ಕರ್ನಾಟಕ

karnataka

ಕುಂದಾನಗರಿಯಲ್ಲಿ ಗಣೇಶೋತ್ಸವಕ್ಕೆ ಸಿದ್ಧತೆ: ಮಾರುಕಟ್ಟೆ ಫುಲ್ ರಶ್, ಅಲಂಕಾರಿಕ ವಸ್ತುಗಳ ಖರೀದಿ ಭರಾಟೆ - Ganesha Festival Market Rush

By ETV Bharat Karnataka Team

Published : Sep 6, 2024, 9:46 AM IST

ಬೆಳಗಾವಿಯಲ್ಲಿ ಗಣೇಶ ಹಬ್ಬದ ಆಚರಣೆಗೆ ಸಿದ್ಧತೆ ಜೋರಾಗಿದೆ. ಜನರು ಮಾರುಕಟ್ಟೆಗೆ ಆಗಮಿಸಿ, ಪೂಜಾ ಸಾಮಗ್ರಿ, ಹೂ ಹಣ್ಣು ಖರೀದಿಯಲ್ಲಿ ತೊಡಗಿದ್ದಾರೆ.

ಗಣೇಶೋತ್ಸವಕ್ಕೆ ಸಿದ್ಧತೆ
ಬೆಳಗಾವಿಯಲ್ಲಿ ಗಣೇಶೋತ್ಸವಕ್ಕೆ ಸಿದ್ಧತೆ (ETV Bharat)

ಕುಂದಾನಗರಿಯಲ್ಲಿ ಗಣೇಶೋತ್ಸವಕ್ಕೆ ಸಿದ್ಧತೆ (ETV Bharat)

ಬೆಳಗಾವಿ: ವಿಘ್ನ ವಿನಾಯಕನನ್ನು ಅದ್ಧೂರಿಯಾಗಿ ಸ್ವಾಗತಿಸಲು ಕುಂದಾನಗರಿ ಬೆಳಗಾವಿ ಸಜ್ಜಾಗುತ್ತಿದ್ದು, ಹಬ್ಬಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಇಲ್ಲಿನ ಮಾರುಕಟ್ಟೆಗಳಲ್ಲಿ ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದು, ಎಲ್ಲೆಡೆ ಹಬ್ಬ ಕಳೆಗಟ್ಟಿದೆ.

ಬೆಳಗಾವಿಯ ಗಣೇಶೋತ್ಸವ ವಿಭಿನ್ನವಾಗಿರುತ್ತದೆ. ಮಹಾರಾಷ್ಟ್ರ ಬಿಟ್ಟರೆ ಬೆಳಗಾವಿಯಲ್ಲೇ ಅದ್ಧೂರಿಯಾಗಿ ನಡೆಯುತ್ತದೆ. ಕಳೆದ ವರ್ಷ ಬರಗಾಲವಿದ್ದ ಕಾರಣ ಹಬ್ಬ ಸ್ವಲ್ಪ ಮಂಕಾಗಿತ್ತು. ಆದರೆ, ಈ ಬಾರಿ ಉತ್ತಮ ಮಳೆಯಾಗಿದೆ. ಜನ ವಿಜೃಂಭಣೆಯಿಂದ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಬೆಳಗಾವಿಯ ಗಣಪತಿ ಗಲ್ಲಿ, ರವಿವಾರ ಪೇಟೆ, ಖಡೇಬಜಾರ, ಮಾರುತಿ ಗಲ್ಲಿ‌ ಸೇರಿ ಹಲವೆಡೆ ಜನಜಂಗುಳಿ ಹೆಚ್ಚಿತ್ತು.

ಗಮನ ಸೆಳೆದ ಅಲಂಕಾರಿಕ ವಸ್ತುಗಳು:ಗಣೇಶನ ಮೂರ್ತಿಗೆ ಸಾಮಾನ್ಯವಾಗಿ ವಿಶೇಷ ಅಲಂಕಾರ ಮಾಡಲಾಗುತ್ತದೆ. ಹಾಗಾಗಿ, ಬಟ್ಟೆ ಮಾಲೆ, ಮುತ್ತಿನ ಮಾಲೆ, ಪ್ಲಾಸ್ಟಿಕ್ ಹೂವಿನ ಮಾಲೆ, ಪ್ಲಾಸ್ಟಿಕ್ ಚೆಂಡು ಹೂವಿನ‌ ಮಾಲೆ, ಮುತ್ತಿನ ತೋರಣ, ಪ್ಲಾಸ್ಟಿಕ್ ಹೂವಿನ ತೋರಣ, ವಾಲ್ ಪೀಸ್, ಲಟ್ಕನ್, ಗಣಪತಿ ಆಸನ ಸೇರಿ ವಿವಿಧ ಅಲಂಕಾರಿಕ ವಸ್ತುಗಳ ವ್ಯಾಪಾರ ಜೋರಾಗಿತ್ತು. ಒಂದಕ್ಕಿಂತ ಒಂದು ವಸ್ತುಗಳು ಆಕರ್ಷಣೀಯವಾಗಿದ್ದು, ಕಲರ್ ಕಲರ್ ಪ್ಪಾಸ್ಟಿಕ್ ಹೂವಿನ ಮಾಲೆಗಳು, ತೋರಣಗಳು ನಿಜವಾದ ಹೂವುಗಳನ್ನೇ ನಾಚಿಸುವಂತಿದ್ದವು.

ಗಣೇಶೋತ್ಸವಕ್ಕೆ ತಯಾರಿ: ಬೆಳಗಾವಿಯ ಮಾರುಕಟ್ಟೆಯಲ್ಲಿ ಜನಜಂಗುಳಿ (ETV Bharat)

ಪೂಜಾ ಸಾಮಗ್ರಿ ಖರೀದಿ:ಪೂಜೆಗೆ ಬೇಕಾದ ಊದುಬತ್ತಿ, ಎಣ್ಣೆ, ಕರ್ಪೂರ, ಗೆಜ್ಜೆ ವಸ್ತ್ರ, ಆಸನ, ಅಲಂಕಾರಿಕ ವಸ್ತುಗಳು, ರಂಗೋಲಿ, ಲಟಕನ್, ಪಟಾಕಿ, ಅರಿಶಿಣ, ಕುಂಕುಮ, ಸಿಂಧೂರ, ಅಷ್ಟಗಂಧ, ಬತ್ತಿ, ಜೇನುತುಪ್ಪ, ಅತ್ತರ, ಕವಡಿ ಊದು, ಧೂಪ, ತೆಂಗಿನಕಾಯಿ, ಹಣ್ಣುಗಳನ್ನಿಡುವ ತಾಟುಗಳು ಸೇರಿ ಇನ್ನಿತರ ವಸ್ತುಗಳನ್ನು ಜನ ಖರೀದಿಸುತ್ತಿದ್ದರು. ಅದೇ ರೀತಿ ವಿದ್ಯುತ್ ಅಲಂಕಾರಿಕ ವಸ್ತುಗಳು, ಸೌಂಡ್‌ಸಿಸ್ಟಮ್ಸ್, ಸ್ಪೀಕರ್, ಎಲ್‌ಇಡಿ ಫೋಕಸ್ ಲೈಟ್, ವಿದ್ಯುತ್ ದೀಪಗಳು, ಲೇಸರ್, ಬಗೆ ಬಗೆಯ ಲೈಟ್ ಸರಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದವು.‌ ಇದಲ್ಲದೇ ಗ್ರಾಹಕರು ಹೊಸ ಬಟ್ಟೆಗಳನ್ನು ಖರೀದಿಸುತ್ತಿದ್ದರು.

ಹೂವಿನ ಮಂಟಪಕ್ಕೆ ಬೇಡಿಕೆ:ವ್ಯಾಪಾರಿ ದೀಪಕ್ ಗೋಕಾಕ್ 'ಈಟಿವಿ ಭಾರತ' ಜೊತೆಗೆ ಮಾತನಾಡಿ, "ಮಳೆ ಇದ್ದರೂ ವ್ಯಾಪಾರ ಚೆನ್ನಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ವಿವಿಧ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಪ್ಲಾಸ್ಟಿಕ್ ಹೂವಿನ‌ ಮಾಲೆ 100-250 ರೂ., ಮುತ್ತಿನ‌ ಮಾಲೆ 20-1500 ರೂ., ಖುಲ್ಲಾ ಪ್ಲಾಸ್ಟಿಕ್ ಹೂವು 12 ಪೀಸ್​​ಗೆ 100 ರೂ. ಹೀಗೆ ನಮ್ಮಲ್ಲಿ 50 ರೂ.ಯಿಂದ 7 ಸಾವಿರ ರೂ.‌ವರೆಗೆ ಅಲಂಕಾರಿಕ ವಸ್ತುಗಳು ಮಾರಾಟಕ್ಕೆ ಲಭ್ಯ ಇದೆ. ಹೂವಿನ ಮಂಟಪ 2 ಸಾವಿರದಿಂದ 7 ಸಾವಿರ ರೂ.ವರೆಗೆ ದರವಿದೆ. ಇವುಗಳಿಗೆ ಜನ ಹೆಚ್ಚು ಬೇಡಿಕೆ ಇಡುತ್ತಿದ್ದಾರೆ. ಬಹುತೇಕ ಎಲ್ಲ ವಸ್ತುಗಳನ್ನು ಮುಂಬೈನಿಂದ ತಂದಿದ್ದೇವೆ" ಎಂದು ಹೇಳಿದರು.

ಇದನ್ನೂ ಓದಿ: ಗೌರಿ -ಗಣೇಶ ಹಬ್ಬ ಹೇಗೆ ಆಚರಿಸಬೇಕು; ಅರ್ಚಕರ ಸಂದರ್ಶನ - Priest Interview

ನಗರಸೇವಕಿ ವೀಣಾ ವಿಜಾಪುರೆ ಮಾತನಾಡಿ, "ಮನೆಮಗ ಗಣಪನನ್ನು ಬರಮಾಡಿಕೊಳ್ಳಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಮನೆಯಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಬೇಕಿರುವ ಅಲಂಕಾರಿಕ ವಸ್ತುಗಳನ್ನು ಖರೀದಿಸಿದ್ದೇನೆ. ಅದ್ಧೂರಿ ಗಣೇಶೋತ್ಸವ ಆಚರಿಸುತ್ತೇವೆ. ಎಲ್ಲರಿಗೂ ಮುಂಚಿತವಾಗಿಯೇ ಹಬ್ಬದ ಶುಭಾಶಯಗಳು" ಎಂದರು.

ಗಣೇಶೋತ್ಸವಕ್ಕೆ ಬಗೆ ಬಗೆ ಅಲಂಕಾರಿಕ ವಸ್ತುಗಳ ಮಾರಾಟ (ETV Bharat)

ದುಬೈನಿಂದ ಬಂದಿದ್ದೇವೆ:ದುಬೈನಲ್ಲಿ ನೆಲೆಸಿರುವ ಶ್ವೇತಾ ಆಕಾಶ ಸೋಗಲಿ ಮಾತನಾಡಿ, "ಗಣೇಶ ಮಂಟಪದ ಅಲಂಕಾರಕ್ಕೆ ಲೈಟಿಂಗ್ಸ್, ಹೂವು ಸೇರಿ ಮತ್ತಿತರ ವಸ್ತುಗಳನ್ನು ಕೊಂಡುಕೊಂಡಿದ್ದೇವೆ. ನಾವು ದುಬೈನಲ್ಲಿ ಇರುತ್ತೇವೆ. ಹಬ್ಬಕ್ಕಂತಾನೇ ಬಂದಿದ್ದೇವೆ. ಬೆಳಗಾವಿಯಲ್ಲಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸುವುದನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದೇವೆ" ಎಂದು ಹರ್ಷ ವ್ಯಕ್ತಪಡಿಸಿದರು.

ಗಣೇಶನ ಮೂರ್ತಿಗೆ ಅರ್ಪಿಸಲು ಲಡ್ಡು, ಮತ್ತಿಹೂವು, ಮತ್ತಿಕಾಯಿ ಸೇರಿದಂತೆ ವಿವಿಧ ಹೂವುಗಳನ್ನು ಮಾರಾಟಕ್ಕಿಡಲಾಗಿತ್ತು. ಈ ಹೂವುಗಳನ್ನು ಸೇರಿಸಿ ಒಂದು ಕಟ್ಟು ಮಾಡಿ, 50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಬಾಳೆಹಣ್ಣು, ಸೇಬು, ಚಿಕ್ಕು, ಸೀತಾಫಲ, ಮೋಸಂಬಿ ಸೇರಿ ಮತ್ತಿತರ ಹಣ್ಣುಗಳ ವ್ಯಾಪಾರವೂ ಜೋರಾಗಿತ್ತು. ಗ್ರಾಹಕರಿಗೆ ಅನುಕೂಲವಾಗಲೆಂದು ಐದು ತರಹದ ಒಂದೊಂದು ಹಣ್ಣು ಸೇರಿಸಿ 150 ರೂಪಾಯಿ ದರ‌ ನಿಗದಿಪಡಿಸಿ ವ್ಯಾಪಾರಿಗಳು ಮಾರುತ್ತಿದ್ದಾರೆ. ಅದೇ ರೀತಿ ಸೇವಂತಿ, ಗುಲಾಬಿ, ಚೆಂಡು ಹೂವುಗಳನ್ನು ಹೆಚ್ಚಾಗಿ ಖರೀದಿಸುತ್ತಿರುವುದು ಕಂಡುಬಂತು.

ಇದನ್ನೂ ಓದಿ: ಅಕ್ಷರಧಾತೆಗೆ ಒಲಿದ ಪ್ರಶಸ್ತಿಯ ಗರಿ; ಆರು ಸಹೋದರಿಯರು ಶಿಕ್ಷಕಿಯರು, ಕೈಹಿಡಿದ ಪತಿಯೂ ಮೇಷ್ಟ್ರು, ಮಗಳೂ ಅಧ್ಯಾಪಕಿ! - State Level Best Teacher Award

ABOUT THE AUTHOR

...view details