ಕರ್ನಾಟಕ

karnataka

By ETV Bharat Karnataka Team

Published : Jun 2, 2024, 6:01 PM IST

Updated : Jun 2, 2024, 6:22 PM IST

ETV Bharat / state

ವಿಧಾನ ಪರಿಷತ್ ಚುನಾವಣೆ: ರಾಯಚೂರಿಗೆ 3 ಸ್ಥಾನ, ಯತೀಂದ್ರ ಸೇರಿ 8 'ಕೈ' ಅಭ್ಯರ್ಥಿಗಳ ಹೆಸರು ಪ್ರಕಟ - Council Election

ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷ ಇಂದು​ 8 ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ.

congress
ಕಾಂಗ್ರೆಸ್​ (ETV Bharat)

ಬೆಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಕೊನೆಗೂ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಇಂದು ಪ್ರಕಟಿಸಿತು. ನಿರೀಕ್ಷೆಯಂತೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಉಳಿದಂತೆ, ಸಚಿವ ಎನ್.ಎಸ್.ಬೋಸರಾಜ್​ ಅವರಿಗೂ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಸಿಎಂ ರಾಜಕೀಯ ಸಲಹೆಗಾರ ಕೆ.ಗೋವಿಂದ ರಾಜು ಅವರಿಗೂ ಮತ್ತೆ ಅವಕಾಶ ಸಿಕ್ಕಿದೆ. ಈ ಮೂವರಿಗೆ ಬಹುತೇಕ ಟಿಕೆಟ್ ಫಿಕ್ಸ್ ಆಗಿತ್ತು. ಇದೀಗ ನಿರೀಕ್ಷೆಯಂತೆ ಟಿಕೆಟ್ ನೀಡಲಾಗಿದೆ.

ಇನ್ನುಳಿದಂತೆ, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ ಕುಮಾರ್, ಮಾಜಿ ಎಂಎಲ್‌ಸಿ ಐವಾನ್ ಡಿಸೋಜಾ, ಶಿವಮೊಗ್ಗದ ಬಿಲ್ಕೀಸ್ ಬಾನು, ಜಗದೇವ್ ಗುತ್ತೇದಾರ್ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿದೆ.

ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಗೆ ಬಸನಗೌಡ ಬಾದರ್ಲಿ ಹೆಸರು ಪ್ರಕಟಿಸಲಾಗಿದೆ.

ಈ ಪಟ್ಟಿಯಲ್ಲಿ ರಾಯಚೂರಿಗೆ 3 ಸ್ಥಾನ ಸಿಕ್ಕಿರುವುದು ಗಮನಾರ್ಹ. ಎನ್.ಎಸ್.ಬೋಸರಾಜ್, ವಸಂತ ಕುಮಾರ್ ಹಾಗು ಬಸನಗೌಡ ಬಾದರ್ಲಿ ರಾಯಚೂರಿನವರಾಗಿದ್ದಾರೆ.

ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಈ ಏಳು ಮಂದಿ ಅಭ್ಯರ್ಥಿಗಳು ನಾಳೆ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಜೂನ್ 13ರಂದು ಚುನಾವಣೆ ನಡೆಯಲಿದೆ.

ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್​ಗೆ ಪರಿಷತ್​ನಲ್ಲಿ 7 ಸ್ಥಾನ ಲಭಿಸಲಿದೆ. ಈ ಸ್ಥಾನಕ್ಕಾಗಿ ಪಕ್ಷದಲ್ಲಿ 300ಕ್ಕೂ ಅಧಿಕ ಆಕಾಂಕ್ಷಿಗಳು ತೀವ್ರ ಲಾಬಿ ನಡೆಸಿದ್ದರು. ಒಂದೆಡೆ ಮಂತ್ರಿಗಳ ಮೂಲಕ ಲಾಬಿ ನಡೆಸಿದರೆ, ಇನ್ನೊಂದೆಡೆ ಡಿಸಿಎಂ, ಸಿಎಂ ಮೂಲಕ ಒತ್ತಡ ಹೇರಿದ್ದರು. ಸಮುದಾಯವಾರು, ಜಾತಿವಾರು, ಅಲ್ಪಸಂಖ್ಯಾತರಿಗೆ ಅವಕಾಶ ನೀಡುವಂತೆ ಸಿಎಂ ಹಾಗೂ ಡಿಸಿಎಂ ಬಳಿ ತೀವ್ರ ಒತ್ತಡ ಹೇರಿದ್ದರು.

ಇತ್ತ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದ ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ, ಚಿಂಚನಸೂರ್ ಪರಿಷತ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಹೈಕಮಾಂಡ್ ಈ ಬಾರಿ ವಲಸಿಗರ ಬದಲು ಮೂಲ ಕಾಂಗ್ರೆಸಿಗರಿಗೆ ಮಣೆ ಹಾಕಿದಂತೆ ಕಂಡುಬರುತ್ತಿದೆ.

ಇದನ್ನೂ ಓದಿ:ನೈರುತ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಜೂನ್ 3ರಂದು ಮತದಾನ - Council Election

Last Updated : Jun 2, 2024, 6:22 PM IST

ABOUT THE AUTHOR

...view details