ಕರ್ನಾಟಕ

karnataka

ಸಂತ್ರಸ್ತೆ ಅಪಹರಣ ಪ್ರಕರಣ: ಮಾಜಿ ಸಚಿವ ರೇವಣ್ಣ ಜಾಮೀನು ರದ್ದು ಕೋರಿರುವ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್ - Kidnapping case

By ETV Bharat Karnataka Team

Published : Jul 12, 2024, 9:40 PM IST

ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್​ ಡಿ ರೇವಣ್ಣ ಅವರಿಗೆ ನೀಡಲಾಗಿರುವ ಜಾಮೀನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

ಬೆಂಗಳೂರು: ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹೆಚ್​ ಡಿ ರೇವಣ್ಣಗೆ ವಿಚಾರಣಾಧೀನ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದು ಕೋರಿ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಜತೆಗೆ, ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಸತೀಶ್ ಬಾಬು ಅಲಿಯಾಸ್ ಸತೀಶ್ ಬಾಬಣ್ಣ, ಕೆ ಎ ರಾಜಗೋಪಾಲ್, ಹೆಚ್​ ಕೆ ಸುಜಯ್, ಹೆಚ್​ ಎನ್ ಮಧು, ಎಸ್ ಟಿ ಕೀರ್ತಿ ಜಾಮೀನು ಕೋರಿ ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಜುಲೈ 19ಕ್ಕೆ ಮುಂದೂಡಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್, ಎಲ್ಲಾ ಅರ್ಜಿಗಳ ಆಕ್ಷೇಪಣೆ ಸಿದ್ಧವಾಗಿದೆ. ನಾವು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿಗಾಗಿ ಕಾಯುತ್ತಿದ್ದೇವೆ. ಮುಂದಿನ ಬುಧವಾರದ ವೇಳೆಗೆ ಆಕ್ಷೇಪಣೆ ಸಲ್ಲಿಕೆ ಮಾಡಲಾಗುವುದು. ಜುಲೈ 19ರಂದು ವಿಚಾರಣೆ ಕೈಗೆತ್ತಿಕೊಳ್ಳಬಹುದು ಎಂದರು.

ಅರ್ಜಿದಾರರ ಪರವಾಗಿ ವಾದಿಸಿದ ವಕೀಲರು, ಈ ಪ್ರಕರಣಕ್ಕೆ ಎಫ್ಎಸ್ಎಲ್ ವರದಿಯ ಅಗತ್ಯವಿಲ್ಲ. ಮೊದಲ ಆರೋಪಿ ಹೆಚ್​ ಡಿ ರೇವಣ್ಣ ಈಗಾಗಲೇ ಜಾಮೀನಿನ ಮೇಲೆ ಹೊರಗಿದ್ದಾರೆ. ಅರ್ಜಿದಾರರು ಎರಡು ತಿಂಗಳಿಂದ ಕಸ್ಟಡಿಯಲಿದ್ದಾರೆ. ಅವರೆಲ್ಲರೂ ಕೃಷಿಕರಾಗಿದ್ದಾರೆ. ಏಳನೇ ಆರೋಪಿ ಕೆ ಎ ರಾಜಗೋಪಾಲ್ ಅವರಿಗೆ 71 ವರ್ಷ ವಯಸ್ಸಾಗಿದ್ದು, ಅವರಿಗೆ ಓಡಾಡಲು ಕಷ್ಟವಾಗಿದೆ ಎಂದು ವಿವರಿಸಿದರು.

ಇದಕ್ಕೆ ಪ್ರೊ. ಕುಮಾರ್, ಅರ್ಜಿದಾರ ಕಾಲಾಳುಗಳು ಸಂತ್ರಸ್ತೆ ಅಪಹರಣ ಪಿತೂರಿಯನ್ನು ಜಾರಿಗೊಳಿಸಿದ್ದಾರೆ. ಇಬ್ಬರು ಕಿಂಗ್​​ಪಿನ್​​ಗಳಾಗಿದ್ದು, ಅವರು ರಿಮೋಟ್ ಮೂಲಕ ನಿಯಂತ್ರಿಸಿದ್ದಾರೆ ಎಂದರು. ಪಕ್ಷಕಾರರ ವಾದ ಆಲಿಸಿದ ಪೀಠವು ಅಂತಿಮವಾಗಿ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿತು.

ಇದನ್ನೂ ಓದಿ:ಪೋಕ್ಸೋ ಪ್ರಕರಣದಲ್ಲಿ ಬಿಎಸ್​​ವೈಗೆ ಖುದ್ದು ಹಾಜರಾತಿಯಿಂದ ಹೈಕೋರ್ಟ್ ವಿನಾಯತಿ - High Court

ABOUT THE AUTHOR

...view details