ಕರ್ನಾಟಕ

karnataka

ಡಿಡಿಯುಟಿಟಿಎಲ್‌ನ ಅಕ್ರಮ ಆರೋಪ; ಮಾಜಿ ಅಧ್ಯಕ್ಷನ ಬಂಧನ - D S Veeraiah arrested

By ETV Bharat Karnataka Team

Published : Jul 12, 2024, 10:49 PM IST

ಡಿಡಿಯುಟಿಟಿಎಲ್‌ನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನಿಗಮದ ಮಾಜಿ ಅಧ್ಯಕ್ಷ ಡಿ. ಎಸ್ ವೀರಯ್ಯ ಅವರನ್ನು ಬಂಧಿಸಿದ್ದಾರೆ.

d-s-veeraiah
ಡಿ. ಎಸ್ ವೀರಯ್ಯ (ETV Bharat)

ಬೆಂಗಳೂರು : ಡಿ. ದೇವರಾಜ ಅರಸು ಟ್ರಕ್‌ ಟರ್ಮಿನಲ್‍ (ಡಿಡಿಯುಟಿಟಿಎಲ್‌) ನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ನಿಗಮದ ಮಾಜಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್​ ಮಾಜಿ ಸದಸ್ಯ ಡಿ. ಎಸ್. ವೀರಯ್ಯ ಅವರನ್ನು ಬಂಧಿಸಿದ್ದಾರೆ.

ಡಿ. ಎಸ್ ವೀರಯ್ಯ ಅವರು ನಿಗಮದ ಅಧ್ಯಕ್ಷರಾಗಿದ್ದ 2021ರಿಂದ 2023ರ ಅವಧಿಯಲ್ಲಿ ಡಿಡಿಯುಟಿಟಿಎಲ್‌ ನಿಗಮದಲ್ಲಿನ ಗುತ್ತಿಗೆ ಹಂಚಿಕೆಯಲ್ಲಿ ಸುಮಾರು 47.10 ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಹಾಲಿ ವ್ಯವಸ್ಥಾಪಕ ನಿರ್ದೇಶಕ ಸಿ. ಎನ್‌ ಶಿವಪ್ರಕಾಶ್, ಕಳೆದ ಸೆಪ್ಟೆಂಬರ್‌ನಲ್ಲಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರ ಅನ್ವಯ ದಾಖಲಾಗಿದ್ದ ಪ್ರಕರಣದ ತನಿಖೆಯನ್ನ ಸಿಐಡಿಗೆ ವಹಿಸಲಾಗಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ ಅಧಿಕಾರಿಗಳು ಅದರ ಮಾಜಿ ವ್ಯವಸ್ಥಾಪಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಾಣಿಜ್ಯ ಪ್ರಚಾರ ಶಾಖೆಯ ಹಾಲಿ ಉಪ ನಿರ್ದೇಶಕರಾಗಿದ್ದ ಎಸ್. ಶಂಕರಪ್ಪ ಅವರನ್ನ ಮೇ ತಿಂಗಳಿನಲ್ಲಿ ಬಂಧಿಸಿದ್ದರು. ಸದ್ಯ ಮೈಸೂರಿನಲ್ಲಿ ವೀರಯ್ಯ ಅವರನ್ನ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ..? : ಡಿಡಿಯೂಟಿಟಿಎಲ್ 2021 ಅಕ್ಟೋಬರ್ 25ರಂದು ನಡೆಸಲಾಗಿದ್ದ 194ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಟ್ರಕ್ ಟರ್ಮಿನಲ್​ಗಳ ದುರಸ್ತಿ ಹಾಗೂ ನಿರ್ವಹಣೆ ಕಾಮಗಾರಿಯನ್ನು ತುರ್ತಾಗಿ ತುಂಡು ಗುತ್ತಿಗೆ ನೀಡುವ ಬಗ್ಗೆ ಚರ್ಚಿಸಲಾಗಿತ್ತು.

ಸುಮಾರು 10 ಕೋಟಿವರೆಗೆ ತುಂಡು ಗುತ್ತಿಗೆಗೆ ನೀಡಲು ಅಕ್ರಮವಾಗಿ ಅನುಮೋದನೆ ನಿರ್ಣಯ ಮಾಡಲಾಗಿತ್ತು. ಕಾಮಗಾರಿ ನಡೆಯದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಪಡೆಯಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಡಿಯೂಟಿಟಿಎಲ್ ಕಚೇರಿ ಹಾಗೂ ಹಲವಾರು ಮನೆಗಳ ಮೇಲೆ ದಾಳಿ ನಡೆಸಿದ್ದ ಸಿಐಡಿ ಅಧಿಕಾರಿಗಳು 600ಕ್ಕೂ ಹೆಚ್ಚು ದಾಖಲೆಗಳನ್ನ ಜಪ್ತಿ ಮಾಡಿದ್ದರು.

ಇದನ್ನೂ ಓದಿ :ದೇವರಾಜ ಅರಸು ಟ್ರಕ್ ಟರ್ಮಿನಲ್ ಅಕ್ರಮ ಆರೋಪ ಪ್ರಕರಣ: ಮಾಜಿ ವ್ಯವಸ್ಥಾಪಕ ನಿರ್ದೇಶಕನ ಬಂಧನ - DDUTTL Case

ABOUT THE AUTHOR

...view details