ಕರ್ನಾಟಕ

karnataka

2.21 ಲಕ್ಷ ಹುಣಸೆ ಬೀಜಗಳಲ್ಲಿ ಅರಳಿದ ಪರಿಸರ ಸ್ನೇಹಿ ಗಣಪ; ಬೆಳಗಾವಿಯಲ್ಲೊಂದು ವಿನೂತನ ಗಜಮುಖ - Eco friendly Ganesha

By ETV Bharat Karnataka Team

Published : Sep 7, 2024, 11:49 AM IST

Updated : Sep 7, 2024, 12:44 PM IST

ಬೆಳಗಾವಿಯ ಹಳೆ ಗಾಂಧಿ ನಗರದ ಮೂರ್ತಿ ತಯಾರಕ ಸುನೀಲ್ ಸಿದ್ದಪ್ಪ ಆನಂದಾಚೆ ಅವರು ಹುಣಸೆ ಬೀಜಗಳನ್ನು ಬಳಸಿ ಪರಿಸರ ಸ್ನೇಹಿ ಗಣಪತಿಯನ್ನು ನಿರ್ಮಿಸಿದ್ದಾರೆ. ಈ ಗಣಪತಿಗೆ ಬರೋಬ್ಬರಿ 2.21 ಲಕ್ಷ ಹುಣಸೆ ಬೀಜಗಳನ್ನು ಬಳಸಿದ್ದಾರೆ.

eco-friendly-ganesha
ಪರಿಸರ ಸ್ನೇಹಿ ಗಣೇಶ (ETV Bharat)

ಗಣಪತಿ ಮೂರ್ತಿ ತಯಾರಕರಾದ ಸುನೀಲ್ ಸಿದ್ಧಪ್ಪ ಆನಂದಾಚೆ ಮಾತನಾಡಿದರು (ETV Bharat)

ಬೆಳಗಾವಿ : ಮಣ್ಣು ಇಲ್ಲವೇ ಪಿಒಪಿಯಿಂದ ಗಣೇಶ ಮೂರ್ತಿಗಳನ್ನು ಮಾಡೋದನ್ನು ನಾವು, ನೀವೆಲ್ಲಾ ನೋಡಿದ್ದೇವೆ. ಆದರೆ, ಬೆಳಗಾವಿಯಲ್ಲಿ ಕಲಾವಿದರೊಬ್ಬರು ಹುಣಸೆ ಬೀಜಗಳನ್ನು ಬಳಸಿ ಗಣೇಶ ಮೂರ್ತಿ ತಯಾರಿಸಿ, ಎಲ್ಲರ ಗಮನ ಸೆಳೆದಿದ್ದಾರೆ.

ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಹಳೆ ಗಾಂಧಿ ನಗರದ ಮೂರ್ತಿ ತಯಾರಕ ಸುನೀಲ್ ಸಿದ್ದಪ್ಪ ಆನಂದಾಚೆ ಅವರ ಕೈಯಲ್ಲಿ ಹುಣಸೆ ಬೀಜದ ಗಣಪ ಮೂಡಿ ಬಂದಿದೆ. ಕಳೆದ ವರ್ಷ ರುದ್ರಾಕ್ಷಿಗಳಿಂದ ಗಣೇಶ ಮೂರ್ತಿ ಮಾಡಿದ್ದ ಸುನೀಲ್ ಅವರು ಈ ಬಾರಿ ಮತ್ತೊಂದು ವಿನೂತನ ಹೆಜ್ಜೆ ಇಟ್ಟಿದ್ದಾರೆ. ಮರುಬಳಕೆಯ ದಿನಪತ್ರಿಕೆಗಳು ಮತ್ತು ಕಾರ್ಡ್ಬೋರ್ಡ್, ಹುಲ್ಲು ಹಾಗೂ ಹೇರಳವಾಗಿ ಹುಣಸೆ ಬೀಜಗಳನ್ನು ಉಪಯೋಗಿಸಿ 8 ಅಡಿ ಎತ್ತರದ ಸುಂದರ ಗಣೇಶ ಮೂರ್ತಿ ನಿರ್ಮಿಸಿದ್ದಾರೆ.

2 ಲಕ್ಷ 21 ಸಾವಿರ ಹುಣಸೆ ಬೀಜ ಬಳಕೆ:ಸುನೀಲ್ ಆನಂದಾಚೆ ಅವರು ಬರೋಬ್ಬರಿ 2 ಲಕ್ಷ 21 ಸಾವಿರದ 111 ಹುಣಸೆ ಬೀಜಗಳನ್ನು ಬಳಸಿಕೊಂಡು ಈ ಗಣೇಶ ಮೂರ್ತಿ ತಯಾರಿಸಿದ್ದಾರೆ. 35 ಸಾವಿರ ರೂ. ಖರ್ಚಾಗಿದ್ದು, ದಿನ ನಿತ್ಯದ ತಮ್ಮ ಇತರೆ ಕೆಲಸಗಳ ನಡುವೆ ಒಂದೆರಡು ಗಂಟೆ ಬಿಡುವು ಮಾಡಿಕೊಂಡು ಮನೆಯವರು ಹಾಗೂ ನೆರೆಹೊರೆಯವರ ಸಹಕಾರದಿಂದ ಒಂದು ತಿಂಗಳಲ್ಲಿ ಈ ಮೂರ್ತಿ ತಯಾರಿಸಿದ್ದಾರೆ.

ವೃತ್ತಿ ಪ್ಲಂಬಿಂಗ್, ಪ್ರವೃತ್ತಿ ಮೂರ್ತಿ ತಯಾರಿಕೆ :ವೃತ್ತಿಯಲ್ಲಿ ಪ್ಲಂಬಿಂಗ್ ಕೆಲಸ ಮಾಡುವ ಸುನೀಲ್, ಪ್ರವೃತ್ತಿಯಾಗಿ ಗಣೇಶ ಮೂರ್ತಿ ಕಾಯಕ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿವರ್ಷ ಒಂದೇ ಒಂದು ಸಾರ್ವಜನಿಕ ಗಣೇಶ ಮೂರ್ತಿ ತಯಾರಿಸುವ ಇವರು, ಪರಿಸರ ಸ್ನೇಹಿ ಗಣಪನನ್ನು ಮಾತ್ರ ನಿರ್ಮಿಸುತ್ತಾರೆ. ಒಂದಿಷ್ಟು ಮನೆಗಳಿಗೆ ಮಣ್ಣಿನ ಗಣಪನನ್ನು ಮಾಡಿಕೊಡುತ್ತಾರೆ. ಸುನೀಲ್ ಅವರಿಗೆ ಪತ್ನಿ ರಶ್ಮಿ, ಮಕ್ಕಳಾದ ಸಮರ್ಥ ಮತ್ತು ಯಶ್ ಕೂಡ ಸಾಥ್ ಕೊಟ್ಟಿದ್ದಾರೆ.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಈ ಬಗ್ಗೆ ಮೂರ್ತಿ ತಯಾರಕ ಸುನೀಲ ಆನಂದಾಚೆ ಈಟಿವಿ ಭಾರತ ಜೊತೆಗೆ ಮಾತನಾಡಿ, 'ಪರಿಸರಸ್ನೇಹಿ‌ ಗಣೇಶ ಸಿದ್ಧಪಡಿಸುವುದರಲ್ಲಿ ನನಗೆ ಖುಷಿಯಿದೆ. ಏಕೆಂದರೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಹಾಗಾಗಿ, ಈ ಹಿಂದೆ ವಾಲ್ ನಟ್, ಮೋದಕ, ಬಟ್ಟೆಯ ಹೂವು, ಯೂಸ್ ಆಂಡ್ ಥ್ರೋ ಪೇಪರ್ ಕಪ್, ಮರಳು, ಡ್ರೈ ಫ್ರೂಟ್ಸ್, ವಿವಿಧ ಧಾನ್ಯಗಳು, ರುದ್ರಾಕ್ಷಿಗಳಿಂದ ಗಣೇಶ ಮೂರ್ತಿ ತಯಾರಿಸಿದ್ದೆ. ಈ ಬಾರಿ ಹೊಸ ಪರಿಕಲ್ಪನೆಯೊಂದಿಗೆ ಹುಣಸೆ ಬೀಜಗಳಿಂದ ಮೂರ್ತಿ ಮಾಡಿದ್ದೇನೆ. ಎಲ್ಲರೂ ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಿ' ಎಂದು ಕೇಳಿಕೊಂಡಿದ್ದಾರೆ.

ಸುನೀಲ್ ಪತ್ನಿ ರಶ್ಮಿ ಆನಂದಾಚೆ ಮಾತನಾಡಿ, 'ಪರಿಸರಕ್ಕೆ ಹಾನಿಯುಂಟು ಮಾಡುವ ಗಣೇಶ ಮೂರ್ತಿಗಳನ್ನು ಮಾಡಬಾರದು ಎಂಬ ಉದ್ದೇಶದಿಂದ ಪ್ರತಿವರ್ಷವೂ ನಮ್ಮ ಯಜಮಾನರು ಪರಿಸರ ಸ್ನೇಹಿ ಮೂರ್ತಿ ಮಾತ್ರ ತಯಾರಿಸುತ್ತಾರೆ. ನಾವು ಅವರಿಗೆ ಸಹಾಯ ಮಾಡುತ್ತೇವೆ. ಇದರಲ್ಲೆ ನಾವೆಲ್ಲಾ ಖುಷಿ ಪಡುತ್ತೇವೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

8 ಅಡಿ ಉದ್ದ ಹಾಗೂ 4 ಅಡಿ ಅಗಲದ ಗಣೇಶ ಮೂರ್ತಿ ಇದಾಗಿದ್ದು, ನಿಮಜ್ಜನದ ನಂತರವೂ ಹುಣಸೆ ಬೀಜದಿಂದ ಸಸಿಗಳು ಬೆಳೆಯಲಿ ಎಂಬ ಪರಿಕಲ್ಪನೆಯೊಂದಿಗೆ ಈ ಮೂರ್ತಿ ತಯಾರಿಸಲಾಗಿದೆ.

ಪರಿಸರ ಜಾಗೃತಿಯ ಸಂದೇಶ : ಸುನೀಲ್ ಆನಂದಾಚೆ ಅವರು ತಯಾರಿಸಿರುವ ಹುಣಸೆ ಬೀಜದ ಗಣಪನನ್ನು ಬೆಳಗಾವಿಯ ಮಾಳಿಗಲ್ಲಿಯಲ್ಲಿನ ಪರಿಸರ ಸ್ನೇಹಿ ಯುವಕರು ಸೇರಿಕೊಂಡು ತಮ್ಮ ಓಣಿಯಲ್ಲಿ ಪ್ರತಿಷ್ಠಾಪಿಸಿ, ಪೂಜಿಸುತ್ತಿದ್ದಾರೆ. ಈ ಮೂಲಕ ನಾಡಿಗೆ ಪರಿಸರ ಜಾಗೃತಿಯ ಸಂದೇಶ ಸಾರುತ್ತಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ಬೆಳಗ್ಗೆ ಇಡ್ಲಿ, ದಿನವಿಡೀ ಪಾನ್​ ವ್ಯಾಪಾರ: ಈಗ ಪರಿಸರಸ್ನೇಹಿ ಗಣೇಶನ ತಯಾರಿಸುತ್ತಿರುವ ಕಾಯಕಯೋಗಿ! - story of a hard worker

Last Updated : Sep 7, 2024, 12:44 PM IST

ABOUT THE AUTHOR

...view details