ದಾವಣಗೆರೆ: ಈ ಬಾರಿ ವರುಣನ ಕೃಪೆಯಿಂದ ಪಶ್ಚಿಮ ಘಟ್ಟಗಳಲ್ಲಿ ಉತ್ತಮ ಮಳೆಯಾಗಿದೆ. ಪರಿಣಾಮ, ಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ರೈತರ ಬೆಳೆಗಳಿಗೆ ನೀರು ಒದಗಿಸಲು ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲಾಗಿದೆ. ವಿಪರ್ಯಾಸ ಎಂದರೆ ನಾಲೆಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ಇದರಿಂದ ಬೇಸತ್ತ ರೈತರು ಮತ್ತು ನೀರು ಬಳಕೆದಾರರ ಸಂಘದವರು ಸ್ವಂತ ಖರ್ಚಿನಲ್ಲಿಯೇ ನಾಲೆಗಳಲ್ಲಿನ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಹೌದು, ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿದು ಇಂದಿಗೆ ಹದಿಮೂರು ದಿನ ಕಳೆದಿದೆ. ಆದರೆ ಇದೂವರೆಗೂ ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ಹರಿದಿಲ್ಲ. ಭೀಮನೆರೆಯಿಂದ ಕಂದಗಲ್ಲು ಗ್ರಾಮದವರೆಗೆ 19 ಕಿಲೋ ಮೀಟರ್ ಉಪನಾಲೆ ಇದ್ದು ನಾಲೆಯ ತುಂಬೆಲ್ಲಾ ಹೂಳು ತುಂಬಿದೆ. ಇದರಿಂದಾಗಿ ಕೊನೆ ಭಾಗಕ್ಕೆ ನೀರು ಹರಿದಿಲ್ಲ. ನಾಲೆಯ ಹೂಳು ತೆಗೆಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಚನ್ನಗಿರಿ ತಾಲೂಕಿನ ವೆಂಕಟೇಶ್ವರ ಕ್ಯಾಂಪ್ನ ರೈತರು ಹಾಗೂ ನೀರು ಬಳಕೆದಾರರ ಸಂಘದವರು ಸೇರಿಕೊಂಡು ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ನಾಲೆಯ ಹೂಳು ತೆಗೆಸುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಕಂದಗಲ್ಲು ಗ್ರಾಮದಲ್ಲಿ ಸುಮಾರು 2,500 ಎಕರೆ ಪ್ರದೇಶಕ್ಕೆ ಉಪನಾಲೆಯಿಂದ ನೀರು ಹರಿಯಲಿದೆ. ಅಷ್ಟೇ ಅಲ್ಲದೇ, 94 ಎಕರೆ ವಿಸ್ತೀರ್ಣದ ಕೆರೆಗೂ ನೀರು ತಲುಪಿಲ್ಲ. ಆದ್ದರಿಂದ ಕಂದಗಲ್ಲು ಗ್ರಾಮದ ರೈತರು ಭತ್ತ ನಾಟಿ ಮಾಡಲು ಮತ್ತು ತೋಟಗಳಿಗೆ ನೀರು ಬಳಸಲು ಸಾಧ್ಯವಾಗಿಲ್ಲ. ನಾಲೆಯ ಹೂಳು ತೆಗೆಸಲು ಅಧಿಕಾರಿಗಳನ್ನು ಕೇಳಿದರೆ ಅನುದಾನ ಇಲ್ಲಾ ಎಂದು ಹೇಳುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ನಮ್ಮ ಗೋಳು ಕೇಳುತ್ತಿಲ್ಲ. ಇದರಿಂದಾಗಿ ರೈತರ ಬಳಿ ಚಂದಾ ವಸೂಲಿ ಮಾಡುವುದರ ಜೊತೆಗೆ ಎರಡು ನೀರ ಬಳಕೆದಾರರ ಸಂಘಗಗಳು ಸೇರಿಕೊಂಡು ನಾಲೆಯ ಹೂಳು ತೆಗೆಸಲಾಗುತ್ತಿದೆ.