ಕರ್ನಾಟಕ

karnataka

'ಹಿಂದುಗಳು ಹೆಚ್ಚು ಮಕ್ಕಳನ್ನು ಪಡೆಯಿರಿ, ಒಂದು ಮಗು ಸಾಕೆನಿಸಿದರೆ ಧರ್ಮ ಇರುವುದಿಲ್ಲ' - Ganapathi Sachchidananda Swamiji

By ETV Bharat Karnataka Team

Published : Sep 16, 2024, 8:50 AM IST

170ನೇ ವಿಶ್ವಧರ್ಮ ವಿಜಯ ಯಾತ್ರೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡುತ್ತಾ, ಧರ್ಮವನ್ನು ಉಳಿಸುವ ಸಲುವಾಗಿ "ಹಿಂದುಗಳು ಹೆಚ್ಚು ಮಕ್ಕಳನ್ನು ಪಡೆಯಿರಿ" ಎಂದು ಕರೆ ನೀಡಿದರು.

170ನೇ ವಿಶ್ವಧರ್ಮ ವಿಜಯ ಯಾತ್ರೆ ಪೂರೈಸಿದ ಸಲುವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣಪತಿ ಶ್ರೀ ಗುರುವಂದನೆ ಸ್ವೀಕಾರ
170ನೇ ವಿಶ್ವಧರ್ಮ ವಿಜಯ ಯಾತ್ರೆ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣಪತಿ ಶ್ರೀ ಗುರುವಂದನೆ ಸ್ವೀಕಾರ (ETV Bharat)

ಮೈಸೂರು:"ಹಿಂದುಗಳು ಹೆಚ್ಚು ಮಕ್ಕಳನ್ನು ಪಡೆಯಬೇಕು. ಮನೆಗೆ ಒಂದು ಮಗು ಸಾಕೆಂಬುದು ತಪ್ಪು. ಹಾಗೆ ಮಾಡುತ್ತಾ ಹೋದರೆ ಧರ್ಮ ಹೊರಟು ಹೋಗುತ್ತದೆ" ಎಂದು ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದ್ದಾರೆ.

ಜಿಲ್ಲಾ ಬ್ರಾಹ್ಮಣ ಮಹಾಸಭಾ ದತ್ತ ಸೇನೆ ಹಾಗೂ ಮೈಸೂರು ನಾಗರೀಕರು ಆಶ್ರಮದ ನಾದಮಂಟಪದಲ್ಲಿ 170ನೇ ವಿಶ್ವಧರ್ಮ ವಿಜಯ ಯಾತ್ರೆ ಪೂರೈಸಿದ ಸಲುವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.

"ಪ್ರತಿಯೊಬ್ಬರೂ ಎಲ್ಲ ಧರ್ಮವನ್ನೂ ಗೌರವಿಸಬೇಕು. ಸತ್ಯ ಮತ್ತು ದಯೆ ಇರಬೇಕು. ಯಾರೋ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿದರೆ, ಅವರು ಮನೆಯೇ ನಮ್ಮದೆಂದಾಗ ಸುಮ್ಮನಿರಬಾರದು. ಇನ್ನೊಬ್ಬರನ್ನು ಒಡೆದು ಬದುಕುವುದನ್ನು ಒಪ್ಪಲಾಗದು. ದತ್ತ ಜನಾಂಗದವರೆಲ್ಲ ಒಂದಾಗಬೇಕು" ಎಂದರು.

"ನಾವು ನಮ್ಮ ಧರ್ಮವನ್ನು ಉಳಿಸಿಕೊಳ್ಳಬೇಕಾದರೆ ಸಮುದ್ರಾಲೋಂಘನವನ್ನಾದರೂ ಮಾಡಿ ಧರ್ಮ ಪ್ರಚಾರ ನಡೆಸಬೇಕು. ನಾವು ಅಮೆರಿಕದಲ್ಲಿ ಎಂಟು ಚರ್ಚ್ ಖರೀದಿಸಿ ಆಶ್ರಮ ಕಟ್ಟಿದ್ದೇವೆ. ವಿದೇಶಿಗರು ಅಲ್ಲಿ ಆಶ್ರಮ ಕಟ್ಟಲು 58 ಕೋಟಿ ರೂ ಕೊಟ್ಟಿದ್ದಾರೆ. ಮನೆ ಕೂಡ ಇಲ್ಲದವರೂ ದೇಣಿಗೆ ನೀಡಿದ್ದಾರೆ. ನಾವು ಉಳಿಸಬೇಕಿರುವುದು ಜನಗಳ ಧರ್ಮವನ್ನು. ಇಲ್ಲವಾದರೆ ನಿಮ್ಮ ಮೊಮ್ಮಕ್ಕಳ ಕಾಲಕ್ಕೆ ಪರಿಣಾಮ ಏನಾಗುತ್ತದೋ ನೋಡಿ. ತೆನಾಲಿಯಲ್ಲಿ ಆಯೋಜಿಸಿದ್ದ ಹನುಮಾನ್​ ಚಾಲೀಸಾ ಕಾರ್ಯಕ್ರಮಕ್ಕೆ ಅಲ್ಲಿನ ಜನ ತಾವು ಬೆಳೆದಿದ್ದ ಬೆಳೆಯನ್ನೇ ಕಿತ್ತು ಜಮೀನು ಬಿಟ್ಟುಕೊಟ್ಟರು. ಧರ್ಮಾನುಷ್ಠಾನಕ್ಕೆ ನಾವು ಪ್ರೇರೇಪಿಸಿದರೆ ಜನರಲ್ಲಿ ಎಷ್ಟು ಉತ್ಸಾಹ ಇರುತ್ತದೆ ಎಂಬುದಕ್ಕೆ ಇದು ಸಾಕ್ಷಿ" ಎಂದು ತಿಳಿಸಿದರು.

"ಸಂಕಲ್ಪ ಮಾಡಿದರೆ ಪರಮಾತ್ಮ ಯಾವತ್ತಾದರೂ ನೀಡುತ್ತಾನೆ. ನಾನು 1976ರಿಂದ ವಿದೇಶಕ್ಕೆ ಹೋಗುತ್ತಿದ್ದೇನೆ. ವೆಸ್ಟ್ ಇಂಡಿಸ್​ನ ಗಯಾನ ಮುಂತಾದೆಡೆ ಹೋಗಿದ್ದೆ. ಅಲ್ಲಿ ಹೆಚ್ಚು ಹಿಂದುಗಳಿದ್ದು ಸುಮಾರು 180 ವರ್ಷದಿಂದ ನೆಲೆಸಿದ್ದಾರೆ. ಅವರೆಲ್ಲರೂ ಬಡವರು. ಗಯಾನದಲ್ಲಿ ಪ್ರಸಿದ್ಧ ಹಿಂದೂ ದೇವಾಲಯವಿದ್ದು, ಅಲ್ಲಿ ಪ್ರಾಣಿ ಬಲಿ ನೀಡಲಾಗುತ್ತಿತ್ತು. ನಮ್ಮನ್ನು ಆಹ್ವಾನಿಸಿದಾಗ ಬಲಿ ನಿಷೇಧಿಸಿದರೆ ಬರುವುದಾಗಿ ಷರತ್ತು ವಿಧಿಸಿದ್ದೆ. ಅದಕ್ಕೊಪ್ಪಿ ಅಲ್ಲಿ ಬಲಿ ನಿಷೇಧಿಸಿದ್ದಾರೆ" ಎಂದು ಸ್ವಾಮೀಜಿ ಹೇಳಿದರು.

ಶ್ರೀಗಳು ವಾಮನನಂತೆ ತ್ರಿವಿಕ್ರಮರು- ಡಾ.ಪಾವಗಡ ಪ್ರಕಾಶರಾವ್: ಹಿರಿಯ ವಿದ್ವಾಂಸ ಡಾ.ಪಾವಗಡ ಪ್ರಕಾಶರಾವ್​ ಮಾತನಾಡಿ, "ದೇಶದ ಯಾವ ಮುಖ್ಯಮಂತ್ರಿಯೂ 170 ಬಾರಿ ವಿದೇಶಕ್ಕೆ ಹೋದವರಿಲ್ಲ. ದತ್ತಾತ್ರೇಯನ ಅಂಶ ಇವರಲ್ಲಿ ಇದ್ದುದರಿಂದಲೇ ಇವರಿಂದ ಅನೇಕ ವಿಷಯಗಳು ಸಾಧ್ಯವಾಗಿದೆ. ವಿಶ್ವೇಶ್ವರಯ್ಯನವರು ಕನ್ನಡ ನಾಡು ಕಟ್ಟಿದರು. ಶ್ರೀಗಳು ದತ್ತ ಸಾಮ್ರಾಜ್ಯ ಕಟ್ಟಿದರು. ಇವರು ವಾಮನನಂತೆ ತ್ರಿವಿಕ್ರಮರು" ಎಂದರು ಶ್ಲಾಘಿಸಿದರು.

ಹಿರಿಯ ಪತ್ರಕರ್ತ ರವಿ ಹೆಗಡೆ, ಶ್ರೀ ದತ್ತ ವಿಜಯಾನಂದ ಸ್ವಾಮೀಜಿ, ಭಾನುಪ್ರಕಾಶ ಶರ್ಮ, ಶಾಸಕ ಟಿ.ಎಸ್.ಶ್ರೀವತ್ಸ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

ಇದನ್ನೂ ಓದಿ:ಜೋಕುಮಾರಸ್ವಾಮಿ ಹೊತ್ತು ಊರೂರು ತಿರುಗುವ ಮಹಿಳೆಯರು: ಈತನ ಪೂಜೆಯಲ್ಲಿದೆ ಜಾನಪದದ ಸೊಗಡು - JOKUMARASWAMY celebration

ABOUT THE AUTHOR

...view details