ಕರ್ನಾಟಕ

karnataka

ಬೆಂಗಳೂರಿನಲ್ಲಿನ ಅವ್ಯವಸ್ಥೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ - BJP PROTEST

By ETV Bharat Karnataka Team

Published : May 28, 2024, 3:41 PM IST

Updated : May 28, 2024, 8:13 PM IST

ಬೆಂಗಳೂರಲ್ಲಿ ರಸ್ತೆ ಗುಂಡಿ, ಕಸದ ಸಮಸ್ಯೆ, ಮಳೆಯ ಅವಾಂತರ ಸೇರಿ ಇತರೆ ಅವ್ಯವಸ್ಥೆ ಖಂಡಿಸಿ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ (ETV Bharat)

ಬಿಜೆಪಿ ಪ್ರತಿಭಟನೆ (ETV Bharat)

ಬೆಂಗಳೂರು: ನಗರದಲ್ಲಿನ ರಸ್ತೆ ಗುಂಡಿ, ಅವ್ಯವಸ್ಥೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಫ್ರೀಡಂ ಪಾರ್ಕ್​ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಮಾಜಿ ಡಿಸಿಎಂ ಅಶ್ವತ್ಥ​ನಾರಾಯಣ್, ಮಾಜಿ ಸಚಿವರಾದ ಭೈರತಿ ಬಸವರಾಜ್, ಗೋಪಾಲಯ್ಯ, ಮುನಿರತ್ನ ಸೇರಿ ಬಿಜೆಪಿ ಬೆಂಗಳೂರು ಶಾಸಕರು ಪಾಲ್ಗೊಂಡರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ನಾವು ಬ್ರಾಂಡ್ ಬೆಂಗಳೂರು ಮಾಡುತ್ತೇವೆ ಅಂದ್ರು‌‌. ಸಿಂಗಾಪುರ ಥರ ಮಾಡುತ್ತೇವೆ ಅಂದ್ರು. ವರ್ಷ ಆಯಿತು ಹೇಳಿ. ಆದರೆ ಒಂದು ರೂಪಾಯಿನೂ ಬೆಂಗಳೂರಿಗೆ ಹಣ ಕೊಟ್ಟಿಲ್ಲ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕಾಂಗ್ರೆಸ್ ದೆಹಲಿಯಲ್ಲಿ ಹೋರಾಟ ಮಾಡಿದರು. ಈಗ ಬೆಂಗಳೂರು ಜನ‌ ನಮ್ಮ ಬೆಂಗಳೂರು ತೆರಿಗೆ, ನಮ್ಮ ಹಕ್ಕು ಅಂತಾ ಇದ್ದಾರೆ. ಬೆಂಗಳೂರಿಂದ 65% ತೆರಿಗೆ ಬರುತ್ತಿದೆ. ಇನ್ನೂ ಜೋರು ಮಳೆನೂ ಬಂದಿಲ್ಲ. ಆಗಲೇ ರಸ್ತೆಗಳು ಗುಂಡಿಮಯವಾಗಿವೆ. ಮನೆಗಳಿಗೆ ನೀರು ನುಗ್ಗುತ್ತಿದೆ. ಇದು ಬ್ರಾಂಡ್ ಬೆಂಗಳೂರಾ? ಎಂದು ಕಿಡಿಕಾರಿದರು.

ನಗರದಲ್ಲಿ ಕಸದ ರಾಶಿ ಬಿದ್ದಿದೆ. ಜನವರಿಯಿಂದ ಕಸ ಎತ್ತುವವರಿಗೆ ಸಂಬಳ ಕೊಟ್ಟಿಲ್ಲ. ಸಿಎಂಗೆ ಮೂರು ನಯಾಪೈಸೆ ಬೆಲೆ ಇಲ್ಲ. ಮಳೆ ನುಗ್ಗಿದ ಸ್ಥಳಕ್ಕೆ ಹೋಗಿ ಒಂದು ಫೋಟೋ ಶೂಟ್ ಮಾಡಿಸಿ ಬಂದರು. ನಾಲ್ಕು ಕಡೆ ಭೇಟಿ ನೀಡಿದ್ದಾರೆ. ಒಂದು ನಯಾ ಪೈಸೆ ಹಣ ಕೊಟ್ಟಿಲ್ಲ. ಮುಖ್ಯಮಂತ್ರಿ ಅವರದ್ದು ಹೋದ ಸಿದ್ದ ಬಂದ ಸಿದ್ದ ಎಂಬಂತಾಗಿದೆ. ಬೆಂಗಳೂರನ್ನು ಲೂಟಿ ಮಾಡಲು ಹೊರಟಿದ್ದಾರೆ. ಟನೆಲ್ ರಸ್ತೆ ಅಂತ ಹೇಳುತ್ತಾರೆ. ಫೆರಿಪರೆಲ್ ರಸ್ತೆಯನ್ನೇ ಮಾಡಲು ಆಗಿಲ್ಲ. ದುಡ್ಡು ಹೊಡೆಯಲು ಟನೆಲ್ ರಸ್ತೆ ಮಾಡುತ್ತಿದ್ದೀರಾ. ದುಡ್ಡು ದೆಹಲಿಗೆ ಕಳುಹಿಸಲು ಟನೆಲ್ ರಸ್ತೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು:ಅಧಿಕಾರಿ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿ, ವಾಲ್ಮೀಕಿ ನಿಗಮದ ಅಧಿಕಾರಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಹೃದಯ ವಿದ್ರಾವಕ ಘಟನೆ. ಇದು ಲೂಟಿ ಸರ್ಕಾರ, ಲಂಚಬಾಕ ಸರ್ಕಾರ. ಲಂಚ ತೆಗೆದುಕೊಂಡಿದ್ದು ಸಾಬೀತಾದರೆ ಅಧಿಕಾರ ತ್ಯಜಿಸೋದಾಗಿ ಸಿದ್ದರಾಮಯ್ಯ ಹೇಳಿದ್ರು. ಈಗ ಆ ಅಧಿಕಾರಿ ವಿವರವಾಗಿ ಅಧಿಕಾರಿಗಳ ಹೆಸರು, ಮಂತ್ರಿ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗೇನು ಹೇಳ್ತಾರೆ ಸಿದ್ದರಾಮಯ್ಯ. ಚಂದ್ರಶೇಖರನ್ ಸಾವಿಗೆ ನೇರ ಕಾರಣ ಸರ್ಕಾರ. ಲೂಟಿಕೋರರು ಕಾಂಗ್ರೆಸ್ ನವರು. 187 ಕೋಟಿ ಲೂಟಿ ಮಾಡಿದ್ದಾರೆ, ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಮಾಜಿ ಡಿಸಿಎಂ ಅಶ್ವತ್ಥನಾರಾಯಣ್, ಬೆಂಗಳೂರನ್ನು ನಿರ್ಲಕ್ಷ್ಯ ಮಾಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಕೊಡಲು ಪ್ರತಿಭಟನೆ ಮಾಡುತ್ತಿದ್ದೇವೆ. ಹೂಳೆತ್ತುವ ಕೆಲಸವನ್ನೂ ಮಾಡುತ್ತಿಲ್ಲ. ರಾಜಕಾಲುವೆ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಸಾವಿರಾರು ಕೋಟಿ ಕೊಟ್ಟಿತ್ತು. ಆ ಹಣವನ್ನು ಖರ್ಚು ಮಾಡುತ್ತಿಲ್ಲ ದೂರಿದರು.

ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಮಾತನಾಡಿ, ಕಿವಿ ಇದ್ದು ಕಿವುಡಾಗಿದೆ ಈ ಸರ್ಕಾರ. ಅಧಿಕಾರ ಬಂದ ಒಂದು ವರ್ಷದಲ್ಲಿ ಇಂಥ ಭ್ರಷ್ಟ ಸರ್ಕಾರವನ್ನು ನಾವು ನೋಡಿಲ್ಲ. ಯಾವಾಗ ಜನ ಗುಂಡಿಯಲ್ಲಿ ಬಿದ್ದು ಸಾಯಿತಾರೋ ಗೊತ್ತಿಲ್ಲ. ಒಬ್ಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೂರಾರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಸಿಎಂ, ಡಿಸಿಎಂ, ಸಚಿವರು ಚೆಕ್ ಬರೆಸಿಕೊಂಡಿರುವುದು ನಮಗೆ ಗೊತ್ತಿದೆ. ಯಾವ ಅಧಿಕಾರಿಯೂ ಸರಿಯಾಗಿ ಕೆಲಸ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ:ಪರಿಷತ್‌​ಗೆ 300ಕ್ಕೂ ಹೆಚ್ಚು ಆಕಾಂಕ್ಷಿಗಳು, ಟಿಕೆಟ್‌ ಹಂಚಿಕೆ ನಿರ್ಧಾರ ಹೈಕಮಾಂಡ್​ಗೆ ಬಿಟ್ಟಿದ್ದು: ಡಿಕೆಶಿ - Council Election

Last Updated : May 28, 2024, 8:13 PM IST

ABOUT THE AUTHOR

...view details