ಕರ್ನಾಟಕ

karnataka

ETV Bharat / state

ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾದ ಮನೆಗಳ ಫಲಾನುಭವಿಗಳಿಗೆ ಆರ್ಥಿಕ ನೆರವು: ಜಮೀರ್ ಅಹ್ಮದ್ - ರಾಜೀವ್ ಗಾಂಧಿ ವಸತಿ ನಿಗಮ

''ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾದ ಮನೆಗಳಿಗೂ ಫಲಾನುಭವಿಗಳ ವಂತಿಕೆ ತಗ್ಗಿಸಲು ಹೆಚ್ಚುವರಿ ಆರ್ಥಿಕ ನೆರವು ಒದಗಿಸಲಾಗುವುದು'' ಎಂದು ಪ್ರಶ್ನೋತ್ತರ ವೇಳೆ ಶಾಸಕ ಟಿ.ಎಸ್. ಶ್ರೀವತ್ಸ ಅವರ ಪ್ರಶ್ನೆಗೆ ಸಚಿವ ಜಮೀರ್ ಅಹ್ಮದ್ ಖಾನ್​ ಉತ್ತರ ನೀಡಿದರು.

Minister Zameer Ahmed Khan  Rajiv Gandhi Housing Corporation  Financial assistance  ರಾಜೀವ್ ಗಾಂಧಿ ವಸತಿ ನಿಗಮ  ಸಚಿವ ಜಮೀರ್ ಅಹ್ಮದ್ ಖಾನ್​
ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾದ ಮನೆಗಳ ಫಲಾನುಭವಿಗಳಿಗೆ ಆರ್ಥಿಕ ನೆರವು: ಸಚಿವ ಜಮೀರ್ ಅಹ್ಮದ್

By ETV Bharat Karnataka Team

Published : Feb 19, 2024, 2:31 PM IST

Updated : Feb 19, 2024, 2:39 PM IST

ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಮಾತನಾಡಿದರು.

ಬೆಂಗಳೂರು: ''ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾಗಿರುವ ಮನೆಗಳಿಗೂ ಫಲಾನುಭವಿಗಳ ವಂತಿಕೆಯನ್ನು ತಗ್ಗಿಸಲು ಸರ್ಕಾರದಿಂದ 5 ಲಕ್ಷ ರೂ.ಗಳ ಹೆಚ್ಚುವರಿ ಆರ್ಥಿಕ ನೆರವು ಕೊಡಿಸುವ ಬಗ್ಗೆ ಗಮನಹರಿಸಲಾಗುವುದು'' ಎಂದು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ವಿಧಾನಸಭೆಯಲ್ಲಿ ಭರವಸೆ ನೀಡಿದ್ಧಾರೆ.

ಸಿಎಂ ಜೊತೆ ಸಮಾಲೋಚನೆ - ಜಮೀರ್ ಅಹಮ್ಮದ್ ಖಾನ್:ಇಂದು (ಸೋಮವಾರ) ಪ್ರಶ್ನೋತ್ತರ ವೇಳೆ ಶಾಸಕ ಟಿ.ಎಸ್. ಶ್ರೀವತ್ಸ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ''ಮನೆ ನಿರ್ಮಾಣಗಳ ವೆಚ್ಚ 13 ಲಕ್ಷ ರೂ.ಗಳವರೆಗೂ ಹೆಚ್ಚಾಗಿದೆ. ಕೇಂದ್ರ ಸರ್ಕಾರ 1.50 ಲಕ್ಷ, ರಾಜ್ಯ ಸರ್ಕಾರ ಸಾಮಾನ್ಯ ವರ್ಗಕ್ಕೆ 1.50 ಲಕ್ಷ, ಎಸ್ಸಿ, ಎಸ್ಟಿ ಸಮುದಾಯದವರಿಗೆ 2 ಲಕ್ಷದಂತೆ ಸರಿಸುಮಾರು ಒಟ್ಟು 3 ಲಕ್ಷ ರೂ.ಗಳಷ್ಟು ಆರ್ಥಿಕ ನೆರವು ನೀಡುತ್ತಿದೆ. ಬಾಕಿ ಇರುವ 10 ಲಕ್ಷ ರೂ.ಗಳನ್ನು ಫಲಾನುಭವಿಗಳು ಭರಿಸಬೇಕಿದೆ. ಬಹುತೇಕ ಅರ್ಜಿ ಸಲ್ಲಿಸುವವರು ಬಡವರಾಗಿದ್ದು, ವಂತಿಕೆ ಭರಿಸಲು ಕಷ್ಟ ಪಡುತ್ತಿದ್ದಾರೆ. ಇದನ್ನು ಮನಗಂಡು ರಾಜ್ಯಸರ್ಕಾರ ಕೊಳಚೆ ಅಭಿವೃದ್ಧಿ ಮಂಡಳಿ ಮನೆ ನಿರ್ಮಾಣಗಳಿಗೆ ಹೆಚ್ಚಿನ ಆರ್ಥಿಕ ನೆರವು ಒದಗಿಸಿದ್ದು, ಫಲಾನುಭವಿಗಳ ಹೊರೆಯನ್ನು ಕಡಿಮೆ ಮಾಡಿದೆ. ಅದೇ ರೀತಿ ರಾಜೀವ್ ಗಾಂಧಿ ವಸತಿ ನಿಲಯದಿಂದ ನಿರ್ಮಿಸಲಾಗುವ ಮನೆಗಳ ವಂತಿಕೆಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ಮಾಡುತ್ತೇನೆ'' ಎಂದು ತಿಳಿಸಿದರು.

ಬಿಜೆಪಿ ಶಾಸಕರಿಂದ ಸಲಹೆ:ಈ ವೇಳೆ, ಬಿಜೆಪಿ ಶಾಸಕರು ಮಧ್ಯಪ್ರವೇಶಿಸಿ ಹಲವು ಸಲಹೆಗಳನ್ನು ನೀಡಿದರು. ಪ್ರಶ್ನೆ ಕೇಳಿದ ಶಾಸಕ ಶ್ರೀವತ್ಸಾ ಅವರು, ''ಸರ್ಕಾರ ನಿರ್ಮಾಣ ಯೋಜನೆಯನ್ನು ಪ್ರಾರಂಭಿಸಿದರೆ, ಫಲಾನುಭವಿಗಳಿಗೆ ಬ್ಯಾಂಕ್‍ಗಳಿಂದ ಅಗತ್ಯ ನೆರವು ಮಂಜೂರಾತಿಗೆ ಎಲ್ಲಾ ಸಿದ್ಧತೆಗಳಾಗಿವೆ'' ಎಂದು ಸಚಿವರ ಗಮನ ಸೆಳೆದರು.

''ಕೃಷ್ಣರಾಜ ಕ್ಷೇತ್ರದಲ್ಲಿ ವಸತಿ ಯೋಜನೆಗೆ ಭೂಮಿ ಹಸ್ತಾಂತರವಾಗಿಲ್ಲ. ಭೂಮಿ ದೊರಕಿಸಿಕೊಟ್ಟರೆ ನಿರ್ಮಾಣ ಕಾಮಗಾರಿಯನ್ನು 2 ವರ್ಷದಲ್ಲೇ ಪೂರ್ಣಗೊಳಿಸುತ್ತೇವೆ'' ಎಂದು ಭರವಸೆ ನೀಡಿದರು.

ಮಂಡ್ಯ ಕ್ಷೇತ್ರದ ರವಿಕುಮಾರ್ ಗೌಡ ಗಣಿಗ ಅವರು ವಕ್ಫ್ ಆಸ್ತಿಗಳ ಕುರಿತು ಪ್ರಶ್ನೆ ಕೇಳಿದರು. ಅದಕ್ಕೆ ಸಚಿವ ಜಮೀರ್ ಅಹಮ್ಮದ್ ಖಾನ್ ಉತ್ತರ ನೀಡಿದರು. ಸಚಿವರ ಉತ್ತರ ತೃಪ್ತಿ ನೀಡಿದೆ ಎಂದು ಶಾಸಕರು ಉಪಪ್ರಶ್ನೆಗಳಿಲ್ಲದೆ ಕುಳಿತುಕೊಂಡರು. ಈ ಸಂದರ್ಭದಲ್ಲಿ ಸದನ ನಗೆಗಡಲ್ಲಲ್ಲಿ ತೇಲಿತು.

ಇದನ್ನೂ ಓದಿ:ಸರ್ಕಾರಿ, ಅನುದಾನಿತ ಶಾಲೆಗಳ ಹುದ್ದೆ ಭರ್ತಿಗೆ ಒಂದೇ ಮಾನದಂಡ: ಮಧು ಬಂಗಾರಪ್ಪ

Last Updated : Feb 19, 2024, 2:39 PM IST

ABOUT THE AUTHOR

...view details