ಕರ್ನಾಟಕ

karnataka

ETV Bharat / state

ಡಿ.ಕೆ.ಸುರೇಶ್​ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಚಿಂತನೆ: ಸಂಸದ ಬಿ.ವೈ.ರಾಘವೇಂದ್ರ

ಸಂಸದ ಡಿ.ಕೆ.ಸುರೇಶ್​ ​ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಲು ಚಿಂತನೆ ನಡೆಸಿದ್ದೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

By ETV Bharat Karnataka Team

Published : Feb 7, 2024, 9:56 PM IST

ಸಂಸದ ಬಿ.ವೈ.ರಾಘವೇಂದ್ರ ವಾಗ್ದಾಳಿ
ಸಂಸದ ಬಿ.ವೈ.ರಾಘವೇಂದ್ರ ವಾಗ್ದಾಳಿ

ಹುಬ್ಬಳ್ಳಿ:ಕಾಂಗ್ರೆಸ್ ನಾಯಕರು ಈ ಹಿಂದೆ ದೇಶ ವಿಭಜಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಈಗಲೂ ಅದೇ ಚಾಳಿ ಮುಂದುವರೆಸಿರುವ ಸಂಸದ ಡಿ.ಕೆ.ಸುರೇಶ್​ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಲು ಚಿಂತನೆ ನಡೆಸಿದ್ದೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಮಂಗಳವಾರ ನಗರದಲ್ಲಿ ಮಾತನಾಡಿದ ಅವರು, ದೇಶ, ರಾಜ್ಯ, ನಗರಗಳು ಅಭಿವೃದ್ಧಿಯಾಗಲಿ ಎಂಬ ಕಾರಣಕ್ಕೆ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆಯೇ ಹೊರತು ದೇಶವನ್ನು ಇಬ್ಭಾಗಿಸಲು ಅಲ್ಲ. ದೇಶವನ್ನು ಇಬ್ಭಾಗ ಮಾಡುವ ಉದ್ದೇಶ ಅವರ ಮನದಲ್ಲಿ ಇದ್ದುದಕ್ಕೆ, ಆ ತರಹದ ಹೇಳಿಕೆ ಅವರ ಬಾಯಲ್ಲಿ ಬಂದಿದೆ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಇದಕ್ಕೆ ನಮ್ಮಲ್ಲಿ ಆಸ್ಪದವಿಲ್ಲ. ಹೀಗಾಗಿ ಡಿ.ಕೆ.ಸುರೇಶ್ ಹೇಳಿಕೆಗೆ ಕ್ಷಮೆ ಇಲ್ಲ. ಅವರ ವಿರುದ್ಧ ಲೋಕಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಲು ಚಿಂತನೆ ನಡೆಸಲಾಗುವುದು ಎಂದರು.

ಕೇಂದ್ರ ಸರ್ಕಾರ ಮೊನ್ನೆ ಮಂಡಿಸಿದ್ದು ಮಧ್ಯಂತರ ಬಜೆಟ್‌. ಅದು ಹೊಸ ಬಜೆಟ್‌ ಅಲ್ಲ. ಅದನ್ನೇ ಮುಂದಿಟ್ಟುಕೊಂಡು ಡಿ.ಕೆ.ಸುರೇಶ್​ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ. ರಾಷ್ಟ್ರ ಇಬ್ಭಾಗದ ಹೇಳಿಕೆ ನೀಡಿದ್ದಾರೆ. ಇದನ್ನೇ ಪ್ರತಿವಾದಿಸುತ್ತಿರುವ ಕಾಂಗ್ರೆಸ್ ನಾಯಕರು ದೆಹಲಿ ಚಲೋ ಎಂದು ಹೊರಟಿದ್ದಾರೆ. ರಾಜಕೀಯಕ್ಕಾಗಿ ಇವರು ವ್ಯವಸ್ಥಿತ ಯೋಜನೆ ಸಿದ್ಧಪಡಿಸಿ, ಜನರ ಗಮನ ಬೇರೆಡೆ ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಅನ್ಯಾಯ ಆಗಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ 70 ಸಾವಿರ ಕೋಟಿ ರೂ ತೆರಿಗೆ ಹಣ ರಾಜ್ಯಕ್ಕೆ ಬಂದಿತ್ತು. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ 2.20 ಲಕ್ಷ ಕೋಟಿ ರೂ ಅನುದಾನ ಬಂದಿದೆ. ಸ್ವಾತಂತ್ರ್ಯಾ ನಂತರದಿಂದ 2014ರವರೆಗೆ ರೈಲ್ವೆ ವಿದ್ಯುದ್ದೀಕರಣ ಮಾರ್ಗ ಕೇವಲ 6 ಸಾವಿರ ಕಿ.ಮೀ.ಇತ್ತು. ಆದರೆ, ಮೋದಿ ಸರ್ಕಾರದ ಅವಧಿಯಲ್ಲಿ 13ಸಾವಿರ ಕಿ.ಮೀ. ವಿದ್ಯುತ್ ರೈಲು ಮಾರ್ಗ ಮಾಡಲಾಗಿದೆ. ಇಷ್ಟೆಲ್ಲಾ ಆದಾಗಲೂ ತಾರತಮ್ಯ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.

ಕೇವಲ ಎಂಟು ತಿಂಗಳಲ್ಲಿ ರಾಜ್ಯ ಸರ್ಕಾರದ ಬಣ್ಣ ಬಯಲಾಗಿದೆ. ಅವರದ್ದೇ ಶಾಸಕರು, ಸಚಿವರು ಭ್ರಮನಿರಸನಗೊಂಡು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ‌. ಹತ್ತಾರು ಪೊಳ್ಳು ಭರವಸೆ ನೀಡಿ, ಅವುಗಳನ್ನು ಪೂರೈಸಲಾಗದೇ ಜನರನ್ನೂ ವಿರೋಧ ಕಟ್ಟಿಕೊಂಡಿದ್ದಾರೆ. ಯಾವ ಮುಖ ಇಟ್ಟುಕೊಂಡು ಲೋಕಸಭೆ ಚುನಾವಣೆಗೆ ಮತಯಾಚನೆ ಮಾಡುತ್ತಾರೆ. ಹೀಗಾಗಿ ತಮ್ಮ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಕೇಂದ್ರದ ಕಡೆ ಬೊಟ್ಟು ಮಾಡುತ್ತ ನಾಟಕವಾಡುತ್ತಿದ್ದಾರೆ ಎಂದು ಹರಿಹಾಯ್ದರು.

ದೆಹಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ನನಗೂ ಸಿಎಂ ಪತ್ರ ಬರೆದಿದ್ದಾರೆ. ರಾಜ್ಯಕ್ಕೆ ಅನ್ಯಾಯವಾಗಿದ್ದರೆ ಹೋಗಬಹುದಿತ್ತು. ದೂರದೃಷ್ಟಿಯ ಯೋಜನೆ ಇದ್ದರೆ ಪಾಲ್ಗೊಳ್ಳುತ್ತಿದ್ದೆ. ಆದರೆ, ಇದೆಲ್ಲ ಕೇವಲ ಚುನಾವಣೆ, ರಾಜಕೀಯಕ್ಕೆ ನಡೆಯುವ ಹೋರಾಟ ಎಂದು ವ್ಯಂಗ್ಯ ವಾಡಿದರು.

ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಓಲೈಕೆಯಲ್ಲಿ ಮಗ್ನವಾಗಿದೆ. ಇದರಿಂದ ಬಹುಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಹಿಂದು-ಮುಸ್ಲಿಂ ಸಾಮರಸ್ಯದ ಜೀವನ ನಡೆಸದಂತೆ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಂಡ್ಯದ ಕೆರೆಗೋಡು ಹನುಮ ಧ್ವಜ ವಿಚಾರದಲ್ಲಿ ರಾಜ್ಯ ಸರ್ಕಾರವೇ ಗೊಂದಲ ಸೃಷ್ಟಿ ಮಾಡಿದೆ. ಪೊಲೀಸರನ್ನು ಬಳಸಿಕೊಂಡು ದಬ್ಬಾಳಿಕೆ ನಡೆಸಲಾಗಿದೆ. ಅನ್ಯ ಕೋಮಿನ ಧ್ವಜಗಳು ಎಲ್ಲೆಡೆ ರಾರಾಜಿಸುತ್ತಿದ್ದರೂ ಅವುಗಳ ಗೋಜಿಗೆ ಸರ್ಕಾರ ಹೋಗುತ್ತಿಲ್ಲ. ಹನುಮ ಧ್ವಜವನ್ನು ತೆರವು ಗೊಳಿಸುವಲ್ಲಿ ಯಶಸ್ವಿಯಾಗಿದೆ ಇದು ಹಿಂದೂಗಳಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.

ಇದನ್ನೂ ಓದಿ:ಉತ್ತರ-ದಕ್ಷಿಣವೆಂಬ ದೇಶ ವಿಭಜನೆಯ ಹೇಳಿಕೆ ನಿಲ್ಲಿಸಿ: ಕಾಂಗ್ರೆಸ್ ವಿರುದ್ಧ ಮೋದಿ ಕಿಡಿ

ABOUT THE AUTHOR

...view details