ಹಾವೇರಿ: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ ಸೀಸನ್ 11' ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಹಳ್ಳಿ ಹೈದ ಹನುಮಂತು 5 ಕೋಟಿಗೂ ಹೆಚ್ಚು ಮತಗಳಿಂದ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹನುಮಂತ ಲಮಾಣಿ ಅವರ ಸ್ವಾಗತಕ್ಕೆ ಗ್ರಾಮದಲ್ಲಿ ಭರ್ಜರಿ ತಯಾರಿ ನಡೆದಿದೆ.
ಬಿಗ್ ಬಾಸ್ 11ರ ವಿಜೇತ ಹನುಮಂತು ಸ್ನೇಹಿತರ ಬಳಗದಲ್ಲೀಗ ಸಂಭ್ರಮದ ವಾತಾವರಣವಿದೆ. ಜಿಲ್ಲೆಯ ಸವಣೂರು ತಾಲೂಕು ಚಿಲ್ಲೂರುಬಡ್ನಿಗೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಬೆಂಗಳೂರಿನಿಂದ ನಿನ್ನೆ ರಾತ್ರಿ ಹನುಮಂತು ಅವರ ಅಣ್ಣ ಮಾರುತಿ ವಾಪಸಾಗಿದ್ದಾರೆ. ತಂದೆ-ತಾಯಿ, ಸ್ನೇಹಿತರು ಸಹ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ.
ಅವನು ಇಷ್ಟಪಟ್ಟ ಹುಡುಗಿಯೊಂದಿಗೆ ಮದುವೆ: ಹನುಮಂತು ಅಣ್ಣ ಮಾರುತಿ ಮಾತನಾಡಿ, ತಮ್ಮ ಸಂತಸ ವ್ಯಕ್ತಪಡಿಸಿದರು. ಹನುಮಂತು ಯಾವ ಹುಡುಗಿ ಇಷ್ಟಪಟ್ಟಿದ್ದಾನೋ ಅದೇ ಹುಡುಗಿ ಜೊತೆಗೆ ಮದುವೆ ಮಾಡುತ್ತೇವೆ. ಸಹೋದರನಾಗಿ ನಾನು ಮುಂದೆ ನಿಂತು ಮದುವೆ ಮಾಡಿಸುತ್ತೇನೆ. ಎಲ್ಲರನ್ನೂ ಮದುವೆಗೆ ಕರೆಯುತ್ತೇವೆ ಎಂದು ತಿಳಿಸಿದರು.
ನಟ ಸುದೀಪ್ ಸರ್ ಅವರನ್ನು ವೇದಿಕೆ ಮೇಲೆ ನೋಡಿದ್ದು ತುಂಬಾನೇ ಖುಷಿಯಾಯ್ತು. ಹನುಮಂತನ ಸ್ನೇಹಿತರು ಭಜನೆ ಮಾಡಿದ್ದು ಬಹಳ ಸಂತೋಷವಾಯ್ತು. ಚಿಕ್ಕವಯಸ್ಸಿನಲ್ಲೇ ಜಾನಪದ ಹಾಡು, ಭಜನೆ ಮಾಡಿಕೊಂಡು ಇಷ್ಟು ಎತ್ತರಕ್ಕೆ ಬೆಳೆದಿದ್ದಾನೆ. 5 ಕೋಟಿಗೂ ಹೆಚ್ಚು ಮತಗಳು ಬಂದಿವೆ. ಅಭಿಮಾನಿಗಳ ಆಶೀರ್ವಾದ ಹನುಮಂತು ಮೇಲಿದೆ. ಕರುನಾಡಿನ ಜನರ ಮನಗೆದ್ದಿದ್ದಾನೆ. ಅವನ ಸ್ನೇಹಿತರು ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದು ಮಾರುತಿ ತಿಳಿಸಿದರು.