ಕರ್ನಾಟಕ

karnataka

ETV Bharat / state

ಎಟಿಎಂ ಪಿನ್​ ನಂಬರ್ ಬದಲಿಸಿ ವೃದ್ಧನಿಗೆ ₹75 ಸಾವಿರ ವಂಚನೆ, ಇಬ್ಬರು ಅರೆಸ್ಟ್​ - ATM PIN Number Fraud - ATM PIN NUMBER FRAUD

ಎಟಿಎಂ ಕಾರ್ಡ್ ಪಿನ್​ ನಂಬರ್ ಬದಲಾಯಿಸಲು ಸಹಾಯ ಮಾಡುವ ನೆಪದಲ್ಲಿ ವೃದ್ಧ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣ ಎಗರಿಸಿದ್ದ ಬಿಹಾರದ ಇಬ್ಬರು ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.

ಎಟಿಎಂ ಪಿನ್​ ನಂಬರ್ ಬದಲಿಸಿ ವೃದ್ಧನಿಗೆ ₹75 ಸಾವಿರ ವಂಚನೆ - ಇಬ್ಬರು ಅರೆಸ್ಟ್​
ಆರೋಪಿಗಳಾದ ಚುನಿಲಾಲ್ ಕುಮಾರ್ ಹಾಗೂ ವಿವೇಕ್ ಕುಮಾರ್ (ETV Bharat)

By ETV Bharat Karnataka Team

Published : Aug 6, 2024, 9:33 PM IST

ಬೆಂಗಳೂರು: ಎಟಿಎಂ ಕಾರ್ಡ್ ಪಿನ್​ ನಂಬರ್ ಬದಲಾಯಿಸಲು ಸಹಾಯ ಮಾಡುವ ನೆಪದಲ್ಲಿ ವೃದ್ಧರೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ 75 ಸಾವಿರ ರೂಪಾಯಿ ಹಣ ಎಗರಿಸಿದ್ದ ಬಿಹಾರ ಮೂಲದ ಇಬ್ಬರು ವಂಚಕರನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚುನಿಲಾಲ್ ಕುಮಾರ್ ಹಾಗೂ ವಿವೇಕ್ ಕುಮಾರ್ ಬಂಧಿತರು. ಇವರಿಂದ ‌ನಿಷ್ಕ್ರಿಯಗೊಂಡಿರುವ ವಿವಿಧ‌ ಬ್ಯಾಂಕ್​ಗಳ 37 ಎಟಿಎಂ ಕಾರ್ಡ್​ಗಳು ಹಾಗೂ 7,500 ಸಾವಿರ ನಗದು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ.

ಆರು ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ ಆರೋಪಿಗಳು ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗಾರೆ ಕೆಲಸ‌ ಮಾಡುತ್ತಿದ್ದ ಇವರು, ಬಳಿಕ ವಂಚನೆಗೆ ಇಳಿದಿದ್ದರು. ಇದಕ್ಕಾಗಿ ಎಟಿಎಂ ಸೆಂಟರ್​ಗಳಿಗೆ ಬರುವ ಮುಗ್ಧರು, ವಯೋವೃದ್ಧರನ್ನು ಗುರಿಯಾಗಿಸಿಕೊಳ್ಳುತ್ತಿದ್ದರು.

ಚಿಕ್ಕಕಲ್ಲಸಂದ್ರ ನಿವಾಸಿಯಾಗಿರುವ ಸಂಜಯ್ ಸಿಂಗ್ ಎಂಬವರು ಜುಲೈ 15ರಂದು ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ಗೆ ತೆರಳಿ ಒಂದೂವರೆ ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದಾರೆ. ಬಳಿಕ ಎಟಿಎಂ ಪಿನ್​ ನಂಬರ್ ಮರೆತು ಹೋಗಿದ್ದರಿಂದ ಹೊಸ ಪಿನ್ ನಂಬರ್ ಸೆಟ್​ ಮಾಡಲು ಬ್ಯಾಂಕ್ ಪಕ್ಕದಲ್ಲಿದ್ದ ಎಟಿಎಂಗೆ ತೆರಳಿದ್ದಾರೆ. ತಮಗೆ ಪಿನ್ ನಂಬರ್ ಸೆಟ್​ ಮಾಡಲು ಆಗದಿದ್ದಾಗ ಇದೇ ಸಂದರ್ಭಕ್ಕಾಗಿ ಕಾದು ಕುಳಿತಿದ್ದ ವಂಚಕನನ್ನು ಕರೆದು ಪಿನ್ ನಂಬರ್ ಸೆಟ್​ ಮಾಡಿಕೊಡುವಂತೆ ಸಹಾಯ ಕೇಳಿದ್ದಾರೆ.

ಪೊಲೀಸರು ವಶಕ್ಕೆ ಪಡೆದ ಎಟಿಎಂ ಕಾರ್ಡ್​ಗಳು (ETV Bharat)

ಸಂಜಯ್ ಅವರಿಂದ‌ ಕಾರ್ಡ್ ಪಡೆದ ವಂಚಕ ತನಗೆ ಬೇಕಾದ ಪಿನ್​ ಸೆಟ್​ ಮಾಡಿ, ಬಳಿಕ ಸಂಜಯ್ ಅವರಿಗೆ ತನ್ನ ಬಳಿಯಿದ್ದ ನಿಷ್ಕ್ರಿಯಗೊಂಡ ಎಟಿಎಂ ನೀಡಿ ಪರಾರಿಯಾಗಿದ್ದಾನೆ. ಇದಕ್ಕೆ‌ ಮತ್ತೊಬ್ಬ ಆರೋಪಿ ಸಾಥ್ ನೀಡಿದ್ದ‌. ಇದಾದ ಕೆಲವೇ ಗಂಟೆಗಳಲ್ಲಿ ಸಂಜಯ್ ಅವರ ಮೊಬೈಲ್​ಗೆ 75 ಸಾವಿರ‌ ಹಣ‌ ಕಡಿತವಾಗಿರುವ ಬಗ್ಗೆ ಸಂದೇಶ ಬಂದಾಗ ತಾನು ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅವರು ದೂರು ದಾಖಲಿಸಿದ್ದರು.

ಈ ದೂರಿನಆಧಾರ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು,ಎಟಿಎಂ ಸೆಂಟರ್​ನ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ವಂಚಕರ ಚಹರೆ ಪತ್ತೆಯಾಗಿತ್ತು.‌ ಆರೋಪಿಗಳ ಜಾಡು ಹಿಡಿದಾಗ ಬಿಎಂಟಿಸಿ ಬಸ್ ಹತ್ತಿ ಚಿಕ್ಕದಾಸನಪುರ ಬಸ್ ನಿಲ್ದಾಣದಲ್ಲಿ ಇಳಿದು ಮನೆಗೆ ಹೋಗಿರುವುದು ಗೊತ್ತಾಗಿತ್ತು‌‌. ಖಚಿತ ಮಾಹಿತಿ ಮೇರೆಗೆ ಮನೆ ಪತ್ತೆ ಹಚ್ಚಿದ್ದಾಗ ಆರೋಪಿಗಳು ಬಿಹಾರಕ್ಕೆ ಹೋಗಿರುವುದು ತಿಳಿದು ಬಂದಿತ್ತು. ಬೆಂಗಳೂರಿಗೆ ಬರುವ ತನಕ‌ ಕಾದು ಆರೋಪಿಗಳನ್ನು ಬಂಧಿಸಲಾಗಿದೆ. ಅವರ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿ, 37 ಎಟಿಎಂ ಕಾರ್ಡ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ಪೊಲೀಸರಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಆರೋಪಿ ಬಂಧನ - EXTORTING FROM POLICE

ABOUT THE AUTHOR

...view details