ಕರ್ನಾಟಕ

karnataka

ETV Bharat / state

ಬೆಳಗಾವಿ: ಸುವರ್ಣಸೌಧದ ಕಾರಿಡಾರ್​ನಲ್ಲಿ ಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನ - C T RAVI STATEMENT ROW

ಬೆಳಗಾವಿ ಸುವರ್ಣಸೌಧದ ಕಾರಿಡಾರ್​ನಲ್ಲೇ ಬಿಜೆಪಿ ಎಂಎಲ್​ಸಿ ಸಿ.ಟಿ.ರವಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

C T RAVI STATEMENT ROW
ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನ (ETV Bharat)

By ETV Bharat Karnataka Team

Published : Dec 19, 2024, 5:57 PM IST

Updated : Dec 19, 2024, 6:13 PM IST

ಬೆಳಗಾವಿ: ಸಚಿವೆಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಸುವರ್ಣಸೌಧದ ಪೂರ್ವ ಕಾರಿಡಾರ್​ನಲ್ಲಿ ಸಚಿವೆಯ ಬೆಂಬಲಿಗರು ಇಂದು ಪರಿಷತ್‌ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರಿಗೆ ಮುತ್ತಿಗೆ ಹಾಕಿ, ಹಲ್ಲೆಗೆ ಯತ್ನಿಸಿದ ಘಟನೆ ನಡೆಯಿತು.

ಸಿ.ಟಿ.ರವಿ ವಿಧಾನಸಭೆ ಲಾಂಜ್​ನಿಂದ ತೆರಳುತ್ತಿರುವಾಗ ಮುತ್ತಿಗೆ ಹಾಕಿದ ಬೆಂಬಲಿಗರು, ಅವಾಚ್ಯ ಪದಗಳಿಂದ ಬಯ್ಯಲು ಆರಂಭಿಸಿದರು. ಸುಮಾರು 30ಕ್ಕೂ ಅಧಿಕ ಮಂದಿ ಲಾಂಜ್ ಕಡೆ ನುಗ್ಗಿ ಹಲ್ಲೆಗೂ ಯತ್ನಿಸಿದರು. ಕೂಡಲೇ ಮಾರ್ಷಲ್​ಗಳು ಮಧ್ಯಪ್ರವೇಶಿಸಿ ಸಿ.ಟಿ.ರವಿಯನ್ನು ಒಳಕರೆತಂದು, ಕಾರಿಡಾರ್ ಗೇಟ್ ಹಾಕಿದರು.

ಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನ (ETV Bharat)

ಈ ವೇಳೆ ಬೆಂಬಲಿಗರು ಸಿ.ಟಿ.ರವಿ ಮೇಲೆ ಅವಾಚ್ಯ ಪದ ಬಳಸಿ, ಹೊರಬಿಡುವಂತೆ ಆಗ್ರಹಿಸಿದರು. ಧಿಕ್ಕಾರ ಕೂಗಿದರು. ಇದನ್ನು ಮಾರ್ಷಲ್​ಗಳು ಅಸಹಾಯಕರಾಗಿ ವೀಕ್ಷಿಸುತ್ತಿದ್ದರು.‌ ಈ ಬೆಳವಣಿಗೆಯಿಂದ ಕೋಪಗೊಂಡ ಸಿ.ಟಿ.ರವಿ ಕಾರಿಡಾರ್​ನಲ್ಲೇ ಧರಣಿ ಕುಳಿತರು. "ಗೂಂಡಾಗಳನ್ನು ಹೇಗೆ ಒಳಕ್ಕೆ ಬಿಟ್ಟಿದ್ದೀರಿ?. ನಾನು ಇಲ್ಲಿಂದ ಹೋಗಲ್ಲ. ನಾನು ಹೆದರುವುದಿಲ್ಲ" ಎಂದು ಮಾರ್ಷಲ್​ಗಳು, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.

ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಶಾಸಕರು ಆಗಮಿಸಿ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. "ಗೂಂಡಾಗಳನ್ನು ಕೂಡಲೇ ಬಂಧಿಸಿ.‌ ಎಂಎಲ್​ಸಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಗೂಂಡಾಗಳನ್ನು ಸುವರ್ಣಸೌಧದ ಕಾರಿಡಾರ್​ ಬಳಿ ಹೇಗೆ ಬಿಟ್ಟಿದ್ದೀರಿ" ಎಂದು ಪ್ರಶ್ನಿಸಿದರು.

ಸುವರ್ಣಸೌಧದಲ್ಲಿ ಭದ್ರತಾ ಲೋಪ: ಅಧಿವೇಶನ ನಡೆಯುತ್ತಿರುವಾಗ ಸುಮಾರು 50ಕ್ಕೂ ಅಧಿಕ ಸಚಿವೆಯ ಬೆಂಬಲಿಗರು ಸುವರ್ಣಸೌಧದ ಕಾರಿಡಾರ್‌ಗೆ ನುಗ್ಗುವ ಮೂಲಕ ಭದ್ರತಾ ಲೋಪವಾಗಿದೆ.‌ ಕಾರಿಡಾರ್‌ನಲ್ಲಿ ದಾಂಧಲೆ ಆಗುತ್ತಿದ್ದರೂ ಮೊದಲಿಗೆ ಮಾರ್ಷಲ್‌ಗಳೇ ಪರಿಸ್ಥಿಯನ್ನು ನಿಭಾಯಿಸಿದರು. ಸುಮಾರು ಅರ್ಧ ತಾಸಿನ‌ ಬಳಿಕ ಪೊಲೀಸರು ಆಗಮಿಸಿ ಬೆಂಬಲಿಗರನ್ನು ಹೊರಕರೆದುಕೊಂಡು ಹೋಗಿದ್ದಾರೆ.‌ ದಾಂಧಲೆ ನಡೆದು ಅರ್ಧ ತಾಸು ಕಳೆದರೂ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿರಲಿಲ್ಲ. ಬಳಿಕ ಎಡಿಜಿಪಿ ಹಿತೇಂದ್ರ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಬಿಜೆಪಿ ಶಾಸಕರು, "ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಿ" ಎಂದು ಒತ್ತಾಯಿಸಿದರು. "ಸದನ ನಡೆಯುತ್ತಿರುವಾಗಲೇ ಪೂರ್ವ ಕಾರಿಡಾರ್​ಗೆ ಇಷ್ಟೊಂದು ಜನ ಆಗಮಿಸಿರುವುದು ಭದ್ರತಾ ವೈಫಲ್ಯ" ಎಂದು ಆರೋಪಿಸಿದರು.

ಇದನ್ನೂ ಓದಿ:ಹೆಬ್ಬಾಳ್ಕರ್ ಬಗ್ಗೆ ಸಿಟಿ ರವಿ ಆಕ್ಷೇಪಾರ್ಹ ಪದ ಬಳಕೆ ಆರೋಪ: ಪರಿಷತ್​ನಲ್ಲಿ‌ ಗದ್ದಲ, ಸಭಾಪತಿಗೆ ದೂರು ಕೊಡಲು ಮುಂದಾದ ಕೈ ಸದಸ್ಯರು - UPROAR AGAINST CT RAVI STATEMENT

Last Updated : Dec 19, 2024, 6:13 PM IST

ABOUT THE AUTHOR

...view details