ದಾವಣಗೆರೆ :ಅವರೊಬ್ಬ ಜನ ಸೇವಕ. ಜನರ ಸೇವೆ ಮಾಡಲು ಗ್ರಾ ಪಂ ಸದಸ್ಯನಾಗಿ ಆಯ್ಕೆಯಾದ್ರು. ತನ್ನ ಕ್ಷೇತ್ರದ ಜನರಿಗೆ ಚಿಕ್ಕ ಸಮಸ್ಯೆ ಎದುರಾದರೂ ತಡಮಾಡದೇ ಧಾವಿಸಿ ಸಮಸ್ಯೆ ಬಗೆಹರಿಸುತ್ತಾ ಗ್ರಾಮದ ಕಣ್ಮಣಿ ಆಗಿದ್ದಾರೆ. ಆ ಗ್ರಾಪಂ ಸದಸ್ಯ ಅಲ್ಲಿನ ಜನರ ನೋವಿಗೆ ಧ್ವನಿಯಾಗಿ ನಿಲ್ಲುತ್ತಾ ಸದ್ದಿಲ್ಲದೆ ತಮ್ಮ ಕೈಲಾದಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಜನರಿಗೆ ಹತ್ತಿರವಾಗಿದ್ದ ಗ್ರಾಮ ಪಂಚಾಯ್ತಿ ಸದಸ್ಯನಿಗೆ ಇಡೀ ಗ್ರಾಮಸ್ಥರು ಸೇರಿ ಕನ್ಯೆ ನೋಡಿ, ಮದುವೆ ಮಾಡಿಸಿ ಹರಸಿ ಹಾರೈಸಿದ್ದಾರೆ.
ದಾವಣಗೆರೆ ತಾಲೂಕಿನ ಗುಡಾಳ್ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಒಬ್ಬ ದಲಿತ ಗ್ರಾ ಪಂ ಸದಸ್ಯನಿಗೆ ಜಾತಿ ವೈಮನಸ್ಸು ಬದಿಗೊತ್ತಿ ವಿಶೇಷವಾದ ಮದುವೆ ಮಾಡಿಸಿದ್ದಾರೆ. ಗುಡಾಳ್ ಗ್ರಾಮ ಪಂಚಾಯ್ತಿ ಸದಸ್ಯನಾಗಿರುವ ಅಂಜಿನಪ್ಪ ಗ್ರಾಮದ ಅದೆಷ್ಟೋ ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದಾರೆ. ಅಲ್ಲದೇ ಈ ದಲಿತ ಗ್ರಾಪಂ ಸದಸ್ಯನ ಕಂಡ್ರೆ ಗುಡಾಳ್ ಗ್ರಾಮದಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಆ ಊರಿನ ಜನರಿಗೆ ಆರೋಗ್ಯ ಸೇರಿದಂತೆ ಏನೇ ಸಮಸ್ಯೆ ಎದುರಾದ್ರೂ ಅಲ್ಲಿ 108 ಆಂಬ್ಯುಲೆನ್ಸ್ ರೂಪದಲ್ಲಿ ತನ್ನ ಬಳಿ ಇರುವ ಓಮಿನಿಯಲ್ಲಿ ತುರ್ತು ಸೇವೆ ನೀಡುತ್ತಿದ್ದಾರೆ.
ಇದರಿಂದ ಗ್ರಾಮದಲ್ಲಿ ಎಲ್ಲರಿಗೂ ಅಂಜಿನಪ್ಪ ಎಂದರೆ ಬಲು ಪ್ರೀತಿ. ಆ ಪ್ರೀತಿ ಮತವಾಗಿ ಸತತ ಮೂರನೇ ಬಾರಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದಾರೆ. ಗ್ರಾಮ ಪಂಚಾಯ್ತಿ ಸದಸ್ಯನಾಗಿರುವ ಅಂಜಿನಪ್ಪರ ಜನ ಸೇವೆ ಪರಿಗಣಿಸಿದ ಗ್ರಾಮಸ್ಥರು ಕನ್ಯೆ ಹುಡುಕಿ ಬದುಕು ಕಟ್ಟಿಕೊಟ್ಟಿದ್ದಾರೆ. 45 ವರ್ಷ ವಯಸ್ಸಿನ ಅಂಜಿನಪ್ಪ ತನ್ನ ತಂಗಿಯರಿಗೆ ಒಂದು ನೆಲೆ ಒದಗಿಸಬೇಕೆಂದು ಮದುವೆಯಾಗದೇ ವೈವಾಹಿಕ ಜೀವನಕ್ಕೆ ಅಲ್ಪವಿರಾಮ ನೀಡಿದ್ದರು. ಗ್ರಾಮಸ್ಥರಿಗೆ ಹತ್ತಿರವಾಗಿದ್ದ ಅಂಜಿನಪ್ಪ ಊರಿನ ಗ್ರಾಮಸ್ಥರ ಬಲವಂತ ಮತ್ತು ಅವರ ಮಾತಿಗೆ ಬೆಲೆ ನೀಡಿ ಹರಪನಹಳ್ಳಿ ತಾಲೂಕಿನ ಪಲ್ಲವಿ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗಳಿಗೆ ಇಡೀ ಊರಿನ ಜನ ಶುಭಾಶಯ ಕೋರಿದ್ದಾರೆ.
ಮದುವೆಯ ಎಲ್ಲ ಖರ್ಚನ್ನು ನೋಡಿಕೊಂಡ ಗ್ರಾಮಸ್ಥರು : ಈ ವೇಳೆ ಪ್ರತಿಕ್ರಿಯಿಸಿದ ಗ್ರಾಮಸ್ಥರಾದ ಪ್ರಕಾಶ್ ಅವರು, ಅಂಜಿನಪ್ಪ ಅವರು ಗುಡಾಳ್ ಗ್ರಾಮ ಪಂಚಾಯತ್ಗೆ ಮೂರು ಬಾರಿ ಆಯ್ಕೆಯಾಗಿ ಜನಮೆಚ್ಚುವ ಕೆಲಸ ಮಾಡಿದ್ದಾರೆ. ಕೆಳವರ್ಗದಿಂದ ಬಂದ ವ್ಯಕ್ತಿ ಅಂಜಿನಪ್ಪ ಅವರ ಮದುವೆ ಸಮಾರಂಭವನ್ನು ಜಾತಿಭೇದ ಇಲ್ಲದೇ ಗ್ರಾಮದ ಎಲ್ಲರೂ ನಿಂತು ಮಾಡ್ತಿದ್ದೇವೆ. ಎಲ್ಲಾ ವರ್ಗದವರು ಸೇರಿ ಈ ಪುಣ್ಯಕಾರ್ಯ ಮಾಡ್ತಿದ್ದೇವೆ. ಮದುವೆಯಲ್ಲಿ ಹಣವನ್ನು ಹೊರತು ಪಡಿಸಿ ನೀರಿನ ವ್ಯವಸ್ಥೆ, ಶಾಮಿಯಾನ, ಊಟದ ವ್ಯವಸ್ಥೆ, ಚೇರ್ ವ್ಯವಸ್ಥೆ ಎಲ್ಲ ಖರ್ಚು ಗ್ರಾಮಸ್ಥರೇ ನೋಡಿಕೊಂಡಿದ್ದಾರೆ ಎಂದಿದ್ದಾರೆ.