ಕರ್ನಾಟಕ

karnataka

By ETV Bharat Karnataka Team

Published : Feb 20, 2024, 9:48 PM IST

ETV Bharat / state

ಹಾವೇರಿ : ಕಲ್ಲಂಗಡಿ ನಂಬಿ ಬದುಕು ಕಟ್ಟಿಕೊಂಡ ರೈತ, ಸಾವಯವ ಕೃಷಿಕರಿಗೆ ಇವರೇ ಮಾದರಿ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ರೈತರೊಬ್ಬರು ಕಪ್ಪು ಕಲ್ಲಂಗಡಿ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.

ಹಾವೇರಿ
ಹಾವೇರಿ

ರೈತ ಶಿವಪ್ಪ ನವಲೆ

ಹಾವೇರಿ :ಜಿಲ್ಲೆಯ ರಾಣೆಬೆನ್ನೂರು ತಾಲೂಕು ಕಾಕೋಳ ಗ್ರಾಮದ ಸಾಮಾನ್ಯ ರೈತರಲ್ಲಿ ಒಬ್ಬರು ಶಿವಪ್ಪ ನವಲೆ. ಶಿವಪ್ಪ ಕಳೆದ ಹಲವು ವರ್ಷಗಳಿಂದ ಸಾಂಪ್ರದಾಯಿಕ ಬೆಳೆಗಳಾದ ಮೆಕ್ಕೆಜೋಳ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ, ಕಳೆದ ವರ್ಷದಿಂದ ಅವರು ಸಾಂಪ್ರದಾಯಿಕ ಬೆಳೆಗಳಿಗೆ ಪೂರ್ಣ ವಿರಾಮ ನೀಡಿ, ಕಲ್ಲಂಗಡಿ ಬೆಳೆಯತ್ತ ಮುಖ ಮಾಡಿದ್ದಾರೆ.

ಕಳೆದ ವರ್ಷ ಅಧಿಕ ಮಳೆಯಿಂದ ಕಲ್ಲಂಗಡಿ ಅತ್ಯಧಿಕ ಪ್ರಮಾಣದಲ್ಲಿ ಲಭಿಸಿದ್ದರಿಂದ ಉತ್ತಮ ಆದಾಯ ಗಳಿಸಿದ್ದರು. ಹೀಗಾಗಿ ಈ ವರ್ಷವೂ ಸಹ ಕಲ್ಲಂಗಡಿ ಬೆಳೆದಿದ್ದಾರೆ. ಕಪ್ಪು ಕಲ್ಲಂಗಡಿ ಹಣ್ಣು ಬೆಳೆದಿರುವ ಶಿವಪ್ಪ ಅವರಿಗೆ ಇದೀಗ ಬಂಪರ್ ಬೆಳೆ ಬಂದಿದೆ. ಜೊತೆಗೆ ಕಲ್ಲಂಗಡಿ ಕೆಜಿಗೆ 15 ರೂಪಾಯಿ ಮಾರಾಟವಾಗುತ್ತಿರುವುದು ಸ್ವಲ್ಪ ಆದಾಯ ಸಹ ತಂದಿದೆ. ನಾಲ್ಕು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದ ಶಿವಪ್ಪ ಇದುವರೆಗೆ ಸುಮಾರು 50ಟನ್ ಕಲ್ಲಂಗಡಿ ಮಾರಿದ್ದಾರೆ.

ಕಲ್ಲಂಗಡಿ ಬೆಳೆದ ರೈತ

''ಟನ್ ಕಲ್ಲಂಗಡಿಗೆ 15 ಸಾವಿರ ರೂಪಾಯಿ ನೀಡಿ ವರ್ತಕರೇ ಜಮೀನಿಗೆ ಬಂದು ಖರೀದಿ ಮಾಡಿದ್ದಾರೆ. ನಾಲ್ಕು ಎಕರೆ ಜಮೀನಿನಲ್ಲಿ ಪ್ರತಿದಿನ ಇಬ್ಬರು ಕೆಲಸ ಮಾಡಿದ್ದಾರೆ. ಕೆಲವೊಮ್ಮೆ ಕೂಲಿಕಾರ್ಮಿಕರ ಸಹಾಯ ಸಹ ಪಡೆದಿದ್ದೇವೆ. ಇದನ್ನೆಲ್ಲಾ ಖರ್ಚು ತೆಗೆದರೆ ನನಗೆ ನಿವ್ವಳ 3 ಲಕ್ಷ ರೂಪಾಯಿ ಆದಾಯ ಸಿಕ್ಕಿದೆ'' ಎನ್ನುತ್ತಾರೆ ರೈತ ಶಿವಪ್ಪ.

ಪ್ರಸ್ತುತ ವರ್ಷ ಕಲ್ಲಂಗಡಿ ಹಾಕಿದಾಗ ಹಿಂಗಾರು ಮಳೆ ಕೈಕೊಟ್ಟಿತ್ತು. ನಂತರ ಕೊಳವೆ ಬಾವಿ ಸಹಾಯದಿಂದ ಕಲ್ಲಂಗಡಿ ಬೆಳೆದೆ. ಇನ್ನೇನು ಹಣ್ಣು ಪೂರ್ಣ ಪ್ರಮಾಣದಲ್ಲಿ ಬಿಡುವ ವೇಳೆ ಕೊಳವೆ ಬಾವಿ ಸಹ ಕೈಕೊಟ್ಟಿತು. ಆದರೂ ಸಹ ಛಲ ಬಿಡದೆ ಅಕ್ಕಪಕ್ಕದ ರೈತರಿಂದ ನೀರು ಪಡೆದು ಕಲ್ಲಂಗಡಿ ಬೆಳೆದೆ. ಸರಿಯಾಗಿ ನೀರು ಇದ್ದಿದ್ದರೆ, ಮಳೆಯಾಗಿದ್ದರೆ 4 ಎಕರೆಗೆ ಸುಮಾರು 100 ಟನ್ ಕಲ್ಲಂಗಡಿ ಬರುತ್ತಿತ್ತು ಎಂದಿದ್ದಾರೆ.

ಕಲ್ಲಂಗಡಿ

ತಮ್ಮ ಜಮೀನಿನಲ್ಲಿ ಮಲ್ಚಿಂಗ್ ಮೂಲಕ ಹನಿನೀರಾವರಿ ವ್ಯವಸ್ಥೆ ಅಳವಡಿಸಿ, ಶಿವಪ್ಪ ನವಲೆ ಕಲ್ಲಂಗಡಿ ಬೆಳೆದಿದ್ದಾರೆ. ಜಮೀನಿನಲ್ಲಿ ಬೋರ್​ವೆಲ್​ ಬತ್ತಿಹೋದಾಗ ಇವರ ಸಹಾಯಕ್ಕೆ ಬಂದಿದ್ದು ಸಾವಯವ ಕೃಷಿ ತಜ್ಞ ಗಂಗಯ್ಯ ಕುಲಕರ್ಣಿ. ಸಾವಯವ ಕೃಷಿ ಸಹಾಯಕರಾಗಿರುವ ಗಂಗಯ್ಯ ಕುಲಕರ್ಣಿ ಸಾವಯವ ಬೆಳೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿದ್ದಾರೆ. ಬರಗಾಲದಲ್ಲಿ ನೀರು ಇಲ್ಲದ ವೇಳೆ ಕಲ್ಲಂಗಡಿ ಬೆಳೆ ರಕ್ಷಿಸುವ ಉಪಾಯ ತಿಳಿಸಿದ ಗಂಗಯ್ಯ, ಶಿವಪ್ಪನಿಗೆ ನೆರವಾಗಿದ್ದಾರೆ. ಶಿವಪ್ಪನಿಗೆ ಶುದ್ಧ ಜೈವಿಕ ಉತ್ಪನ್ನಗಳ ಬಳಕೆಗೆ ಗಂಗಯ್ಯ ಶಿಫಾರಸ್ಸು ಮಾಡಿದ್ದಾರೆ.

ತೇವಾಂಶ ಹಿಡಿದಿಡುವ ಜೈವಿಕ ಉತ್ಪನ್ನಗಳ ಬಳಕೆಯಿಂದ ಶಿವಪ್ಪನಿಗೆ ಈ ರೀತಿಯ ಇಳುವರಿ ಬಂದಿದೆ. ಶಿವಪ್ಪ ಮೊದಲಿನಿಂದಲೂ ತಿಪ್ಪೆ ಗೊಬ್ಬರ ಮತ್ತು ಕೋಳಿ ಗೊಬ್ಬರ ಹಾಕಿ ಕಲ್ಲಂಗಡಿಯನ್ನ ಬೆಳೆಸಿದ್ದರು. ನೀರು ಇಲ್ಲದಾಗ ಇನ್ನೇನು ಕಲ್ಲಂಗಡಿ ಒಣಗಿಹೋಗುತ್ತೆ ಎಂದಾಗ ಶಿವಪ್ಪನ ಕೈಹಿಡಿದಿದ್ದು ಸಾವಯವ ಗೊಬ್ಬರ ಎನ್ನುತ್ತಾರೆ ಕೃಷಿತಜ್ಞ ಗಂಗಯ್ಯ ಕುಲಕರ್ಣಿ.

ಸಾವಯವ ಗೊಬ್ಬರ ಬಳಸುವುದು ಸೂಕ್ತ : ಇಂತಹ ಬರಗಾಲದಲ್ಲಿ ಸಹ ಕಷ್ಟಪಟ್ಟು ಶಿವಪ್ಪ ಕಲ್ಲಂಗಡಿ ಬೆಳೆದಿದ್ದು ಇದೀಗ ಸಾರ್ಥಕವಾಗಿದೆ. ತಾನು ಮಾಡಿದ ಖರ್ಚು ತೆಗೆದು ಶಿವಪ್ಪ ಲಾಭ ಗಳಿಸುತ್ತಿದ್ದಾರೆ. ಆ ಮೂಲಕ ಉಳಿದ ರೈತರಿಗೆ ಮಾದರಿಯಾಗಿದ್ದಾರೆ. ಎಷ್ಟೇ ಕಷ್ಟಬಂದರೂ ಸಹ ಧೃತಿಗೆಡದೆ ರೈತರು ಕೃಷಿ ತಜ್ಞರ ಸಹಾಯ ಪಡೆದು ಬೆಳೆ ಸಂರಕ್ಷಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಸಾವಯವ ಗೊಬ್ಬರ ಬಳಸುವುದು ಸೂಕ್ತ.

ಇದನ್ನೂ ಓದಿ :ಹಾವೇರಿ: ತೈವಾನ್​ ದೇಶದ ಪಪ್ಪಾಯಿ ಬೆಳೆದ ರೈತ.. 8 ಲಕ್ಷ ರೂ ಆದಾಯದ ನಿರೀಕ್ಷೆಯಲ್ಲಿ ಬೆಳೆಗಾರ!

ABOUT THE AUTHOR

...view details