ಮೈಸೂರು: "ನಮ್ಮ ಪಕ್ಷದ ಒಳಗೆ - ಹೊರಗೆ ಈಗ ಶತ್ರುಕಾಟ ಶುರುವಾಗಿದೆ. ಶತ್ರುಗಳ ಸಂಹಾರಕ್ಕೆ ಚಾಮುಂಡಿ ತಾಯಿಯಲ್ಲಿ ಪೂಜೆ ಸಲ್ಲಿಸಿದ್ದೇವೆ. ನಿಶ್ಚಿತವಾಗಿಯೂ ಶತ್ರು ನಾಶವಾಗುತ್ತದೆ" ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಯತ್ನಾಳ್ ಬೆಂಬಲಿಗರೇ ಇಲ್ಲದ ಒಬ್ಬ ನಾಯಕ. ಕಾಂಗ್ರೆಸ್ಗೆ ಬೈದರೆ ಪ್ರಚಾರ ಸಿಗುವುದಿಲ್ಲ ಎಂದು ಯಡಿಯೂರಪ್ಪ ಹಾಗೂ ಅವರ ಮಗನನ್ನು ಬೈಯುತ್ತಿದ್ದಾರೆ. ಆ ಮೂಲಕ ತಾನು ನಾಯಕನಾಗುತ್ತೇನೆ ಎಂದುಕೊಂಡಿದ್ದಾರೆ. ಎಲ್ಲವನ್ನು ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಯತ್ನಾಳ್ ಯಾತ್ರೆಯಲ್ಲಿ ಯಾವುದೇ ಬಿಜೆಪಿ ಕಾರ್ಯಕರ್ತರು ಭಾಗವಹಿಸುತ್ತಿಲ್ಲ. ಪಕ್ಷದ ಒಳಗೆ ಹೊರಗೆ ಇರುವ ಶತ್ರುಗಳ ಸಂಹಾರವನ್ನು ಪಕ್ಷ ಆದಷ್ಟು ಶೀಘ್ರ ಮಾಡಲಿ" ಎಂದು ಹೇಳಿದರು.
ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, "ನಮ್ಮ ಪಕ್ಷದಲ್ಲಿ ಇತ್ತೀಚೆಗೆ ಆಂತರಿಕ ಶತ್ರುಗಳ ಸಂಖ್ಯೆ ಜಾಸ್ತಿಯಾಗಿದೆ. ಶತ್ರುಗಳ ನಾಶವಾಗಲೇಬೇಕು. ಶತ್ರು ನಾಶಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ್ದೇವೆ. ಆದಷ್ಟು ಬೇಗ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುತ್ತಾರೆ" ಎಂದರು.