ಕರ್ನಾಟಕ

karnataka

ETV Bharat / state

ತುಕ್ಕು ಹಿಡೀತಿವೆ ಹಾವೇರಿ ಜಾನುವಾರು ಮಾರುಕಟ್ಟೆ ಮಳಿಗೆಗಳು: ಇತ್ತ ವ್ಯಾಪಾರಕ್ಕೂ ಇಲ್ಲ, ಅತ್ತ ನಿರ್ವಹಣೆಯೂ ಇಲ್ಲ! - Haveri Cattle Market Stalls

ಪ್ರತಿ ಮಳಿಗೆಗೆ ತಿಂಗಳಿಗೆ 3,700 ರೂಪಾಯಿ ನಿಗದಿ ಮಾಡಿದ್ದ ಸಂದರ್ಭದಲ್ಲಿ ಯಾವುದೇ ವ್ಯಾಪಾರಸ್ಥರು ಬಾಡಿಗೆಗೆ ಪಡೆದಿರಲಿಲ್ಲ. ಹಾಗಾಗಿ ಇದೀಗ ಎಪಿಎಂಸಿ, 1,750 ರೂಪಾಯಿ ಬಾಡಿಗೆ ನಿಗದಿಸಿ ಮರು ಟೆಂಡರ್ ಕರೆದಿದೆ.

By ETV Bharat Karnataka Team

Published : Jul 10, 2024, 8:20 AM IST

Haveri cattle market stalls
ಜಾನುವಾರು ಮಾರುಕಟ್ಟೆ ಮಳಿಗೆಗಳು (ETV Bharat)

ಹಾವೇರಿ:ಜಾನುವಾರು ಮಾರುಕಟ್ಟೆಯಲ್ಲಿ ರೈತರು ಮತ್ತು ತರಕಾರಿ ವ್ಯಾಪಾರಿಗಳಿಗೆ ಅನುಕೂಲವಾಗಲೆಂದು ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಮಳಿಗೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿವೆ. ಇಲ್ಲಿ ಸುಮಾರು 38 ಮಳಿಗೆಗಳನ್ನು ನಿರ್ಮಿಸಲಾಗಿದೆ. ಜಾನುವಾರು ಮಾರುಕಟ್ಟೆ ಆವರಣದಲ್ಲಿರುವ ಈ ಮಳಿಗೆಗಳು ವರ್ತಕರಿಗೆ ಸಿಗದೆ ತುಕ್ಕು ಹಿಡಿಯುತ್ತಿವೆ.

ಒಂದು ವರ್ಷದ ಹಿಂದೆ ತರಕಾರಿ ವರ್ತಕರಿಗೆ ಎಪಿಎಂಸಿ ಅಧಿಕಾರಿಗಳು ಈ ಮಳಿಗೆಗಳನ್ನು ಖರೀದಿಸುವಂತೆ ತಿಳಿಸಿದ್ದರು. ಆದರೆ ಅಧಿಕ ದರದ ಕಾರಣದಿಂದಾಗಿ ವರ್ತಕರು ಖರೀದಿ ಬಿಟ್ಟು ಬಾಡಿಗೆಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅಧಿಕಾರಿಗಳು, ಅತ್ತ ದರ ಕಡಿಮೆ ಮಾಡದೆ, ಇತ್ತ ಬಾಡಿಗೆಯನ್ನೂ ನಿಗದಿ ಮಾಡದೆ ವರ್ಷಗಟ್ಟಲೆ ಖಾಲಿ ಬಿಟ್ಟಿದ್ದಾರೆ. ಇದರ ಪರಿಣಾಮ 38 ಮಳಿಗೆಗಳು ತುಕ್ಕು ಹಿಡಿಯುತ್ತಿವೆ.

ಕೆಲವು ಮಳಿಗೆಗಳಲ್ಲಿ ಕುರಿಗಳನ್ನು ಕಟ್ಟಲಾಗುತ್ತಿದೆ. ಇನ್ನು ಕೆಲವು ಮಳಿಗೆಗಳಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಕಿಟಕಿ ಬಾಗಿಲುಗಳು ಮಾಯವಾಗುತ್ತಿವೆ. ರಾತ್ರಿಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಾವೇರಿ ಲಾಲ್​ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿದ್ದ ತರಕಾರಿ ದಲ್ಲಾಳಿಗಳಿಗೆ ಎಪಿಎಂಸಿ ಅಧಿಕಾರಿಗಳು ಸುಸಜ್ಜಿತ ಮಳಿಗೆ ನೀಡುವ ಭರವಸೆ ನೀಡಿ ಜಾನುವಾರು ಮಾರುಕಟ್ಟೆಗೆ ಕರೆದುಕೊಂಡು ಬಂದಿದ್ದರು. ಆದರೆ ಸುಸಜ್ಜಿತ ಮಳಿಗೆ ಇಲ್ಲದೆ ದಲ್ಲಾಳಿಗಳು ಕಾಳುಕಡಿ ಮಾರುಕಟ್ಟೆ ಅವರಣದಲ್ಲಿ ಸಗಟು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಇದೀಗ ಮತ್ತೆ ಅಧಿಕಾರಿಗಳು ವರ್ತಕರನ್ನು ಸಂಪರ್ಕ ಮಾಡುವುದಾಗಿ ಹೇಳಿದ್ದಾರೆ.

ಅಲ್ಲದೆ ಕಡಿಮೆ ಬಾಡಿಗೆ ದರ ನಿಗದಿ ಮಾಡಿದರೆ ದಲ್ಲಾಳಿಗಳೂ ಸಹ ಮಳಿಗೆಗಳನ್ನು ಬಾಡಿಗೆಗೆ ಪಡೆಯುವ ಉತ್ಸಾಹದಲ್ಲಿದ್ದಾರೆ. ಆದಷ್ಟು ಬೇಗ ಅಧಿಕಾರಿಗಳು ತರಕಾರಿ ವರ್ತಕರಿಗೆ ಮಳಿಗೆಗಳನ್ನು ಹಸ್ತಾಂತರ ಮಾಡಬೇಕು. ಇದರಿಂದ ಕೊನೆಯಪಕ್ಷ ಮಳಿಗೆಗಳಿಗೆ ಕಳ್ಳ-ಕಾಕರಿಂದ ರಕ್ಷಣೆ ಸಿಕ್ಕಂತಾಗುತ್ತದೆ. 38 ಮಳಿಗೆಗಳಿಂದ ಪ್ರತಿ ತಿಂಗಳು ಎಪಿಎಂಸಿಗೆ ಲಕ್ಷಾಂತರ ರೂಪಾಯಿ ತೆರಿಗೆ ಬರುತ್ತದೆ. ತರಕಾರಿ ದಲ್ಲಾಳಿಗಳ ಜೊತೆಗೆ ಮಾರುಕಟ್ಟೆಗೆ ಬರುವ ರೈತರಿಗೂ ಅನುಕೂಲವಾಗುತ್ತದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜಾನುವಾರು ಮಾರುಕಟ್ಟೆ ಮಳಿಗೆಗಳು (ETV Bharat)

ವಿಪರ್ಯಾಸವೆಂದರೆ, ಕೃಷಿ ಮಾರುಕಟ್ಟೆ ಸಚಿವರೂ ಆಗಿರುವ (ಎಪಿಎಂಸಿ) ಶಿವಾನಂದ ಪಾಟೀಲ್ ಹಾವೇರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಹೀಗಿದ್ದೂ ಜಿಲ್ಲೆಯಲ್ಲಿ ಈ ರೀತಿಯಾದರೆ ಹೇಗೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು 38 ಮಳಿಗೆಗಳನ್ನು ಆದಷ್ಟು ಬೇಗ ಹಸ್ತಾಂತರಿಸಿ ಮಳಿಗೆಗಳು ಹಾಳಾಗದಂತೆ ಕಾಪಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹಾವೇರಿ ಎಪಿಎಂಸಿ ಕಾರ್ಯದರ್ಶಿ ಜಿ.ಬಿ.ಕಬ್ಬೆನಹಳ್ಳಿ, "ಇಲ್ಲಿ 38 ಮಳಿಗೆಗಳಿದ್ದು, ಇವುಗಳಿಗೆ ಜನವರಿ 2024ರಲ್ಲಿ ಗುತ್ತಿಗೆ ಕರೆಯಲಾಗಿತ್ತು. ಮಳಿಗೆ ಮತ್ತು ಮುಂದಿನ ಸ್ಥಳ ನಿಗದಿ ಮಾಡಿದ್ದರಿಂದ ಪ್ರತಿ ಮಳಿಗೆಗೆ ತಿಂಗಳಿಗೆ 3,700 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿತ್ತು. ಅಧಿಕ ದರ ಎಂದು ವರ್ತಕರು ಮಳಿಗೆ ತೆಗೆದುಕೊಳ್ಳಲು ಮುಂದಾಗಲಿಲ್ಲ. ಎಪಿಎಂಸಿ ಕೊನೆಗೆ ಮಳಿಗೆ ಇರುವ ಜಾಗವನ್ನು ಮಾತ್ರ ಪರಿಗಣಿಸಿ ಇದೀಗ 1,750 ರೂಪಾಯಿ ಬಾಡಿಗೆ ನಿಗದಿಸಿ ಮರು ಟೆಂಡರ್ ಕರೆಯಲಾಗಿದೆ. ಇದೇ 15ರಂದು ಟೆಂಡರ್ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಕುರಿತಂತೆ 42 ವರ್ತಕರು ಅರ್ಜಿ ತೆಗೆದುಕೊಂಡಿದ್ದಾರೆ. ಇದೇ 18ರಂದು ಟೆಂಡರ್ ಓಪನ್ ಮಾಡಿ ವರ್ತಕರಿಗೆ ಮಳಿಗೆಗಳನ್ನು ಶೀಘ್ರದಲ್ಲಿ ಹಸ್ತಾಂತರಿಸಲಾಗುವುದು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬ್ಯಾಡಗಿ ಮೆಣಸಿನಕಾಯಿ ದರ ಕುಸಿತ: ಕಚೇರಿಗೆ ಕಲ್ಲು ತೂರಿ, ವಾಹನಗಳಿಗೆ ಬೆಂಕಿಯಿಟ್ಟ ಬೆಳೆಗಾರರು - 144 ಸೆಕ್ಷನ್​ ಜಾರಿ

ABOUT THE AUTHOR

...view details