ಬೆಂಗಳೂರು:ನಗರದ ಜಿಕೆವಿಕೆ ಆವರಣದಲ್ಲಿ ಇಂದು ಆಯೋಜಿಸಿದ್ದ ಮಾನವ ಮತ್ತು ಆನೆ ಸಂಘರ್ಷ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಆನೆಗಳಿಗೆ ಗರ್ಭನಿರೋಧಕ ಯೋಜನೆ ಅಳವಡಿಕೆ ಮಾಡುವುದು, ಲಾಂಟನಾವನ್ನು ಮೂಲೋತ್ಪಾಟನೆ ಮಾಡುವುದು, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮುಂದುವರೆಸುವುದು ಮತ್ತು ಇದಕ್ಕೆ ಕೇಂದ್ರ ಸರಕಾರದ ನೆರವು ಕೋರುವ ಬಗ್ಗೆ ಚರ್ಚಿಸಿ, ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ತಮಿಳುನಾಡಿನ ಅರಣ್ಯ ಸಚಿವ ಮೆತಿವೆಂಥನ್, ತೆಲಂಗಾಣ ಅರಣ್ಯ ಸಚಿವೆ ಕೊಂಡ ಸುರೇಖಾ, ಜಾರ್ಖಂಡ್ ಅರಣ್ಯ ಸಚಿವ ಬೈದ್ಯನಾಥ್ ರಾಮ್ ಮತ್ತು ವಿವಿಧ ರಾಜ್ಯಗಳ ಅಧಿಕಾರಿಗಳಿದ್ದರು.
ಬಾಕಿಯಿರುವ 1 ಸಾವಿರ ಕೋಟಿ ಕ್ಯಾಂಪಾ ನಿಧಿ ಬಿಡುಗಡೆ ಕೇಂದ್ರಕ್ಕೆ ಮನವಿ ನೀಡುವುದು. ಆನೆ ಸೇರಿದಂತೆ ವನ್ಯಜೀವಿಗಳಿಂದ ಮಾನವ ಮೃತ ಕುಟುಂಬಕ್ಕೆ ಎಲ್ಲಾ ರಾಜ್ಯಗಳಲ್ಲಿ ಏಕರೂಪ ಪರಿಹಾರ ನೀಡುವುದು. ಆನೆಗಳ ಕುಟುಂಬ ಸಂಖ್ಯೆ ನಿಯಂತ್ರಣಕ್ಕೆ ಅನುಮತಿ ನೀಡಬೇಕೆಂದು ಕೇಂದ್ರಕ್ಕೆ ಕರ್ನಾಟಕ, ತಮಿಳುನಾಡು, ಕೇರಳ, ಜಾರ್ಖಂಡ್ ರಾಜ್ಯಗಳ ನಿಯೋಗ ಕೊಂಡೊಯ್ಯುವ ನಿರ್ಣಯಕ್ಕೆ ಬರಲಾಯಿತು.
ಕಾಡುಗಳಲ್ಲಿ ಇರುವ ಲಂಟಾನಾ ಮತ್ತು ಕಳೆ ನಿರ್ಮೂಲನೆಗೆ ಆಧುನಿಕ ಯಂತ್ರೋಪಕರಣ ಬಳಕೆ, ಕಾಡಂಚಿನ ಗ್ರಾಮಗಳಲ್ಲಿ ಅರಿವು ಮೂಡಿಸುವ ಜೊತೆಗೆ ಗ್ರಾ.ಪಂ ಸದಸ್ಯರು, ಪಿಡಿಒಗಳು, ಇಒಗಳು, ತಹಶೀಲ್ದಾರ್, ಪೊಲೀಸ್ ಇಲಾಖೆ, ಡಿಸಿ, ಎಸ್ಪಿ ಎಲ್ಲರನ್ನೂ ಒಳಗೊಂಡಂತೆ ವಾಟ್ಸ್ಆ್ಯಪ್ ಗ್ರೂಪ್ ಮಾಡಿ, ವನ್ಯಜೀವಿಗಳು ಗ್ರಾಮಗಳತ್ತ ನುಗ್ಗಿವೆ ಎಂದಾಗ ಅಲರ್ಟ್ ಮಾಡುವುದು. ಇದಕ್ಕೆ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಸಿದ್ದಪಡಿಸುವುದು. ಆನೆ ತಡೆಗೆ ಬೇಕಾಗುವ ಅಗತ್ಯ ತಂತ್ರಜ್ಞಾನ ಅಳವಡಿಸಲು ಕೇಂದ್ರ ಸರ್ಕಾರ ಸಹಕಾರ ನೀಡಬೇಕೆಂದು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.