ಕರ್ನಾಟಕ

karnataka

ETV Bharat / state

''ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣಗಳ ಕಡಿವಾಣಕ್ಕೆ ಸರ್ಕಾರದಿಂದ ಶೀಘ್ರ ಸುಗ್ರೀವಾಜ್ಞೆ ಜಾರಿ'' - SATISH JARKIHOLI

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರದಿಂದ ಶೀಘ್ರವೇ ಸುಗ್ರೀವಾಜ್ಞೆ ಜಾರಿಯಾಗಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Government to soon issue ordinance to curb microfinance harassment cases: Satish Jarkiholi
ವಿವಿಧ ಬ್ಯಾಂಕ್, ಸಹಕಾರಿ ಸಂಘ, ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವ ಸತೀಶ್​ ಜಾರಕಿಹೊಳಿ. (ETV Bharat)

By ETV Bharat Karnataka Team

Published : Feb 1, 2025, 8:07 PM IST

ಬೆಳಗಾವಿ:ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ನೀಡುತ್ತಿರುವ ಕಿರುಕುಳ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಈಗಾಗಲೇ ಅನುಮೋದನೆ ಸಿಕ್ಕಿದ್ದು, ಸದ್ಯದಲ್ಲೇ ಜಾರಿಯಾಗಲಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಶನಿವಾರ ನಡೆದ ವಿವಿಧ ಬ್ಯಾಂಕ್/ಸಹಕಾರಿ ಸಂಘಗಳ/ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿವಿಧ ಬ್ಯಾಂಕ್, ಸಹಕಾರಿ ಸಂಘ, ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವ ಸತೀಶ್​ ಜಾರಕಿಹೊಳಿ. (ETV Bharat)

ಮನೆಗಳಿಗೆ ಹೋಗಿ ಕಿರುಕುಳ ನೀಡಬಾರದು. ಕಾನೂನು ಬದ್ಧವಾಗಿ ನೋಟಿಸ್ ಜಾರಿ ಮಾಡಬೇಕು. ಫೈನಾನ್ಸ್​ಗಳಿಂದ ಪಡೆದ ಸಾಲ ಮನ್ನಾ ಆಗುತ್ತಿದೆ ಎಂದು ಸಾರ್ವಜನಿಕ ವಲಯಗಳಲ್ಲಿ ನಂಬಿಕೆಯಿದೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಮಧ್ಯಪ್ರವೇಶಿಸಿದೆ. ಇದರಲ್ಲಿ ಸಾಲ ಮನ್ನಾ ಎಂಬ ಪ್ರಶ್ನೆಯೇ ಇಲ್ಲ. ನಿಯಮಾನುಸಾರ ಕಾಲಾವಕಾಶ ನೀಡಿ ಸಾಲ ಮರುಪಾವತಿ ಮಾಡಬೇಕು ಎಂದು ತಿಳಿಸಿದರು.

ವಿವಿಧ ಬ್ಯಾಂಕ್, ಸಹಕಾರಿ ಸಂಘ, ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವ ಸತೀಶ್​ ಜಾರಕಿಹೊಳಿ. (ETV Bharat)

ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಫೈನಾನ್ಸ್ ಸಂಸ್ಥೆಗಳ ಕಿರುಕುಳ ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆ ಮೂಲ ಕಾರಣ ಮಧ್ಯವರ್ತಿಗಳು. ಇವರು ಜನರ ದಾರಿ ತಪ್ಪಿಸಿ ಕಮಿಷನ್ ಪಡೆಯಲು ಸಬ್ಸಿಡಿ ಸಾಲ ಎಂದು ನಂಬಿಸಿ ಅವರ ಹೆಸರಲ್ಲಿ ಸಾಲ ಮಂಜೂರು ಮಾಡಿಸುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಧ್ಯವರ್ತಿಗಳಿಂದ ಸಬ್ಸಿಡಿ ಸಾಲ ಎಂದು ಮೋಸ ಮಾಡಿದ ಮಧ್ಯವರ್ತಿಗಳ ಮೇಲೆ ಕ್ರಮ ಜರುಗಿಸಿ, ಅವರಿಂದ ಸಾಲ ಮರು ಪಾವತಿಸುವ ಕೆಲಸವನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಮೈಕ್ರೋ ಫೈನಾನ್ಸ್​ಗಳು ಕಿರುಕುಳ ‌ನೀಡಿದರೆ‌ ಅಂತಹ ಫೈನಾನ್ಸ್​ಗಳ ವಿರುದ್ಧವಾಗಿ ಕ್ರಮ ತೆಗೆದುಕೊಳ್ಳಲು ಪೊಲೀಸ್​ ಇಲಾಖೆ ನಿರ್ದೇಶನ‌ ನೀಡಲಾಗಿದೆ ಎಂದರು.

ವಿವಿಧ ಬ್ಯಾಂಕ್, ಸಹಕಾರಿ ಸಂಘ, ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವ ಸತೀಶ್​ ಜಾರಕಿಹೊಳಿ. (ETV Bharat)

ಗ್ರಾಮೀಣ ಭಾಗದಲ್ಲಿ ಸಾಲದ ಕಂತು ಸಂಗ್ರಹಣೆಗೆ ಫೈನಾನ್ಸ್ ಸಿಬ್ಬಂದಿಗಳು ಮನೆಗಳಿಗೆ ಹೋದಲ್ಲಿ, ಸಾಲ ಪಡೆದವರು ಫೈನಾನ್ಸ್ ಸಿಬ್ಬಂದಿಗಳಿಗೆ ಹಣ ಪಾವತಿಸದೇ ನಿರಾಕರಿಸಿ ಮರಳಿ ಕಳುಹಿಸುವ ವರ್ತನೆಗಳು ಕಂಡು ಬರುತ್ತಿವೆ. ಇದರಿಂದ ಫೈನಾನ್ಸ್ ಸಿಬ್ಬಂದಿಗಳು ಕಂತು ಪಡೆಯಲು ಮನೆಗಳಿಗೆ ಹೋಗಲು ಹೆದರುವ ವಾತಾವರಣ ನಿರ್ಮಾಣವಾಗಿದೆ ಎಂದು ಫೈನಾನ್ಸ್ ಪ್ರತಿನಿಧಿಯೊಬ್ಬರೂ ತಮ್ಮ ಅಳಲು ತೋಡಿಕೊಂಡರು.

ಜಿಲ್ಲೆಯಲ್ಲಿ ಕೆಲವು ಫೈನಾನ್ಸ್​ಗಳಿಂದ ಮಾತ್ರ ಬಿರುಸಿನ ವರ್ತನೆಗಳು ಕಂಡು ಬಂದಿದ್ದು, ಉಳಿದ ಫೈನಾನ್ಸ್​ಗಳು ಯಥಾಸ್ಥಿತಿ ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಬಗ್ಗೆ ತಪ್ಪು ತಿಳುವಳಿಕೆ ಹೋಗುತ್ತಿದೆ. ವಂಚನೆ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಯಾವುದೇ ಫೈನಾನ್ಸ್​ಗಳಿಂದ ತೊಂದರೆಯಾಗಿಲ್ಲ. ಹಾಗಾಗಿ, ಫೈನಾನ್ಸ್​ಗಳು ಗ್ರಾಹಕರಿಂದ ಸಾಲ ಮರು ಪಾವತಿ ಪಡೆಯುವಲ್ಲಿ ಕಾನೂನು ಬದ್ಧ ವಸೂಲಾತಿಗೆ ಕ್ರಮ ವಹಿಸಬೇಕು ಸತೀಶ ಜಾರಕಿಹೊಳಿ‌ ಸೂಚಿಸಿದರು.

ವಿವಿಧ ಬ್ಯಾಂಕ್, ಸಹಕಾರಿ ಸಂಘ, ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವ ಸತೀಶ್​ ಜಾರಕಿಹೊಳಿ. (ETV Bharat)

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮಾತನಾಡಿ, ನೋಂದಣಿ ಇಲ್ಲದ ಫೈನಾನ್ಸ್ ಸಂಸ್ಥೆಗಳು ಸಾಲ ವಿತರಣೆ ಮಾಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ, ಸಹಕಾರ ಕಾಯ್ದೆಯಡಿಯಲ್ಲಿ ಅಂತಹ ಸಂಸ್ಥೆಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಿಯಮಾನುಸಾರ ನೋಂದಣಿ ಇಲ್ಲದ ಸಹಕಾರ ಸಂಸ್ಥೆಗಳು ಕೇವಲ ಶೇ. 14ರಷ್ಟು ಮಾತ್ರ ಬಡ್ಡಿ ವಿಧಿಸಬಹುದಾಗಿದೆ. ನೋಂದಣಿಯಾಗದ ಕಾರಣ ಇಂತಹ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಸಾರ್ವಜನಿಕರಿಗೆ ಸಂಸ್ಥೆಗಳಿಂದ ಕಿರುಕುಳ ಕೇಳಿ ಬಂದಲ್ಲಿ ಪೊಲೀಸ್ ಠಾಣೆಗೆ ದೂರು ದಾಖಲಿಸಬೇಕು. ಅದರ ಬದಲಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಡಾ. ಭೀಮಾಶಂಕರ ಗುಳೇದ ಕಿವಿಮಾತು ಹೇಳಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಸಾಲ ಮರುಪಾವತಿಯ ಸಾಮರ್ಥ್ಯದ ಆಧಾರದ ಮೇಲೆ ಸಾಲಗಳನ್ನು ನೀಡಬೇಕು. ಸಾರ್ವಜನಿಕರು ಏಜೆಂಟ್​ಗಳ ಮೂಲಕ ಸಾಲ ಪಡೆಯಬಾರದು. ಕೆಲವು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ವಸೂಲಿ ಸಂದರ್ಭದಲ್ಲಿ ಅವಾಚ್ಯ ಶಬ್ದಗಳ ಬಳಕೆ ಮಾಡುತ್ತಿರುವ ಘಟನೆಗಳ ವರದಿಗಳು ಬರುತ್ತಿವೆ. ಸಾಲ ಮರುಪಾವತಿಗೆ ಸೂಚನೆ ನೀಡಲು ಕಾಯ್ದೆಯಡಿ ಕೆಲವು ನಿಯಮಗಳಿವೆ. ಒಂದು ವೇಳೆ ಸಾಲ ಪಡೆದವರೊಂದಿಗೆ ಬೇಕಾಬಿಟ್ಟಿ ವರ್ತಿಸಿದಲ್ಲಿ ಅಂತಹ ಸಂಸ್ಥೆಗಳ ಮೇಲೆ ಮೊಕದ್ದಮೆ ದಾಖಲಿಸಬಹುದು ಎಂದು ಹೇಳಿದರು.

ಸಾಲ ಮರುಪಾವತಿಗೆ ಸಂಸ್ಥೆಗಳು ಕಾನೂನು ಮೂಲಕ ಮಾತ್ರ ವಸೂಲಿ ಮಾಡಬಹುದಾಗಿದೆ. ಸಾರ್ವಜನಿಕರಿಗೆ ತಿಳಿಹೇಳಿ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲಗಳನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ಸಭೆಯ ಬಳಿಕ ಸಚಿವ ಸತೀಶ ಜಾರಕಿಹೊಳಿ ಅವರು ವಿವಿಧೆಡೆಯಿಂದ ಆಗಮಿಸಿದ ಸಾರ್ವಜನಿಕರಿಂದ ಮನವಿ/ದೂರುಗಳನ್ನು ಸ್ವೀಕರಿಸಿದರು.

ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ ಹಾಗೂ ಸಹಕಾರ ಸಂಘಗಳ ಜಂಟಿ ನಿಬಂಧಕರು, ಸಹಕಾರ ಸಂಘಗಳ ಉಪನಿಬಂಧಕರು, ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಹಶೀಲ್ದಾರರು, ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕರು ಸೇರಿದಂತೆ ವಿವಿಧ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ:ಮೈಕ್ರೋ ಫೈನಾನ್ಸ್​​​​​​​ ಕಿರುಕುಳ: 2-3 ದಿನಗಳಲ್ಲಿ ಸುಗ್ರೀವಾಜ್ಞೆ ಬಗ್ಗೆ ಅಂತಿಮ ತೀರ್ಮಾನ- ಸಚಿವ ಪರಮೇಶ್ವರ್ - ORDINANCE ON MICRO FINANCE

ABOUT THE AUTHOR

...view details