ಕರ್ನಾಟಕ

karnataka

By ETV Bharat Karnataka Team

Published : Jun 27, 2024, 4:07 PM IST

Updated : Jun 27, 2024, 8:03 PM IST

ETV Bharat / state

ಬೆಳಗಾವಿ ಸುಳ್ಳು ಅತ್ಯಾಚಾರ ಕೇಸ್: ಮಹಿಳೆ ಸೇರಿ 13 ಆರೋಪಿಗಳಿಗೆ ಮೂರುವರೆ ವರ್ಷ ಜೈಲು ಶಿಕ್ಷೆ - Belagavi Fake rape case

ಗುರುವಾರ ಪ್ರಕರಣದ ವಿಚಾರಣೆ ನಡೆಸಿ 13 ಜನರನ್ನು ದೋಷಿಗಳೆಂದು ತೀರ್ಪು ಪ್ರಕಟಿಸಿದ್ದ ಬೆಳಗಾವಿ ನ್ಯಾಯಾಲಯ ಇಂದು ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ತಪ್ಪಿತಸ್ಥರು ಮೂರುವರೆ ವರ್ಷ ಜೈಲಿನಲ್ಲಿ ಕಂಬಿ ಎಣಿಸಬೇಕಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

ಬೆಳಗಾವಿ: ಹೆಸ್ಕಾಂ ಅಧಿಕಾರಿ ವಿರುದ್ಧದ ಸುಳ್ಳು ಅತ್ಯಾಚಾರ ಆರೋಪ ಪ್ರಕರಣದ ವಿಚಾರಣೆ ನಡೆಸಿ ಮಂಗಳವಾರ ಎಲ್ಲಾ 13 ಜನರನ್ನು ದೋಷಿಗಳೆಂದು ತೀರ್ಪು ಪ್ರಕಟಿಸಿದ್ದ ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಅಪರಾಧಿಗಳಿಗೆ 3 ವರ್ಷ 6 ತಿಂಗಳು ಜೈಲು ಹಾಗೂ ತಲಾ 86 ಸಾವಿರ ರೂ. ದಂಡ ವಿಧಿಸಿ, ಮಹತ್ವದ ತೀರ್ಪು ನೀಡಿದೆ‌.

ಹೆಸ್ಕಾಂನ ಬೆಳಗಾವಿ ವಿಭಾಗದ ಅಧೀಕ್ಷಕ ಇಂಜಿನಿಯರ್​ ತುಕಾರಾಮ ಮಜ್ಜಗಿ ಅವರು ಹೆಸ್ಕಾಂನ ಸಹಾಯಕ ಇಂಜನಿಯರ್ ಬಿ.ವಿ. ಸಿಂಧು ಅವರ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸದ್ಯ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ವಿ. ಸಿಂಧು ಸೇರಿದಂತೆ ಸಹಾಯಕ ಮಾರ್ಗದಾಳು ನಾಥಾಜಿ ಪಾಟೀಲ್​, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಜಿತ್ ಪೂಜಾರಿ, ಸಹಾಯಕ ಮಾರ್ಗದಾಳು ಮಲ್ಲಸರ್ಜ ಶಹಪೂರಕರ, ಕಿರಿಯ ಇಂಜಿನಿಯರ್​ ಸುಭಾಷ್​ ಹಲ್ಲೊಳ್ಳಿ, ಮಾರ್ಗದಾಳು ಈರಪ್ಪ ಪತ್ತಾರ, ಮೇಲ್ವಿಚಾರಕ ಮಲ್ಲಿಕಾರ್ಜುನ ರೇಡಿಹಾಳ, ಹಿರಿಯ ಸಹಾಯಕ ಭೀಮಪ್ಪ ಗೋಡಲಕುಂದರಗಿ, ಸ್ಟೇಷನ್ ಅಟೆಂಡರ್ ಗ್ರೇಡ್‌-2 ರಾಜೇಂದ್ರ ಹಳಿಂಗಳಿ, ಲೆಕ್ಕಾಧಿಕಾರಿ ಸುರೇಶ ಕಾಂಬಳೆ, ಲೈನ್‌ಮ್ಯಾನ್​ಗಳಾದ ಈರಯ್ಯ ಹಿರೇಮಠ, ಮಾರುತಿ ಪಾಟೀಲ್​ ಹಾಗೂ ನಿವೃತ್ತ ಸಹಾಯಕಿ ದಾಕ್ಷಾಯಣಿ ನೇಸರಗಿ ಅವರು ಸುಳ್ಳು ಪ್ರಕರಣ ದಾಲಿಸಿದ್ದರು.

ಈ ಕುರಿತು ಆರೋಪ ಸಾಬೀತಾಗಿರುವ ಹಿನ್ನೆಲೆ ಎಲ್ಲಾ 13 ಜನರು ದೋಷಿಗಳು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಲ್‌. ವಿಜಯಲಕ್ಷ್ಮೀದೇವಿ ಮಂಗಳವಾರ ಮಹತ್ವದ ತೀರ್ಪು ನೀಡಿದ್ದರು.

ತೀರ್ಪು ಪ್ರಕಟವಾದ ಬಳಿಕ ಸರ್ಕಾರಿ ಅಭಿಯೋಜಕ ಮುರಳೀಧರ ಕುಲಕರ್ಣಿ ಮಾಧ್ಯಮಗಳ ಜೊತೆಗೆ ಮಾತನಾಡಿ, "2017 ರಿಂದ 2024 ರವರೆಗೆ 7 ವರ್ಷಗಳ ಕಾಲ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿದೆ. ಎಲ್ಲಾ ಶಿಕ್ಷೆಗಳು ಒಂದೇ ಕಾಲಕ್ಕೆ ಜಾರಿ ಆಗುತ್ತಿದೆ. ಎ ಒನ್ ಆರೋಪಿ ಬಿ.ವಿ.ಸಿಂಧು ಅವರು ದೂರು ಸಲ್ಲಿಸಿದ್ದರೂ, ಅದು ಪ್ರಚೋದನೆ ಮತ್ತು ಸಂಚಿನ ಭಾಗವಾಗಿ ಅಪರಾಧ ಎಸಗಿದ್ದರಿಂದ ಎಲ್ಲಾ 13 ಅಪರಾಧಿಗಳಿಗೂ ಸಮಾನವಾದ ಶಿಕ್ಷೆ ನೀಡಲಾಗಿದೆ" ಎಂದರು.

"ಅಮಾಯಕ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿ, ಆ ಪ್ರಕರಣಕ್ಕೆ ವಿಪರೀತ ಹೈಪ್ ನೀಡಿ‌, ತಪ್ಪಿತಸ್ಥ ಎಂದು ಆರೋಪಿಸಲಾಗಿತ್ತು. ಅಪರಾಧ ಎಸಗದೇ ಇದ್ದರೂ ಓರ್ವ ಹಿರಿಯ, ಪ್ರಾಮಾಣಿಕ ಅಧಿಕಾರಿ ವಿರುದ್ಧ ಸಂಚು ಮಾಡಿ ಆರೋಪ ಮಾಡಲಾಗಿತ್ತು. ಹಿರಿಯ ಅಧಿಕಾರಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದ ಪ್ರಕರಣಗಳಲ್ಲಿ ಶಿಕ್ಷೆ ಆಗಿದ್ದು, ನನಗೆ ತಿಳಿದ ಮಟ್ಟಿಗೆ ವಿರಳಾತಿ ವಿರಳ" ಎಂದು ಹೇಳಿದರು.

"ಉಳಿದ ಆರೋಪಿಗಳ ಪ್ರಚೋದನೆಯಿಂದಾಗಿ, ನಾನು ನನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಸುಳ್ಳು ಪ್ರಕರಣ ದಾಖಲು ಮಾಡಿದ್ದೆ ಎಂದು ಸಿಂಧು ಅವರು ಪ್ರಮಾಣಪತ್ರದಲ್ಲಿ ವಿಶೇಷವಾಗಿ ಹೇಳಿದ್ದನ್ನು ನ್ಯಾಯಾಲಯ ಪರಿಗಣಿಸಿದೆ" ಎಂದು ಮುರಳೀಧರ ತಿಳಿಸಿದರು.

ಇದನ್ನೂ ಓದಿ:ಬೆಳಗಾವಿ ಸುಳ್ಳು ಅತ್ಯಾಚಾರ ಕೇಸ್: 13 ಮಂದಿ ದೋಷಿಗಳು, ಕೋರ್ಟ್ ಮಹತ್ವದ ತೀರ್ಪು - Fake Rape Case

Last Updated : Jun 27, 2024, 8:03 PM IST

ABOUT THE AUTHOR

...view details