ಕರ್ನಾಟಕ

karnataka

ETV Bharat / state

ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹುಟ್ಟುವುದಕ್ಕೂ ಮೊದಲೇ ಬ್ರಿಟಿಷರಿಗೆ ಮಣ್ಣು ಮುಕ್ಕಿಸಿದ್ದ ರಾಣಿ ಚನ್ನಮ್ಮ

ಕಿತ್ತೂರು ರಾಣಿ ಚನ್ನಮ್ಮ ಅವರು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹುಟ್ಟುವುದಕ್ಕೂ ಮೊದಲೇ ಅಂದರೆ 1824ರಲ್ಲಿ ಬ್ರಿಟಿಷರ ವಿರುದ್ಧ ದಿಗ್ವಿಜಯ ಸಾಧಿಸಿದ್ದರು. ಈ ಬಗ್ಗೆ ಪ್ರಚಾರ ಸಿಗಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ರಾಣಿ ಚನ್ನಮ್ಮ
ರಾಣಿ ಚನ್ನಮ್ಮ (ETV Bharat)

By ETV Bharat Karnataka Team

Published : 4 hours ago

ಬೆಳಗಾವಿ: ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹುಟ್ಟುವ 4 ವರ್ಷ ಮೊದಲು 1824ರಲ್ಲಿ ಬ್ರಿಟಿಷರ ವಿರುದ್ಧ ದಿಗ್ವಿಜಯ ಸಾಧಿಸಿದ್ದು ಕಿತ್ತೂರು ರಾಣಿ ಚನ್ನಮ್ಮ. ಆದರೆ, ಇತಿಹಾಸದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ಶುರುವಾಗಿದ್ದು 1857ರಲ್ಲಿ ಎಂದು ನಮೂದಾಗಿದೆ. ಇದು ಚನ್ನಮ್ಮನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ದ್ವಿಶತಮಾನದ ವಿಜಯೋತ್ಸವ ಸಂದರ್ಭದಲ್ಲಾದ್ರೂ ಇತಿಹಾಸದಲ್ಲಿ ಆಗಿರುವ ತಪ್ಪು ಸರಿಯಾಗಲಿ ಎಂಬ ಆಗ್ರಹ ಈಗ ಕೇಳಿ ಬರುತ್ತಿದೆ.

ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಜನಿಸಿದ್ದು 1828ರ ನವೆಂಬರ್ 19. ಅವರು ಹುಟ್ಟುವ 4 ವರ್ಷ ಮೊದಲೇ ಅಂದರೆ 1824ರ ಅಕ್ಟೋಬರ್ 23ರಂದು ವೀರವನಿತೆ ಚನ್ನಮ್ಮನವರ ನೇತೃತ್ವದಲ್ಲಿ ಕಿತ್ತೂರು ಸಂಸ್ಥಾನವು ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿತ್ತು. ಇದಕ್ಕೆ ಇಂದು ಭರ್ತಿ 200 ವರ್ಷಗಳ ಸಂಭ್ರಮ. ಇಡೀ ಕಿತ್ತೂರು ನಾಡು ಸಂಭ್ರಮದಲ್ಲಿ ತೇಲುತ್ತಿದ್ದು, 3 ದಿನಗಳ ಕಾಲ ಅದ್ಧೂರಿ ಉತ್ಸವ ಆಚರಿಸಲಾಗುತ್ತಿದೆ. ಆದರೆ, ಕಿತ್ತೂರು ಕಲಿಗಳ ತ್ಯಾಗ, ಬಲಿದಾನಕ್ಕೆ ಸಿಗಬೇಕಾದ ಗೌರವ, ಮಾನ್ಯತೆ ಸಿಗದಿರುವುದು ವಿಪರ್ಯಾಸ.

ರಾಣಿ ಚನ್ನಮ್ಮ ಕುರಿತು ಪ್ರತಿಕ್ರಿಯೆಗಳು (ETV Bharat)

ಚನ್ನಮ್ಮಾಜಿ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕವಾಗಬೇಕು:200 ವರ್ಷಗಳ ಬಳಿಕವಾದರೂ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ 1857 ಅಲ್ಲ, 1824 ಎಂಬುದನ್ನು ಇತಿಹಾಸದಲ್ಲಿ ಮತ್ತು ದೇಶದ ಎಲ್ಲ ರಾಜ್ಯಗಳ ಶಾಲಾ, ಕಾಲೇಜುಗಳ ಪಠ್ಯದಲ್ಲಿ ಅಧಿಕೃತವಾಗಿ ದಾಖಲಿಸುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರ ಚಿಂತನೆ ನಡೆಸಬೇಕಿದೆ. ಕೇವಲ ರಾಜಕೀಯ ದಾಳಕ್ಕಾಗಿ ಚನ್ನಮ್ಮನ ಹೆಸರೇಳಿ ಭಾಷಣ ಮಾಡುವುದಲ್ಲ. ರಾಷ್ಟ್ರಮಟ್ಟದಲ್ಲಿ ರಾಣಿ ಚನ್ನಮ್ಮಾಜಿಗೆ ಗೌರವ ಸಿಗಬೇಕು. ಚನ್ನಮ್ಮಾಜಿ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕವಾಗಬೇಕು. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚನ್ನಮ್ಮನವರ ಹೆಸರಿಟ್ಟು ಅಜರಾಮರಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಈ ಕುರಿತು ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ 'ಈಟಿವಿ ಭಾರತ' ಜೊತೆಗೆ ಮಾತನಾಡಿ, "ಪಠ್ಯ ಪುಸ್ತಕಗಳಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಮೊಟ್ಟ ಮೊದಲು ಕ್ರಾಂತಿ ಮಾಡಿದ್ದು ಎಂದು ನಮೂದಿಸಲಾಗಿದೆ. ಆದರೆ, ಅವರಿಗಿಂತ 33 ವರ್ಷ ಮೊದಲು ಬ್ರಿಟಿಷರ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದು, ನಮ್ಮ ಕಿತ್ತೂರು ಚನ್ನಮ್ಮ. ಆದರೆ, ಉತ್ತರ ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕ ಪ್ರಚಾರ ನಮ್ಮವರಿಗೆ ಸಿಗದಿರುವುದು ದುರಂತ. ನಾವು ಹೇಗೆ ನಮ್ಮ ಪಠ್ಯದಲ್ಲಿ ಝಾನ್ಸಿ ರಾಣಿ ಬಗ್ಗೆ ಓದುತ್ತೇವೋ, ಅದೇ ರೀತಿ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿ ಉತ್ತರ ಭಾರತದ ಶಾಲಾ ಪಠ್ಯದಲ್ಲಿ ನಮ್ಮ ಕಿತ್ತೂರು ಚನ್ನಮ್ಮನ ಶೌರ್ಯ, ಸಾಹಸ, ಪರಾಕ್ರಮದ ಬಗ್ಗೆ ಅಲ್ಲಿನ ಮಕ್ಕಳು ಓದುವಂತೆ ಮಾಡಬೇಕು" ಎಂದು ಆಗ್ರಹಿಸಿದರು.

ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, "ರಾಣಿ ಚನ್ನಮ್ಮ ನಾಡಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾತಾಯಿ. ಅಂಥ ತಾಯಿ ಹುಟ್ಟಿ, ಬೆಳೆದ ಜಿಲ್ಲೆಯಲ್ಲಿನ ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡಲು ಮಿನಾಮೇಷ ಎಣಿಸುತ್ತಿರುವುದು ಸರಿಯಲ್ಲ. 200ನೇ ವಿಜಯೋತ್ಸವದ ಸಂದರ್ಭದಲ್ಲಿಯಾದರೂ ಈ ಸಂಬಂಧ ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡುವಂತೆ" ಒತ್ತಾಯಿಸಿದರು.

ಇದನ್ನೂ ಓದಿ:ಕಿತ್ತೂರು ಉತ್ಸವ-2024ಕ್ಕೆ ಅದ್ಧೂರಿ ಚಾಲನೆ: ಕಣ್ಮನ ಸೆಳೆದ ಕಲಾತಂಡಗಳು

ABOUT THE AUTHOR

...view details