ಕರ್ನಾಟಕ

karnataka

ಧಾರವಾಡ ಕೃಷಿಮೇಳ: ಕಣ್ಮನ ಸೆಳೆವ ಫಲಪುಷ್ಪ ಪ್ರದರ್ಶನ - Dharwad Krishi Mela 2024

By ETV Bharat Karnataka Team

Published : 5 hours ago

ಧಾರವಾಡದ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಸಾವಿರಾರು ಜನರು ಆಗಮಿಸಿ ಬಗೆಬಗೆಯ ಹೂವುಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಫಲಪುಷ್ಪ ಪ್ರದರ್ಶನ
ಧಾರವಾಡದ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ (ETV Bharat)

ಧಾರವಾಡ: ಉತ್ತರ ಕರ್ನಾಟಕ ಭಾಗದ ರೈತರ ಜಾತ್ರೆ ಎಂದೇ ಕರೆಸಿಕೊಳ್ಳುವ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಕೃಷಿಮೇಳಕ್ಕೆ ಜನರು, ರೈತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಎರಡನೇ ದಿನವಾದ ನಿನ್ನೆ(ಭಾನುವಾರ) ಮೇಳಕ್ಕೆ ಅಧಿಕೃತ ಚಾಲನೆ ದೊರೆಯಿತು.

ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸಾವಿರಾರು ಜನರು ಆಗಮಿಸಿ ತಮಗಿಷ್ಟವಾದ ಹೂವುಗಳ ಕಲಾಕೃತಿಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ವಿವಿಧ ಬಗೆಯ ಹೂವುಗಳನ್ನು ಒಂದೇ ಕಡೆ ಕಣ್ತುಂಬಿಕೊಂಡು ಖುಷಿಪಟ್ಟರು.

ಕಲ್ಲಂಗಡಿಯಲ್ಲಿ ಅರಳಿದ ಕ್ರಾಂತಿಕಾರಿಗಳು ಮತ್ತು ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಗಳು ಗಮನ ಸೆಳೆದವು. ತರಕಾರಿಗಳಿಂದ ಮೂಡಿಬಂದ ಕಲಾಕೃತಿಗಳು ಮತ್ತು ವಿವಿಧ ಪ್ರಭೇದಗಳ ಅಲಂಕಾರಿಕ ಪುಷ್ಪಗಳಿಗೆ ಜನರು ಮಾರು ಹೋದರು. ಇಂದು ಕೃಷಿ ಮೇಳದ ಫಲಪುಷ್ಪ ಪ್ರದರ್ಶನದ ಮೂರನೇ ದಿನವಾಗಿದೆ.

ಸ್ಥಳೀಯರಾದ ಲಕ್ಷ್ಮೀ ಮಾತನಾಡಿ, "ಇಲ್ಲಿ ವಿವಿಧ ಬಗೆಯ 20ಕ್ಕೂ ಹೆಚ್ಚು ಪುಷ್ಪಗಳನ್ನು ಒಂದೇ ಕಡೆ ಕಂಡು ತುಂಬಾ ಖುಷಿಯಾಯಿತು. ಇಲ್ಲಿನ ವಿದ್ಯಾರ್ಥಿಗಳು ತುಂಬಾ ಅಚ್ಚುಕಟ್ಟಾಗಿ ಪ್ರದರ್ಶನವನ್ನು ಆಯೋಜಿಸಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ರಕ್ಷಿತಾ, "ಇಲ್ಲಿ ಬಗೆ ಬಗೆಯ ಹೂವುಗಳನ್ನು ಕಾಣಬಹುದಾಗಿದೆ. ಇವುಗಳಿಂದ ಅಲಂಕಾರ ಮಾಡಬಹುದು. ವಿವಿಧ ಬಣ್ಣಗಳ ಹೂವುಗಳು ಎಲ್ಲರನ್ನೂ ಆಕರ್ಷಿಸುತ್ತಿವೆ. ಎಲ್ಲರೂ ಆಗಮಿಸಿ ಫಲಪುಷ್ಪ ಪ್ರದರ್ಶನ ನೋಡಿ" ಎಂದು ಮನವಿ ಮಾಡಿದರು.

ಈ ಮೇಳದಲ್ಲಿ ಬೀಜ ಮೇಳ, ಫಲಪುಷ್ಪ ಮೇಳ, ಮತ್ಸ್ಯಮೇಳ, ಜಾನುವಾರು ಮೇಳ, ಕೃಷಿ ತಜ್ಞರೊಂದಿಗೆ ಸಮಾಲೋಚನೆ, ಕೃಷಿಯ ಹೊಸ ಆವಿಷ್ಕಾರಗಳು, ಅಂತರ್ಜಲ ಮರುಪೂರಣ ಸೇರಿದಂತೆ ಹಲವು ಕೃಷಿ ಚಟುವಟಿಕೆಗಳ ಮಾಹಿತಿಯನ್ನು ರೈತರು ಪಡೆದುಕೊಳ್ಳಬಹುದು.

"ಕೃಷಿ ವಸ್ತು ಪ್ರದರ್ಶನದಲ್ಲಿ 150 ಹೈಟೆಕ್ ಮಳಿಗೆ, 214 ಸಾಮಾನ್ಯ ಮಳಿಗೆ, 110 ಯಂತ್ರೋಪಕರಣ ಮಳಿಗೆ, 27 ಟ್ರ್ಯಾಕ್ಟರ್ ಸೇರಿದಂತೆ ಭಾರಿ ಯಂತ್ರೋಪಕರಣಗಳ ಮಳಿಗೆ ಹಾಗೂ 28 ಆಹಾರ ಮಳಿಗೆಗಳು ಬುಕ್ ಆಗಿವೆ" ಎಂದು ಕೃಷಿ ವಿವಿ ಕುಲಪತಿ ತಿಳಿಸಿದ್ದಾರೆ.

ಇದನ್ನೂ ಓದಿ:ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರಮಿಸಿದ್ದವರಿಗೆ ಸಿಗದ ಗೌರವಧನ; ಕಲಾವಿದರ ಅಳಲು - No payment to artists

ABOUT THE AUTHOR

...view details