ಬೆಂಗಳೂರು:ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು 1,200 ಕೋಟಿ ರೂಪಾಯಿ ರೆಡಿ ಮಾಡ್ಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ಇಡಿ ತನಿಖೆಗೆ ದೂರು ನೀಡುವ ಸಂಬಂಧ ಚರ್ಚೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸದಾಶಿವನಗರದಲ್ಲಿ ಇಂದು ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು 1,200 ಕೋಟಿ ರೆಡಿ ಮಾಡ್ಕೊಂಡಿದ್ದಾರೆ ಎಂಬ ಯತ್ನಾಳ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇದರ ಮಾಹಿತಿ ನಮಗೂ ಇದೆ. ಈ ಬಗ್ಗೆ ಇವತ್ತು ಕಾಂಗ್ರೆಸ್ ಲೀಗಲ್ ಟೀಮ್ ಮೀಟಿಂಗ್ ಕರೆದಿದ್ದೇನೆ. ಈ ಮಾಹಿತಿಯನ್ನು ಹೈಕಮಾಂಡ್ ನಾಯಕರಿಗೂ ತಿಳಿಸಿದ್ದೇನೆ. ಇದು ಇಡಿ ತನಿಖೆಯ ವ್ಯಾಪ್ತಿಗೆ ಬರುವ ವಿಚಾರ ಎಂದರು.
ಎಡಿಜಿಪಿ ಚಂದ್ರಶೇಖರ್ ಕೆಪಿಸಿಸಿ ಕಚೇರಿಯಲ್ಲಿ ಪತ್ರ ಬರೆದಿದ್ದಾರೆ ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಮೋದಿ ಅವರು ಒಳ್ಳೆಯ ಸಚಿವ ಸ್ಥಾನ ಕೊಟ್ಟಿದ್ದಾರೆ. ಯೋಗಕ್ಕಿಂತ ಯೋಗಕ್ಷೇಮ ಇಂಪಾರ್ಟೆಂಟ್. ಅದನ್ನು ಬಿಟ್ಟು ರಾಜಕಾರಣ ಮಾಡಬಾರದು. ಅವರ ಕಾಲದಲ್ಲಿ ರಾಜ್ಯದಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕು. ಅದನ್ನು ಬಿಟ್ಟು ಇದನ್ನು ಮಾಡಬಾರದು. 136 ಜನ ಶಾಸಕರು ಒಗ್ಗಟ್ಟಾಗಿದ್ದೇವೆ. ಯಾವ ಅಧಿಕಾರಿಗಳೂ ಸಹ ಬೇಕಾಗಿಲ್ಲ ಎಂದರು.