ಕರ್ನಾಟಕ

karnataka

ಮುಂದಿನ ದಿನಗಳಲ್ಲಿ ಕನ್ನಡ ಕಲಿತು ಮಾತನಾಡುತ್ತೇನೆ: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ - DCM PAWAN KALYAN

By ETV Bharat Karnataka Team

Published : Aug 8, 2024, 5:15 PM IST

ಕನ್ನಡ ಭಾಷೆ ಬಗ್ಗೆ ಹೆಮ್ಮೆ, ಗೌರವವಿದೆ. ಕನ್ನಡ ಭಾಷೆ ಕಲಿತು ಮುಂದೆ ಕನ್ನಡದಲ್ಲೇ ಮಾತನಾಡುತ್ತೇನೆ ಎಂದು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ತಿಳಿಸಿದರು.

ಸಚಿವ ಈಶ್ವರ್ ಖಂಡ್ರೆ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್
ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಅವರನ್ನು ಸನ್ಮಾನಿಸಿದ ಸಚಿವ ಈಶ್ವರ್ ಖಂಡ್ರೆ (ETV Bharat)

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ (ETV Bharat)

ಬೆಂಗಳೂರು:ವನ್ಯಜೀವಿ ಹಾಗೂ ಮಾನವ ಸಂಘರ್ಷ ನಿಯಂತ್ರಿಸಲು ಮತ್ತು ಸಸ್ಯ ಸಂಪತ್ತು ರಕ್ತ ಚಂದನ ಅಕ್ರಮ ತಡೆಯುವ ನಿಟ್ಟಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಭೇಟಿ ಮಾಡಿದರು. ಬಳಿಕ ವಿಧಾನಸೌಧಕ್ಕೆ ಬಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ಚರ್ಚಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪವನ್ ಕಲ್ಯಾಣ್, ಕುವೆಂಪು ಅವರು ಬರೆದಿರುವ ಪರಿಸರ ಬಗೆಗಿನ ಸಾಲುಗಳನ್ನು ಓದಿದರು. "ಕುವೆಂಪು ಅವರ ಬಗ್ಗೆ ಓದಿಕೊಂಡಿದ್ದೇನೆ. ಅವರ ಪುಸ್ತಕಗಳ ಬಗ್ಗೆ ಅಪಾರ ಗೌರವವಿದೆ. ನಾನು ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚು ಒತ್ತು ನೀಡುತ್ತೇನೆ. ಕನ್ನಡ ಭಾಷೆ ಬಗ್ಗೆ ಹೆಮ್ಮೆ ಹಾಗೂ ಗೌರವವಿದೆ. ಕನ್ನಡದಲ್ಲಿ ಅರಣ್ಯ ಸಂಪತ್ತು ರಕ್ಷಣೆ ಬಗ್ಗೆ ಡಾ.ರಾಜ್ ಕುಮಾರ್ ಅವರು ಗಂಧದ ಗುಡಿ ಸಿನಿಮಾ ಮಾಡಿ ಅರಣ್ಯ ಸಂಪತ್ತು ಹಾಗೂ ಅದರ ರಕ್ಷಣೆ ಬಗ್ಗೆ ತಿಳಿಸಿದ್ದಾರೆ. ಇಂದಿನ ಕಾರ್ಯಕ್ರಮದಿಂದಾಗಿ ಕನ್ನಡ ಕಲಿಯಬೇಕು ಎಂಬ ಉತ್ಸಾಹ ಹೆಚ್ಚಾಯಿತು. ಕರ್ನಾಟಕದ ಜನರ ಪ್ರೀತಿಗೆ ಪಾತ್ರನಾಗಬೇಕು ಎಂದು ಬಯಸುತ್ತೇನೆ. ಕನ್ನಡ ಕಲಿಯಬೇಕು, ಕನ್ನಡದಲ್ಲೇ ಮುಂದೆ ಮಾತನಾಡಬೇಕು ಎಂದು ನಿರ್ಧಾರ ಮಾಡಿದ್ದೇನೆ. ಕನ್ನಡಿಗರು ಕೂಡ ನನಗೆ ಸಿನಿಮಾ ನಟನಾಗಿ ಬಹಳ ಪ್ರೀತಿ ನೀಡಿದ್ದಾರೆ" ಎಂದು ಹರ್ಷ ವ್ಯಕ್ತಪಡಿಸಿದರು.

ಅರಣ್ಯ ಸಂರಕ್ಷಣೆ ಬಗ್ಗೆ ಸಿನಿಮಾ ಮೂಲಕ ಮಾಡಲು ಸಾಧ್ಯ ಆಗದೇ ಇರುವುದನ್ನು ಜನಪ್ರತಿನಿಧಿಯಾಗಿ ಸಾಧಿಸಲು ಆಂಧ್ರಪ್ರದೇಶದ ಜನರು ಅವಕಾಶ ನೀಡಿದ್ದಾರೆ ಎಂದರು. ಇದೇ ವೇಳೆ ಶ್ರೀಶೈಲಂ, ತಿರುಪತಿಗೆ ರಾಜ್ಯದ ಭಕ್ತರು ಹೆಚ್ಚಾಗಿ ಆಗಮಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಜೊತೆ ಸಹಕರಿಸುವುದಾಗಿ ಡಿಸಿಎಂ ಭರವಸೆ ನೀಡಿದರು.

ರಾಜ್ಯ ರಾಜಕಾರಣದ ಬಗ್ಗೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, "ಅದರ ಬಗ್ಗೆ ನನಗೆ ಗೊತ್ತಿಲ್ಲ. ಮಾನವ ಹಾಗೂ ಆನೆ ನಡುವಿನ ಸಂಘರ್ಷ, ಸಸ್ಯ ಸಂಪತ್ತುಗಳ ರಕ್ಷಣೆ ಅಜೆಂಡಾ ಹೊರತುಪಡಿಸಿದರೆ ಬೇರೆ ಏನೂ ಗೊತ್ತಿಲ್ಲ" ಎಂದರು.

ಅಭಿಮಾನಿಗಳ ನೂಕುನುಗ್ಗಲು, ಕೊಠಡಿ ಗಾಜು ಪುಡಿಪುಡಿ:ವಿಧಾನಸೌಧಕ್ಕೆ ಆಗಮಿಸಿದ ಪವನ್‌ ಕಲ್ಯಾಣ್ ನೋಡಲು ಅಭಿಮಾನಿಗಳು ಮುಗಿಬಿದ್ದ ಪರಿಣಾಮ ಸಚಿವ ಸಂಪುಟ ಕ್ಯಾಬಿನೆಟ್ ಹಾಲ್​​ಗೆ ಹೋಗುವ ಕೊಠಡಿಯ ಬಾಗಿಲಿನ ಗಾಜು ಪುಡಿ ಪುಡಿಯಾಯಿತು. ಜನಸೇನಾ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬಂದಿದ್ದರಿಂದ ನೂಕು ನುಗ್ಗಲು ಉಂಟಾಯಿತು.

ಇದನ್ನೂ ಓದಿ: ನಾಗ ಚೈತನ್ಯ ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ: ಫೋಟೋ ಹಂಚಿಕೊಂಡ ತಂದೆ ನಾಗಾರ್ಜುನ - Naga Chaitanya Sobhita Engaged

ABOUT THE AUTHOR

...view details