್ ಆಗಿರುವುದು. ಇಲ್ಲಿ ಯಾವುದೇ ವಾಹನಗಳು ಓಡಾಡುತ್ತಿಲ್ಲ. ಮೋರಿಯಲ್ಲಿ ಕಟ್ಟಿರುವ ಕಸವನ್ನು ಕ್ಲೀನ್ ಮಾಡಿದ್ರೆ ಬಂದಿರುವ ನೀರು ಕೆಳಗಡೆ ಹೋಗುತ್ತೆ. ದಯವಿಟ್ಟು ಪಿಡಬ್ಲ್ಯೂಡಿ ಅಥವಾ ಸಂಬಂಧಪಟ್ಟವರು ಅದನ್ನು ಕ್ಲೀನ್ ಮಾಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು'' ಎಂದಿದ್ದಾರೆ.

ಈ ಬಗ್ಗೆ ಸ್ಥಳೀಯರಾದ ಪರಮೇಶ್ವರಪ್ಪ ಅವರು ಮಾತನಾಡಿ, '' ನಾನು ಚಿಕ್ಕ ಹುಡುಗ ಇದ್ದಾಗಿನಿಂದ ಈ ಸೇತುವೆಯದ್ದು ಇದೇ ಗೋಳು. ಅಧಿಕಾರಿಗಳು ಬರ್ತಾರೆ, ನೋಡ್ತಾರೆ, ಹೋಗ್ತಾರೆ ಅಷ್ಟೆ. ಸೇತುವೆಯನ್ನ ಮೇಲ್ದರ್ಜೆಗೆ ಏರಿಸಿ ಅಂತ ಎಷ್ಟೇ ಮನವಿ ಮಾಡಿದ್ರು ನೋ ಯೂಸ್'' ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಗೆ ಚಾರ್ಮಾಡಿಯಲ್ಲಿ ಸಂಚಾರ ಅಸಾಧ್ಯ ಎಂದು ವಾಹನಗಳು ನಿಂತಲ್ಲೇ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಇದನ್ನೂ ಓದಿ :ಕಾಫಿನಾಡಲ್ಲಿ ಧಾರಾಕಾರ ಮಳೆಗೆ ಉಕ್ಕಿ ಹರಿದ ಹಳ್ಳಗಳು; ರಸ್ತೆ ಸಂಚಾರ ಬಂದ್, ಮನೆಗೆ ನುಗ್ಗಿದ ನೀರು - Heavy Rain in Chikkamagaluru

ABOUT THE AUTHOR

...view details