ಡಾಬರ್ ಮ್ಯಾನ್ ಶ್ವಾನ ಮಾಲೀಕ ಬಸವರಾಜ ಪೂಜಾರ ಮಾತನಾಡಿದರು (ETV Bharat) ಕೊಪ್ಪಳ:ದಾನದಲ್ಲಿ ಶ್ರೇಷ್ಠ ದಾನ ರಕ್ತದಾನ. ಜನರು ರಕ್ತದಾನ ಮಾಡಿ ಮತ್ತೊಂದು ಜೀವಕ್ಕೆ ಆಧಾರವಾದ ಸಂಗತಿಗಳಿಗೆ ಹಲವು ಉದಾಹರಣೆಗಳಿವೆ. ಆದರೆ, ಇದನ್ನು ಮೀರಿದ ಘಟನೆ ಕೊಪ್ಪಳದಲ್ಲಿ ಬುಧವಾರ ನಡೆಯಿತು. ಹೌದು, ಇಲ್ಲಿ ಶ್ವಾನವೊಂದರ ಪ್ರಾಣ ಉಳಿಸಲು ಇನ್ನೊಂದು ಶ್ವಾನ ರಕ್ತದಾನ ಮಾಡಿದೆ.
ಲ್ಯಾಬ್ರಡಾರ್ ಶ್ವಾನಕ್ಕೆ ಹಿಮೋಗ್ಲೋಬಿನ್ ಕೊರತೆ: ಕೊಪ್ಪಳ ನಗರದ ಒಂಬತ್ತು ವರ್ಷದ ಲ್ಯಾಬ್ರಡಾರ್ ಶ್ವಾನ ಹಿಮೋಗ್ಲೊಬಿನ್ ಶಕ್ತಿ (3 ಪಾಯಿಂಟ್) ಕುಂದಿ ಬಳಲುತ್ತಿತ್ತು. ಜೀವ ಉಳಿಸಲು ರಕ್ತದ ಅವಶ್ಯಕತೆ ಇದೆ ಎಂದು ಪಶುವೈದ್ಯರು ತಿಳಿಸಿದ್ದರು. ಹೀಗಾಗಿ, ನಗರದಲ್ಲಿ ಡಾಬರ್ ತಳಿಯ ಮೂರು ನಾಯಿಗಳಿರುವ ಮನೆಗಳನ್ನು ಸಂಪರ್ಕಿಸಿ, ಅವುಗಳ ರಕ್ತದ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಪ್ರಾಧ್ಯಾಪಕರಾದ ಬಸವರಾಜ ಪೂಜಾರ್ ಅವರ ಸಾಕು ನಾಯಿ ಮೂರು ವರ್ಷದ ಭೈರವ (ಡಾಬರ್ ಮ್ಯಾನ್) ರಕ್ತ ಹೊಂದಾಣಿಕೆಯಾಗಿದೆ. ವೈದ್ಯಕೀಯ ನಿಯಮಾನುಸಾರ, ನಾಯಿಯ ಕುತ್ತಿಗೆಯ ಭಾಗದಿಂದ 12 ನಿಮಿಷಗಳಲ್ಲಿ 300 ಎಂಎಲ್ ರಕ್ತ ಪಡೆದು ದೈಹಿಕವಾಗಿ ನಿತ್ರಾಣಗೊಂಡಿದ್ದ ಲ್ಯಾಬ್ರಡಾರ್ಗೆ ನೀಡಲಾಗಿದೆ.
"ನಮ್ಮ ಮನೆಯ ಶ್ವಾನಕ್ಕೆ ಆರೋಗ್ಯ ಸಮಸ್ಯೆ ಆದಾಗಲೆಲ್ಲ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ. ಹೀಗಾಗಿ ನಮ್ಮ ಸಂಪರ್ಕ ಸಂಖ್ಯೆಯನ್ನು ಅಲ್ಲಿ ನೀಡಲಾಗಿತ್ತು. ನಿನ್ನೆ ನಮಗೆ ಕರೆ ಮಾಡಿದ ವೈದ್ಯರು, ನಿಮ್ಮ ಶ್ವಾನದ ರಕ್ತದ ಮಾದರಿ ಬೇಕಿತ್ತು ಎಂದರು. ಕೂಡಲೇ ಪರೀಕ್ಷಿಸಿದೆವು. ಬಳಿಕ ಅವರು, ಇನ್ನೊಂದು ನಿಮ್ಮ ಶ್ವಾನದ ರಕ್ತ ಬೇಕಿದೆ ಎಂದರು. ನಾವು ತೆಗೆದುಕೊಳ್ಳುವಂತೆ ತಿಳಿಸಿದೆವು. ಇದರಿಂದ ನಮಗೂ ಹೆಮ್ಮೆ ಎನಿಸಿತು. ಸಾಕು ಪ್ರಾಣಿಗಳಿಗೆ ಸಮಸ್ಯೆಯಾದಾಗ ಈ ರೀತಿ ಚಿಕಿತ್ಸೆ ಲಭಿಸುತ್ತಿರುವುದು ಸಂತಸದ ಸಂಗತಿ" ಎಂದು ಶ್ವಾನದ ಮಾಲೀಕ ಬಸವರಾಜ ಪೂಜಾರ ಹೇಳಿದರು.
ಇದನ್ನೂ ಓದಿ:ಶ್ವಾನದಿಂದ ಶ್ವಾನಕ್ಕೆ ರಕ್ತದಾನ; ಮತ್ತೊಂದು ವಿಶೇಷ ಘಟನೆಗೆ ಸಾಕ್ಷಿಯಾದ ಸ್ನೇಹಮೈತ್ರಿ ಬ್ಲಡ್ ಆರ್ಮಿ