ಬೆಂಗಳೂರು: "ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಸರಳ ಸಜ್ಜನ ವ್ಯಕ್ತಿ. ಸಂಕಷ್ಟದಲ್ಲಿದ್ದ ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಸರಿಪಡಿಸಲು ಸರ್ವ ಪ್ರಯತ್ನ ಮಾಡಿದ್ದಾರೆ" ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಇಂದು ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
"ಡಾ.ಮನಮೋಹನ್ ಸಿಂಗ್ 10 ವರ್ಷ ದೇಶ ಆಳಿದರು. ಇಂದಿರಾ ಗಾಂಧಿ ಬಿಟ್ಟ ಮೇಲೆ 10 ವರ್ಷ ದೇಶ ಆಳಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಐದು ವರ್ಷ ಹಣಕಾಸು ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 92 ವಯಸ್ಸಿನಲ್ಲಿ ಮನಮೋಹನ್ ಸಿಂಗ್ ನಮ್ಮನ್ನಗಲಿ ಹೋಗಿದ್ದಾರೆ. ಪ್ರಾಮಾಣಿಕ ವ್ಯಕ್ತಿ, ಸುದೀರ್ಘ ಸೇವೆ ಸಲ್ಲಿಸಿದ್ದಾರೆ" ಎಂದು ಗೌಡರು ಭಾವುಕರಾದರು.
"ಇಂದು ಅತ್ಯಂತ ದುಃಖದ ದಿವಸ. ನಾನು ಮನಮೋಹನ್ ಸಿಂಗ್ ಅವರನ್ನು 1991ರಲ್ಲಿ ಲೋಕಸಭೆಯಲ್ಲಿ ನೋಡಿದ್ದೆ. ನಾನು ಕರ್ನಾಟಕದಿಂದ ಮೊದಲನೇ ಸಲ ಲೋಕಸಭೆಗೆ ಹೋಗಿದ್ದೆ. ಈ ದೇಶದ ಆರ್ಥಿಕತೆಯ ಉನ್ನತೀಕರಣಕ್ಕೆ ಶಕ್ತಿ ಮೀರಿ ಸೇವೆ ಸಲ್ಲಿಸಿದ್ದಾರೆ. ಮನಮೋಹನ್ ಸಿಂಗ್ ಅವರ ಸೇವೆಯನ್ನು ಸ್ಮರಿಸಿಕೊಳ್ಳಬೇಕು. ವಿಶ್ವಸಂಸ್ಥೆಯಲ್ಲಿ ಒಬ್ಬ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರ ತಂದೆ ಪಾಕಿಸ್ತಾನದಿಂದ ಬಂದಿದ್ದಾರೆ. ಆರ್ಥಿಕವಾಗಿ ಮನಮೋಹನ್ ಸಿಂಗ್ ತುಂಬಾ ಬುದ್ದಿವಂತರು. ಪಿ.ವಿ.ನರಸಿಂಹ ರಾವ್ ಪ್ರಧಾನ ಮಂತ್ರಿ ಆಗಿದ್ದಾಗ ದೇಶದ ಸ್ಥಿತಿ ತುಂಬಾ ಹದಗೆಟ್ಟಿತ್ತು. ನಮ್ಮ ದೇಶದ 130 ಟನ್ ಚಿನ್ನ ಅಡವಿಟ್ಟದ್ದರು. ನಮ್ಮ ದೇಶಕ್ಕೆ ಕೆಟ್ಟ ಪರಿಸ್ಥಿತಿ ಉಂಟಾಗುತ್ತಿತ್ತು. ನರಸಿಂಹ ರಾವ್ ಸರ್ಕಾರದಲ್ಲಿ ಈ ದೇಶದ ಗೌರವ ಉಳಿಸಲು ಆರ್ಥಿಕ ತಜ್ಞರಾಗಿ ಅವರು ಸೇವೆ ಮಾಡಿದ್ದಾರೆ" ಎಂದರು.