ಕರ್ನಾಟಕ

karnataka

ಚೆನ್ನೈನಲ್ಲಿ 'ನಮ್ಮ ನೀರು ನಮ್ಮ ಹಕ್ಕು' ಘೋಷಣೆಯೊಂದಿಗೆ ಹೋರಾಟ ಮಾಡಿ: ಕಾಂಗ್ರೆಸ್​​ಗೆ ಆರ್​ ಅಶೋಕ್​ ಸಲಹೆ - R Ashok advice to Congress

By ETV Bharat Karnataka Team

Published : Mar 21, 2024, 6:40 PM IST

Updated : Mar 21, 2024, 9:09 PM IST

ರಾಜ್ಯ ಕಾಂಗ್ರೆಸ್ ​ನಾಯಕರು ಚೆನ್ನೈನಲ್ಲಿ ಡಿಎಂಕೆ ಕಚೇರಿ ಮುಂದೆ 'ನಮ್ಮ ನೀರು ನಮ್ಮ ಹಕ್ಕು' ಘೋಷಣೆಯೊಂದಿಗೆ ಹೋರಾಟ ಮಾಡಬೇಕು ಎಂದು ಆರ್​.ಅಶೋಕ್ ಸಲಹೆ ನೀಡಿದ್ದಾರೆ​.

ಚೆನ್ನೈನಲ್ಲಿ 'ನಮ್ಮ ನೀರು ನಮ್ಮ ಹಕ್ಕು' ಘೋಷಣೆಯೊಂದಿಗೆ ಹೋರಾಟ ಮಾಡಿ: ಆರ್.ಅಶೋಕ್​ ಸಲಹೆ
ಚೆನ್ನೈನಲ್ಲಿ 'ನಮ್ಮ ನೀರು ನಮ್ಮ ಹಕ್ಕು' ಘೋಷಣೆಯೊಂದಿಗೆ ಹೋರಾಟ ಮಾಡಿ: ಆರ್.ಅಶೋಕ್​ ಸಲಹೆ

ಬಿಜೆಪಿ ಪ್ರತಿಪಕ್ಷ ನಾಯಕ ಆರ್.ಅಶೋಕ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ತಮಿಳುನಾಡಿಗೆ ಕಾಂಗ್ರೆಸ್​​​ನ 136 ಜನ ಶಾಸಕರನ್ನು ಕರೆದುಕೊಂಡು ಹೋಗಿ ಅಲ್ಲೇ ಕಾಫಿ ಕುಡಿದು ಚೆನ್ನೈನಲ್ಲಿ ಡಿಎಂಕೆ ಕಚೇರಿ ಮುಂದೆ 'ನಮ್ಮ ನೀರು ನಮ್ಮ ಹಕ್ಕು' ಘೋಷಣೆಯೊಂದಿಗೆ ಹೋರಾಟ ಮಾಡಬೇಕು, ರಾಜ್ಯದ ಹಿತ ಮುಖ್ಯಾನಾ.? ಡಿಎಂಕೆ ಮೈತ್ರಿ ಮುಖ್ಯಾನಾ ಅನ್ನೋದನ್ನ ಸಾಬೀತುಪಡಿಸಬೇಕು ಎಂದು ಬಿಜೆಪಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿರೋ ದುರ್ಬಲ ಸರ್ಕಾರವನ್ನು ಬಳಸಿಕೊಂಡು ಐಎನ್​ಡಿಐಎ ಪಾಲುದಾರ ಡಿಎಂಕೆ ಪ್ರಣಾಳಿಕೆಯಲ್ಲಿ ಕರ್ನಾಟಕದ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಿಡಲ್ಲ ಅಂತ ಪ್ರಕಟಿಸಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಮ್ಮ‌ನೀರು, ನಮ್ಮ‌ಹಕ್ಕು ಅಂತ‌ ಪಾದಯಾತ್ರೆ ಮಾಡಿದ್ದರು. ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ಮಾಡಬಾರದು, ಆದರೂ ಮಾಡಿದ್ದರು.

ಈಗ ಅವರದ್ದೇ ಪಾರ್ಟನರ್, ಕ್ಲೋಸ್ ಫ್ರೆಂಡ್ ಸ್ಟಾಲಿನ್. ನಗುಮುಖದ ಸ್ಟಾಲಿನ್ ಮೇಕೆದಾಟು ಯೋಜನೆಗೆ ಅವಕಾಶ ನೀಡುವುದಿಲ್ಲ ಎನ್ನುವುದನ್ನು ಪ್ರಣಾಳಿಕೆಯಲ್ಲಿಯೇ ಹೇಳಿದ್ದಾರೆ, ಮೇಕೇದಾಟು ಪ್ರಾರಂಭ ಆದಾಗ ಡಿಕೆ ಶಿವಕುಮಾರ್ ಮೈ ತುಂಬಾ ಸ್ನಾನ ಮಾಡಿದ್ದರು. ಈಗ ಕುಡಿಯೋಕೂ ನೀರಿಲ್ಲ. ನಾನು ಕಂಡಂತೆ ಇದೇ ಮೊದಲು ಇಷ್ಟು ಸಮಸ್ಯೆ ಬಂದಿದೆ. ಶಾಡೋ ಸಿಎಂ ಒಳ್ಳೆಯ ಸಲಹೆ ಕೊಟ್ಟರೆ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಅದರಂತೆ ನಮ್ಮ‌ಹಣ, ನಮ್ಮ‌ತೆರಿಗೆ ಅಂತ ದೆಹಲಿಗೆ ಹೋದ ರೀತಿ ಈಗ ತಮಿಳುನಾಡಿಗೆ 135 ಶಾಸಕರನ್ನ ಕರೆದುಕೊಂಡು ಹೋಗಿ ಅಲ್ಲೇ ಪ್ರತಿಭಟನೆ ಮಾಡಿ ಎನ್ನುವ ಸಲಹೆ ನೀಡಿದರು. ರಾಜ್ಯದ ಹಿತ ಮುಖ್ಯಾನಾ.? ಡಿಎಂಕೆ ಮೈತ್ರಿ ಮುಖ್ಯಾನಾ ಅನ್ನೋದನ್ನ ಸಾಬೀತುಪಡಿಸಿ. ಮೈತ್ರೀನಾ, ರಾಜ್ಯದ ಹಿತಾನಾ.? ಗೋವಾದಲ್ಲಿ ಸೋನಿಯಾ ಗಾಂಧಿ ಅವರು ಒಂದು ಹನಿ ನೀರನ್ನು ಕೊಡಲ್ಲ ಅಂತ ಹೇಳಿದ್ದರು ‌ಈಗ ಮತ್ತೊಮ್ಮೆ ಡಿಎಂಕೆ ಮೂಲಕ ಹೇಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಸ್ಪಷ್ಟನೆ ನೀಡಬೇಕು. ಪಾದಯಾತ್ರೆ ಬಗ್ಗೆ ಗಿಮಿಕ್ಸ್ ಅಂತ ತಿಳ್ಕೋತೀವಿ. ಪಾದಯಾತ್ರೆ ತಳ್ಳಾಟ, ನೂಕಾಟ, ಓಲಾಟದ ಬಗ್ಗೆ ಸ್ಪಷ್ಟಪಡಿಸಿ, ರಾಜ್ಯದ ಜನತೆ ನಿಮ್ಮನ್ನು ನಂಬಬೇಕಿದ್ದರೆ, ನುಡಿದಂತೆ ನಡೆಯುವವರು ಎಂದು ತೋರಿಸುವುದಾದರೆ ಮೈತ್ರಿ ಮುಖ್ಯವೇ ರಾಜ್ಯದ ಹಿತ ಮುಖ್ಯವೇ ಎಂದು ತೀರ್ಮಾನ ಮಾಡಿ ಎಂದು ಆಗ್ರಹಿಸಿದರು.

ಏನಿಲ್ಲ ಏನಿಲ್ಲ- ಬೆಂಗಳೂರಿನಲ್ಲಿ ನೀರಿಲ್ಲ:ಡಿಸಿಎಂಅವರು ಮೇಕೆದಾಟು ಪಾದಯಾತ್ರೆ ವೇಳೆ ಅಲ್ಲಿ ಸ್ನಾನ ಮಾಡಿದ್ದರು ಎಂದು ಫೋಟೊ ಪ್ರದರ್ಶಿಸಿದ ಅವರು, ಈಗ ಬೆಂಗಳೂರಿನಲ್ಲಿ ಸ್ನಾನಕ್ಕಲ್ಲ; ಮುಖ ತೊಳೆದುಕೊಳ್ಳಲೂ ನೀರಿಲ್ಲ. ನೀರಿನ ಕೊರತೆ ಪರಿಣಾಮವಾಗಿ ಬೆಂಗಳೂರಿನ ಜನರು ಗುಳೆ ಹೋಗುತ್ತಿದ್ದಾರೆ. ನಾನು ಬೆಂಗಳೂರಿನ ಒಬ್ಬ ನಿವಾಸಿ. ಕಳೆದ 50 ವರ್ಷಗಳಿಂದ ನೋಡುತ್ತಿದ್ದೇನೆ. ಯಾವತ್ತೂ ಈ ರೀತಿ ಆಗಿಲ್ಲ. ಏನಿಲ್ಲ ಏನಿಲ್ಲ- ನೀರಿಲ್ಲ ನೀರಿಲ್ಲ ಎಂಬ ಸ್ಥಿತಿ ಬೆಂಗಳೂರಿನದು ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಎಂಪಿಗಳ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಂಟು ಕೇಸ್ ದಾಖಲು ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಹಿಂದೆ ಇದ್ದಾಗಲೂ ಸಿದ್ದರಾಮಯ್ಯ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ಆಗಲೂ ಹಲ್ಲೆ, ಕೊಲೆ ನಡೆದಿದೆ. ಈಗ ಎಂಟು ಕೇಸ್ ಹಾಕಿದ್ದಾರೆ. ಎಂಟಲ್ಲ, ಎಂಬತ್ತು ಹಾಕಿದರೂ ನಾವು ಫೇಸ್ ಮಾಡುತ್ತೇವೆ ಎಂದರು.

ಚುನಾವಣಾ ಬಾಂಡ್ ವಿಚಾರದ ಕುರಿತು ಕಾಂಗ್ರೆಸ್ ಆರೋಪಕ್ಕೆ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಅವ್ಯವಹಾರ ಆಗಿದೆ ಎಂದು ಕೇಸ್ ಹಾಕಿದ್ದಾರೆ. ಹಣ ಪಡೆದಿರೋದನ್ನ ವಾಪಸ್ ಕೊಟ್ಟು, ಇನ್ನಷ್ಟು ಉಗ್ರವಾಗಿ ಹೋರಾಟ ಮಾಡಿ. ಬಿಜೆಪಿಗೆ ಶೇ 30ರಷ್ಟು ಹಣ ಬಂದಿದೆ. ಇತರ ಪಕ್ಷಗಳಿಗೂ ಶೇ 70ರಷ್ಟು ಹಣ ಬಂದಿದೆ. ಇವರಿಗೂ ಶೇ 17ರಷ್ಟು ಹಣ ಬಂದಿದೆ. ಅವರು ಚುನಾವಣಾ ಬಾಂಡ್ ಹಣ ವಾಪಸ್ ನೀಡಿ, ಮತ್ತಷ್ಟು ಉಗ್ರ ಹೋರಾಟ ಮಾಡಲಿ. ಆ ಬಳಿಕ ನಾನು ಉತ್ತರ ಕೊಡುತ್ತೇನೆ ಎಂದರು.

ತರ್ಪಣ ಬಿಡಿ:ಬೆಂಗಳೂರಿನ ನೀರಿನ ಸಮಸ್ಯೆ ಸಮಸ್ಯೆ ಬಗ್ಗೆ ಸಿಎಂ ಮೂರು ಸಭೆ ಮಾಡಿದ್ದಾರೆ. ಅದರ ಔಟ್ ಕಮ್ ಏನು.? ಟ್ಯಾಂಕರ್ ಬಗ್ಗೆ ಮಾಹಿತಿ ಇಲ್ಲ, ರಿಜಿಸ್ಟ್ರೇಷನ್ ಕೂಡ ಮಾಡಿಲ್ಲ. ನೀರನ್ನ ಹೇಗೆ ಸಪ್ಲೈ ಮಾಡಬೇಕು ಅಂತ ಯೋಚನೆ‌ ಮಾಡದ ಸರ್ಕಾರ ಇದು, ವಾರ ಕಳೆದರೆ ಸ್ನಾನ ಕೂಡ ಮಾಡಬೇಡಿ ಅಂತಾರೆ. ಇವರೊಬ್ಬರು ವೀಕ್ ಸಿಎಂ. ಟ್ಯಾಂಕರ್ ಮಾಫಿಯಾಗೆ ಫುಲ್ ತಲೆ ಬಾಗಿದ್ದಾರೆ. ಮತ್ತೊಂದು ಕಡೆ ಪರೀಕ್ಷೆ ನಡೆಯುತ್ತಿದೆ, ಹಳ್ಳಿಕಡೆ ವಿದ್ಯುತ್ ಕೊರತೆ ಇದೆ. ಈ ಸರ್ಕಾರ ಪಾಪರ್ ಆಗಿದೆ ಅಂದರೆ ಯಾರೂ ಒಪ್ಪಲಿಲ್ಲ ಎಂದು ಟಾಂಗ್​ ನೀಡಿದರು.

ಡಿವಿಎಸ್​ಗೆ ಒಳ್ಳೆಯದಾಗಲಿದೆ:ಸದಾನಂದಗೌಡ ನಮ್ಮ ಪಕ್ಷದ ಹಿರಿಯ ನಾಯಕರು. ನಾನು ಅವರ ಜೊತೆ ಮಾತನಾಡಿದೆ. ಅವರು ನಮ್ಮ‌ ಜೊತೆ ಕೆಲಸ‌ ಮಾಡೋದಾಗಿ ಹೇಳಿದ್ದಾರೆ. ಸದಾನಂದಗೌಡರು ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದು ನಿಜ. ನಾನೊಬ್ಬನೇ ಅಲ್ಲ, ಬೆಂಗಳೂರಿನ ಎಲ್ಲರೂ ಮನವಿ ಮಾಡಿದ್ದೆವು. ಆದರೆ, ಹೈಕಮಾಂಡ್ ನಿರ್ಧಾರ ಅದು. ಶೋಭಾ ಕರಂದ್ಲಾಜೆ ಅವರನ್ನ ಕಳಿಸಿದ್ದಾರೆ. ಹಾಗಾಗಿ ಸದಾನಂದಗೌಡರಿಗೆ ಟಿಕೆಟ್ ಕೈ ತಪ್ಪಿದೆ. ಎಲ್ಲವೂ ಸರಿ ಆಗಲಿದೆ. ಸದಾನಂದ ಗೌಡರ ಒಳ್ಳೆಯದಕ್ಕೆ ನಾವು ಪ್ರಯತ್ನ ಮಾಡಿದ್ದೇವೆ. ಮುಂದೆಯೂ ಅವರಿಗೆ ಒಳ್ಳೆಯದು ಆಗಬೇಕು. ಅವರು ನಮ್ಮ ನಾಯಕರು ಎಂದರು. ಈಶ್ವರಪ್ಪ, ಮಾಧುಸ್ವಾಮಿ ರೆಬೆಲ್ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ನಾನೂ ಕೂಡ ಅವರ ಜೊತೆ ಮಾತನಾಡಿದ್ದೇನೆ. ಮಾಧುಸ್ವಾಮಿ ಅವರ ಜೊತೆ ಯಡಿಯೂರಪ್ಪ ಅವರು ಮಾತನಾಡಿದ್ದಾರೆ ಎಲ್ಲ ಸರಿಹೋಗಬಹುದು ಎಂದರು.

ಇದನ್ನೂ ಓದಿ:ತಮಿಳುನಾಡು ಏನಾದರೂ ಮಾಡಲಿ, ನಾನು ಮೇಕೆದಾಟು ಕಟ್ಟಲೆಂದೇ ನೀರಾವರಿ ಸಚಿವನಾಗಿದ್ದೇನೆ: ಡಿಕೆಶಿ - LET TAMIL NADU DO ANYTHING

Last Updated : Mar 21, 2024, 9:09 PM IST

ABOUT THE AUTHOR

...view details