ಕರ್ನಾಟಕ

karnataka

ETV Bharat / state

ಕುಮಾರಸ್ವಾಮಿ ನಮ್ಮ ವಿರುದ್ಧ ದಾಖಲೆ ಹುಡುಕಿಸುತ್ತಿದ್ದಾರೆ, ಕೇಳಿದ್ದರೆ ನಾನೇ ಕೊಡುತ್ತಿದ್ದೆ: ಡಿಕೆಶಿ

ನೈಸ್ ರಸ್ತೆ ವಿಚಾರವಾಗಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ನೈಸ್ ವ್ಯಾಪ್ತಿಯಲ್ಲಿ ಅವರ ಆಸ್ತಿ ಎಷ್ಟಿದೆ ಎಂದು ಮೊದಲು ಬಹಿರಂಗಪಡಿಸಲಿ ಎಂದರು.

By ETV Bharat Karnataka Team

Published : 4 hours ago

DK SHIVAKUMAR SLAMS HDK
ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

ಬೆಂಗಳೂರು: ''ಕುಮಾರಸ್ವಾಮಿ ನಮ್ಮ ವಿರುದ್ಧ ದಾಖಲೆ ಹುಡುಕಿಸುತ್ತಿದ್ದಾರೆ. ಕೇಳಿದ್ದರೆ ನಾನೇ ಕೊಡುತ್ತಿದ್ದೆ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿಂದು ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಎಸ್ಐಟಿಯನ್ನು ಶಿವಕುಮಾರ್ ತನಿಖಾ ಸಂಸ್ಥೆ ಎಂದು ಟೀಕಿಸಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ''ಕುಮಾರಸ್ವಾಮಿಗೆ ನನ್ನನ್ನು ಸ್ಮರಿಸುತ್ತಿರಬೇಕು. ಇಲ್ಲದಿದ್ದರೆ ನಿದ್ದೆ ಬರುವುದಿಲ್ಲ. ಅವರು ಹಾಗೂ ಅವರ ಸಹೋದರರು ನನ್ನ ಸ್ಮರಿಸುತ್ತಲೇ ಇರುತ್ತಾರೆ. ಅವರು ನನ್ನ ದಾಖಲೆಗಳನ್ನು ಹುಡುಕುತ್ತಿದ್ದಾರೆ. ಆದರೆ, ನನ್ನ ಎಲ್ಲಾ ದಾಖಲೆಗಳು ಇಡಿ, ಸಿಬಿಐ ಬಳಿ ಇವೆ. ಹೊಸದಾಗಿ ಹುಡುಕುವುದೇನಿಲ್ಲ. ಅವರು ನನಗೆ ಕೇಳಿದ್ದರೆ ನಾನೇ ದಾಖಲೆಗಳನ್ನು ಒದಗಿಸುತ್ತಿದ್ದೆ. ನಾವಿನ್ನೂ ಅವರ ಸುದ್ದಿಗೆ ಹೋಗಿಲ್ಲ. ಉಳಿದ ವಿಚಾರ ಆನಂತರ ಮಾತನಾಡೋಣ'' ಎಂದು ಟಾಂಗ್ ಕೊಟ್ಟರು.

ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ (ETV Bharat)

ಇ.ಡಿ. ದಾಳಿ ಅಲ್ಲ: ಮುಡಾ ಪ್ರಕರಣವಾಗಿ ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ''ಇಡಿ ಅವರು ಮಾಹಿತಿ ಸಂಗ್ರಹಿಸುತ್ತಿರಬಹುದು. ಅದನ್ನು ದಾಳಿ ಎಂದು ಹೇಗೆ ಹೇಳುತ್ತೀರಿ? ಅವರು ದಾಖಲೆ ಕೇಳಬಹುದು, ಇವರು ಕೊಡಬಹುದು. ದಾಖಲೆ ಪರಿಶೀಲನೆ ಮಾಡಬಹುದು. ಅದಕ್ಕಿಂತ ಹೆಚ್ಚಾಗಿ ಇನ್ನೇನು ಮಾಡಲು ಸಾಧ್ಯ? ದಾಖಲೆಗಳನ್ನು ಹೊಸದಾಗಿ ತಿದ್ದಲು ಸಾಧ್ಯವೇ? ಪ್ರಕರಣದ ಎಲ್ಲಾ ದಾಖಲೆಗಳು ಸಾರ್ವಜನಿಕವಾಗಿವೆ. ನಾವು ಕಾನೂನು ರೀತಿಯ ಹೋರಾಟ ಮಾಡುತ್ತೇವೆ. ವಾಸ್ತವಾಂಶ ಜನರ ಮುಂದಿಡುತ್ತೇವೆ'' ಎಂದರು.

ಇ.ಡಿ. ದಾಳಿ ರಾಜಕೀಯ ಪ್ರೇರಿತ ಎಂದು ಅನೇಕ ಬಾರಿ ಹೇಳಿದ್ದೀರಿ ಎಂದು ಕೇಳಿದಾಗ, ''ಈ ಪ್ರಕರಣ ನ್ಯಾಯಾಲಯದಲ್ಲಿದೆ, ಅವರು ಮುಡಾ ಕಚೇರಿಗೆ ಭೇಟಿ ನೀಡಿದ್ದಾರೆ. ನನಗೆ ಬಂದ ಮಾಹಿತಿ ಪ್ರಕಾರ ಇ.ಡಿ. ಅವರು ದಾಖಲೆಗಳನ್ನು ಕೇಳಿದ್ದರು, ಇವರು ದಾಖಲೆ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ದಾಖಲೆ ನೀಡುವುದು ತಡವಾಗಿರಬಹುದು, ಇದಕ್ಕಾಗಿ ಇಡಿ ಅವರೇ ಕಚೇರಿಗೆ ಹೋಗಿರಬಹುದು'' ಎಂದು ಹೇಳಿದರು.

ನೈಸ್ ರಸ್ತೆ ವಿಚಾರವಾಗಿ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ನೈಸ್ ವ್ಯಾಪ್ತಿಯಲ್ಲಿ ಅವರ ಆಸ್ತಿ ಎಷ್ಟಿದೆ ಎಂದು ಮೊದಲು ಬಹಿರಂಗಪಡಿಸಲಿ. ಸಮಯ ಬಂದಾಗ ನಾನು ಅದನ್ನು ಹೇಳುತ್ತೇನೆ'' ಎಂದು ತಿಳಿಸಿದರು.

ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಬಗ್ಗೆ ಕೇಳಿದಾಗ, ''ನಾನೇ ಅಭ್ಯರ್ಥಿ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಹಸ್ತದ ಗುರುತೇ ಅಭ್ಯರ್ಥಿ'' ಎಂದರು.

ಯಾವುದೇ ಸಮುದಾಯಕ್ಕೆ ಅನ್ಯಾಯವಾಗಬಾರದು:ಪಂಚಮಸಾಲಿ ಲಿಂಗಾಯತರ ಮೀಸಲಾತಿ ವಿಚಾರವಾಗಿ ಸಮುದಾಯದ ನಾಯಕರುಗಳ ಜೊತೆ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ಬಗ್ಗೆ ಮಾತನಾಡಿ, "ಯಾವುದೇ ಸಮುದಾಯಕ್ಕೆ ಅನ್ಯಾಯವಾಗಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ. ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದ್ದು ನಾವು ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಪಂಚಮಸಾಲಿ ಸಮುದಾಯದ ಜತೆ ಮತ್ತೆ ಚರ್ಚೆ ಮಾಡುತ್ತೇವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

"ಕಾಲಮಿತಿಯಲ್ಲಿ ಮೀಸಲಾತಿ ನೀಡಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಬೇರೆ ಸಮಾಜಗಳಿಗೆ ನೋವಾಗುವಂತೆ ತೀರ್ಮಾನ ಮಾಡಿತ್ತು. ನಂತರ ಆ ಸರ್ಕಾರವೇ ನಾವು ಯಾವುದೇ ಮೀಸಲಾತಿ ಜಾರಿ ಮಾಡುವುದಿಲ್ಲ ಎಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದೆ. ಈ ವಿಚಾರ ನ್ಯಾಯಾಲಯದಲ್ಲಿ ಇರುವಾಗ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ" ಎಂದು ತಿಳಿಸಿದರು.

"ಈಗ ಚುನಾವಣಾ ನೀತಿ ಸಂಹಿತೆ ಇದೆ. ಇದಾದ ನಂತರ ಸಭೆ ಕರೆದು ಮಾತನಾಡುತ್ತೇವೆ ಎಂದು ಸಮುದಾಯದ ಮುಖಂಡರುಗಳಿಗೆ ಗೌರವಯುತವಾಗಿ ಹೇಳಿದ್ದೇವೆ ಅವರ ಭಾವನೆ, ಕಳಕಳಿ ನಮಗೆ ಅರ್ಥವಾಗುತ್ತದೆ. ಮುಂದಿನ ದಿನಗಳಲ್ಲಿ ನಾವು ಅವರ ವಿಚಾರವನ್ನು ಪರಿಗಣಿಸುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ:ದೆಹಲಿ ನಾಯಕರು ಚನ್ನಪಟ್ಟಣ ಅಭ್ಯರ್ಥಿ ತೀರ್ಮಾನ ನನಗೆ ಬಿಟ್ಟಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ

ABOUT THE AUTHOR

...view details