ಬೀದರ್ : ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ್ದ ವೇಳೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಬೀದರ್ ಜಿಲ್ಲೆಯ 6 ಜನರ ಮೃತದೇಹಗಳನ್ನು ಸೋಮವಾರ ಸ್ವಗ್ರಾಮಕ್ಕೆ ತರಲಾಯಿತು.
ಲಾಡಗೇರಿ ಗ್ರಾಮಕ್ಕೆ ಮೂರು ಫ್ರೀಜರ್ ಆಂಬ್ಯುಲೆನ್ಸ್ ಮೂಲಕ ಮೃತದೇಹಗಳನ್ನು ತರಲಾಯಿತು. ಶವಗಳನ್ನು ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸುಲೋಚನಾ, ಲಕ್ಷ್ಮಿ, ನೀಲಮ್ಮ, ಸಂತೋಷಕುಮಾರ್, ಸುನೀತಾ, ಕಲಾವತಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರು. ಇವರೆಲ್ಲರೂ ಸೋದರ ಸಂಬಂಧಿಕರು.
6 ಜನರ ಮೃತದೇಹ ಸಾಮೂಹಿಕ ಅಂತ್ಯಸಂಸ್ಕಾರ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ (ETV Bharat) ವಾರಾಣಸಿಯಿಂದ ಆಂಬ್ಯುಲೆನ್ಸ್ ಮೂಲಕ ತರಲಾದ ಮೃತದೇಹಗಳನ್ನು ಗುಮ್ಮೆ ಲೇಔಟ್ನಲ್ಲಿರುವ ರುದ್ರ ಭೂಮಿಯಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ಮಾಡಲಾಯಿತು.
ಫೆ. 21 ರಂದು ಕಾಶಿ ಬಳಿಯ ರೂಪಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಐವರು ಸಾವನ್ನಪ್ಪಿದರೆ, 7 ಮಂದಿ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ಫೆ. 23 ರಂದು ಮತ್ತೊಬ್ಬರು ಕೊನೆಯುಸಿರೆಳೆದಿದ್ದರು.
ಲಾರಿಗೆ ಹಿಂಬದಿಯಿಂದ ರಭಸವಾಗಿ ಕ್ರೂಸರ್ ಡಿಕ್ಕಿಯಾದ ಪರಿಣಾಮ ಐದು ಜನ ಸಾವನ್ನಪ್ಪಿದ್ದರು. ಬಳಿಕ ಭಾನುವಾರ ಓರ್ವ ಗಾಯಾಳು ಮೃತಪಟ್ಟಿದ್ದು, ಸಾವಿನ ಸಂಖ್ಯೆ 6ಕ್ಕೆ ಏರಿತ್ತು. ಇನ್ನುಳಿದ 6 ಜನರಿಗೆ ಚಿಕಿತ್ಸೆ ಮುಂದುವರಿದಿದೆ.
ಬೀದರ್ ಜಿಲ್ಲಾಡಳಿತ ಮೃತದೇಹಗಳನ್ನು ತರಲು ಸಾಕಷ್ಟು ಶ್ರಮಿಸಿದೆ. ಕುಂಭಮೇಳಕ್ಕೆ ತೆರಳಿದಾಗ ನಮ್ಮ ಜಿಲ್ಲೆಯಿಂದಲೇ ನಡೆದ ಎರಡನೇ ಅಪಘಾತ ಪ್ರಕರಣ ಇದಾಗಿದೆ. ಮೃತರೆಲ್ಲರೂ ಬಡ ಕುಟುಂಬಗಳಿಗೆ ಸೇರಿದವರು. ಅವರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಸರ್ಕಾರ ಕೊಡಬೇಕು. ಅವರ ಮಕ್ಕಳು ಅನಾಥರಾಗಿದ್ದು, ಅವರನ್ನು ನೋಡಿದ್ರೆ ಕರಳು ಕಿತ್ತುಬರುತ್ತದೆ. ಗಾಯಗೊಂಡವರು ಜಿಲ್ಲಾಸ್ಪತ್ರೆಗೆ ಬಂದು ದಾಖಲಾಗುತ್ತಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಕೋಲಿ ಸಮಾಜದ ಮುಖಂಡ ಜಗನ್ನಾಥ್ ಜಮಾದಾರ್ ಸರ್ಕಾರಕ್ಕೆ ಮನವಿ ಮಾಡಿದರು.
ಇದನ್ನೂ ಓದಿ : ಭೀಕರ ರಸ್ತೆ ಅಪಘಾತ: ಕುಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ ಐದು ಜನ ಸ್ಥಳದಲ್ಲೇ ಸಾವು; ಕುಟುಂಬಸ್ಥರ ಆಕ್ರಂದನ