ಕರ್ನಾಟಕ

karnataka

ETV Bharat / state

ಸಂಕಷ್ಟದಲ್ಲಿದ್ದ ದೇಶದ ಆರ್ಥಿಕ ಪರಿಸ್ಥಿತಿ ಸರಿಪಡಿಸಿದವರು ಮನಮೋಹನ್ ಸಿಂಗ್: ದೇವೇಗೌಡ - FORMER PM MANMOHAN SINGH

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅಗಲಿಕೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಂಬನಿ ಮಿಡಿದಿದ್ದಾರೆ. "ದೇಶದ ಗೌರವ ಉಳಿಸಲು ಅವರು ಆರ್ಥಿಕ ತಜ್ಞರಾಗಿ ಸೇವೆ ಸಲ್ಲಿಸಿದ್ದರು" ಎಂದು ಸ್ಮರಿಸಿದರು.

ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್,Manmohan Singh, HD Devegowda
ಮಾಜಿ ಪ್ರಧಾನಿ ದೇವೇಗೌಡ (ETV Bharat)

By ETV Bharat Karnataka Team

Published : Dec 27, 2024, 4:06 PM IST

ಬೆಂಗಳೂರು: "ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಸರಳ ಸಜ್ಜನ ವ್ಯಕ್ತಿ. ಸಂಕಷ್ಟದಲ್ಲಿದ್ದ ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಸರಿಪಡಿಸಲು ಸರ್ವ ಪ್ರಯತ್ನ ಮಾಡಿದ್ದಾರೆ" ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಇಂದು ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

"ಡಾ.ಮನಮೋಹನ್ ಸಿಂಗ್ 10 ವರ್ಷ ದೇಶ ಆಳಿದರು. ಇಂದಿರಾ ಗಾಂಧಿ ಬಿಟ್ಟ ಮೇಲೆ 10 ವರ್ಷ ದೇಶ ಆಳಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಐದು ವರ್ಷ ಹಣಕಾಸು ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 92 ವಯಸ್ಸಿನಲ್ಲಿ ಮನಮೋಹನ್ ಸಿಂಗ್ ನಮ್ಮನ್ನಗಲಿ ಹೋಗಿದ್ದಾರೆ. ಪ್ರಾಮಾಣಿಕ ವ್ಯಕ್ತಿ, ಸುದೀರ್ಘ ಸೇವೆ ಸಲ್ಲಿಸಿದ್ದಾರೆ" ಎಂದು ಗೌಡರು ಭಾವುಕರಾದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (ETV Bharat)

"ಇಂದು ಅತ್ಯಂತ ದುಃಖದ ದಿವಸ. ನಾನು ಮನಮೋಹನ್ ಸಿಂಗ್ ಅವರನ್ನು 1991ರಲ್ಲಿ ಲೋಕಸಭೆಯಲ್ಲಿ ನೋಡಿದ್ದೆ. ನಾನು ಕರ್ನಾಟಕದಿಂದ ಮೊದಲನೇ ಸಲ ಲೋಕಸಭೆಗೆ ಹೋಗಿದ್ದೆ. ಈ ದೇಶದ ಆರ್ಥಿಕತೆಯ ಉನ್ನತೀಕರಣಕ್ಕೆ ಶಕ್ತಿ ಮೀರಿ ಸೇವೆ ಸಲ್ಲಿಸಿದ್ದಾರೆ. ಮನಮೋಹನ್ ಸಿಂಗ್ ಅವರ ಸೇವೆಯನ್ನು ಸ್ಮರಿಸಿಕೊಳ್ಳಬೇಕು. ವಿಶ್ವಸಂಸ್ಥೆಯಲ್ಲಿ ಒಬ್ಬ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರ ತಂದೆ ಪಾಕಿಸ್ತಾನದಿಂದ ಬಂದಿದ್ದಾರೆ. ಆರ್ಥಿಕವಾಗಿ ಮನಮೋಹನ್ ಸಿಂಗ್ ತುಂಬಾ ಬುದ್ದಿವಂತರು. ಪಿ.ವಿ.ನರಸಿಂಹ ರಾವ್ ಪ್ರಧಾನ ಮಂತ್ರಿ ಆಗಿದ್ದಾಗ ದೇಶದ ಸ್ಥಿತಿ ತುಂಬಾ ಹದಗೆಟ್ಟಿತ್ತು. ನಮ್ಮ ದೇಶದ 130 ಟನ್ ಚಿನ್ನ ಅಡವಿಟ್ಟದ್ದರು. ನಮ್ಮ ದೇಶಕ್ಕೆ ಕೆಟ್ಟ ಪರಿಸ್ಥಿತಿ ಉಂಟಾಗುತ್ತಿತ್ತು. ನರಸಿಂಹ ರಾವ್ ಸರ್ಕಾರದಲ್ಲಿ ಈ ದೇಶದ ಗೌರವ ಉಳಿಸಲು ಆರ್ಥಿಕ ತಜ್ಞರಾಗಿ ಅವರು ಸೇವೆ ಮಾಡಿದ್ದಾರೆ" ಎಂದರು.

"ಮನಮೋಹನ್ ಸಿಂಗ್ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಮಾಡಿದ್ರು. ವಿದೇಶಿ ನೇರ ಬಂಡವಾಳ ಹೂಡಿಕೆ ಮೂಲಕ ಸುಧಾರಣೆ ತಂದಿದ್ರು. ಅದರಿಂದಾಗಿಯೇ ಇಡೀ ದೇಶದಲ್ಲಿ ಅವರ ಬಗ್ಗೆ ಗೌರವ ಇದೆ. ಸಂಕಷ್ಟದ ಸಮಯದಲ್ಲಿ ದೇಶದ ಪರಿಸ್ಥಿತಿ ಸರಿ ಮಾಡಿದ್ರು" ಎಂದು ದೇವೇಗೌಡರು ಶ್ಲಾಘಿಸಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು, ವೆಂಕಟರಾವ್ ನಾಡಗೌಡ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಮೇಶ್ ಗೌಡ ಮತ್ತಿತರ ಮುಖಂಡರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಆರ್ಥಿಕ ತಜ್ಞನ ರಾಜಕೀಯ ಹಾದಿ: 33 ವರ್ಷ ರಾಜ್ಯಸಭಾ ಸದಸ್ಯ, ಮೊದಲ ಲೋಕಸಭಾ ಚುನಾವಣೆಯಲ್ಲೇ ಸೋತಿದ್ದೇಕೆ?

ಇದನ್ನೂ ಓದಿ:ದೇಶದ ಆರ್ಥಿಕ ಚರಿತ್ರೆಯನ್ನೇ ಬದಲಿಸಿದ ಸಿಂಗ್: ಭಾರತದ ದೂರದೃಷ್ಟಿಯ ಮಹಾನ್​ ನಾಯಕ ’ಮನಮೋಹನ’

ಇದನ್ನೂ ಓದಿ: 1991.. ಅಂದಿನ ಕೇಂದ್ರ ಬಜೆಟ್​​​ ಮನಮೋಹನ್​ ಸಿಂಗ್​ ಸಮರ್ಥಿಸಿಕೊಂಡಿದ್ದು ಹೇಗೆ ಗೊತ್ತಾ?

ABOUT THE AUTHOR

...view details