ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಅದ್ಧೂರಿ ಅಮೃತ ಮಹೋತ್ಸವ: ಆನೆ, ಅಂಬಾರಿ ಜತೆ 5555 ನಾಣ್ಯ ಬಳಸಿ ತುಲಾಭಾರ

ಫಕೀರ ಸಿದ್ಧರಾಮ ಸ್ವಾಮೀಜಿಗಳ ಅಮೃತ ಮಹೋತ್ಸವದ ಅಂಗವಾಗಿ ಇಂದು ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಅಂಬಾರಿ ಮೆರವಣಿಗೆ ಜತೆಗೆ ವಿಶೇಷವಾದ ತುಲಾಭಾರ ನಡೆಯಿತು.

By ETV Bharat Karnataka Team

Published : Feb 1, 2024, 6:54 PM IST

Updated : Feb 1, 2024, 10:10 PM IST

ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ನಡೆದ ಆನೆ, ಅಂಬಾರಿಯೊಂದಿನ ತುಲಾಭಾರ
ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ನಡೆದ ಆನೆ, ಅಂಬಾರಿಯೊಂದಿನ ತುಲಾಭಾರ

ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ನಡೆದ ಆನೆ, ಅಂಬಾರಿಯೊಂದಿನ ತುಲಾಭಾರ

ಹುಬ್ಬಳ್ಳಿ :ಇಲ್ಲಿನ ನೆಹರು ಮೈದಾನದಲ್ಲಿ ಬೃಹತ್ ತಕ್ಕಡಿಯಲ್ಲಿ ತುಲಾಭಾರ ನಡೆಸಲಾಯಿತು. 5555 ಕೆಜಿ ತೂಕದ ಹತ್ತು ರೂಪಾಯಿ ನಾಣ್ಯಗಳಿಂದ ತುಲಾಭಾರ ಮಾಡಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ‌. ವೈ. ವಿಜಯೇಂದ್ರ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಮಹೇಶ್​ ಟೆಂಗಿನಕಾಯಿ, ಅರವಿಂದ ಬೆಲ್ಲದ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗಿಯಾಗಿದ್ದರು.

ಇದಕ್ಕೂ ಮೊದಲು ಫಕೀರ ಸಿದ್ಧರಾಮ ಸ್ವಾಮೀಜಿಗಳ ಅಮೃತ ಮಹೋತ್ಸವದ ಹಿನ್ನೆಲೆ ಆನೆ ಅಂಬಾರಿ ಮೆರವಣಿಗೆ ನಡೆಸಲಾಯಿತು. ಮೂರು ಸಾವಿರ ಮಠದಿಂದ ನಡೆದ ಮೆರವಣಿಯಲ್ಲಿ ಐದು ಆನೆ, ಐದು ಒಂಟೆ, ಐದು ಕುದುರೆ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಫಕೀರ ಸಿದ್ಧರಾಮ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ಮೂರು ಸಾವಿರ ಮಠದ ಮೂಜಗು ಸ್ವಾಮೀಜಿಗಳು ಸೇರಿ ಭಾವೈಕ್ಯತಾ ರಥಯಾತ್ರೆಯಲ್ಲಿ ನೂರಕ್ಕೂ ಹೆಚ್ಚು ಮಠಾಧೀಶರು ಭವ್ಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

5555 ಕೆಜಿ ನಾಣ್ಯಗಳಿಂದ ಆನೆ, ಅಂಬಾರಿಯೊಂದಿಗೆ ತುಲಾಭಾರ: ಭಾರತದಲ್ಲೇ ಪ್ರಥಮ ಬಾರಿಗೆ ಶ್ರೀಗಳನ್ನು ಒಳಗೊಂಡಂತೆ ಆನೆ, ಅಂಬಾರಿ ಸಹಿತ ಬೃಹತ್ ತುಲಾಭಾರ ನಡೆಸಲಾಯಿತು. ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನದ ಹಿರಿಯ ಪೀಠಾಧಿಪತಿ ಜ. ಫಕೀರ ಸಿದ್ಧರಾಮ ಸ್ವಾಮೀಜಿ ಅಮೃತ ಮಹೋತ್ಸವದ ನಿಮಿತ್ತ ಈ ತುಲಾಭಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತುಲಾಭಾರಕ್ಕೆ 22 ಲಕ್ಷ ರೂ. ವೆಚ್ಚದಲ್ಲಿ 40 ಅಡಿ ಉದ್ದ, 30 ಅಡಿ ಎತ್ತರ ಹಾಗೂ 20 ಅಡಿ ಅಗಲ ಇರುವ ಕಬ್ಬಿಣದ ಬೃಹದಾಕಾರದ ತಕ್ಕಡಿ ಸಿದ್ಧಪಡಿಸಲಾಗಿತ್ತು. ರಾಯಾಪುರ ಕೈಗಾರಿಕಾ ಪ್ರದೇಶದ ಕಂಪನಿಯೊಂದು ಈ ಬೃಹದಾಕಾರದ ತಕ್ಕಡಿಯನ್ನು ತಯಾರಿಸಿದೆ. ಇದು 25 ಟನ್ ತೂಗುವ ಸಾಮರ್ಥ್ಯ ಹೊಂದಿರುವುದು ಮತ್ತೊಂದು ವಿಶೇಷ.

"ಶಿರಹಟ್ಟಿ ಸಂಸ್ಥಾನದ ಧ್ಯೇಯವಾಕ್ಯ 'ದ್ವೇಷ ಬಿಡು-ಪ್ರೀತಿ ಮಾಡು' ಸಂದೇಶವನ್ನು ಸಾರುವ ಈ ಬೃಹದಾಕಾರದ ತಕ್ಕಡಿ ಯನ್ನು ಒಂದೂವರೆ ತಿಂಗಳಿಂದ ಸಿದ್ಧಪಡಿಸಲಾಗಿದೆ.

5.5 ಟನ್ ತೂಕದ ತುಲಾಭಾರ: ಒಟ್ಟು 5 ಬೃಹತ್ ಕಂಬಗಳ ಮಧ್ಯದಲ್ಲಿ ಈ ತಕ್ಕಡಿ ಅನುಷ್ಠಾನಗೊಳಿಸಲು ಆಯೋಜಕರು ಸಿದ್ಧತೆ ಮಾಡಿಕೊಂಡಿದ್ದರು. ಏಕಕಾಲಕ್ಕೆ ಶ್ರೀಗಳನ್ನು ಹೊತ್ತ ಅಂಬಾರಿ (ಸಾಗವಾನಿ ಮರದ), ಆನೆ ಸಹಿತ ಅಂದಾಜು 5.5 ಟನ್ ತೂಕದ ತುಲಾಭಾರ ನಡೆಯಿತು. ತುಲಾ ಭಾರಕ್ಕೆ 10 ರೂ. ಮುಖಬೆಲೆಯ 5,555 ಕೆಜಿ ನಾಣ್ಯ ಬಳಸಲಾಯಿತು. ಈ ನಾಣ್ಯಗಳು ಒಟ್ಟು 75 ಲಕ್ಷ 40 ಸಾವಿರ ರೂಪಾಯಿಯದ್ದಾಗಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಇಷ್ಟೊಂದು ಬೃಹತ್ ತೂಕದ ತುಲಾಭಾರ ನಡೆದಿದೆ. ಇದು ಇತಿಹಾಸ ಪುಟದಲ್ಲಿ ದಾಖಲಾಗಿದೆ.

ತುಲಾಭಾರದ ಹಣ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲು:ತುಲಾಭಾರದಿಂದ ಸಂಗ್ರಹವಾದ 73 ಲಕ್ಷ 40 ಸಾವಿರ ಹಣಕ್ಕೆ ಸ್ಥಾಯಿ‌ ನಿಧಿ ಸ್ಥಾಪಿಸಲಾಗುತ್ತದೆ. ಅದಲ್ಲದೆ ಭಕ್ತರು ತುಲಾಭಾರಕ್ಕೆ ನೀಡಿರುವ 63 ಕೆಜಿ ಬಂಗಾರ ಎಲ್ಲಾ ಸೇರಿ ಒಟ್ಟು 37 ಕೋಟಿಯಷ್ಟು ಬರುವ ಬಡ್ಡಿ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ಬಳಸಲು‌ ನಿರ್ಧರಿಸಲಾಗಿದೆ.

ಇದನ್ನೂ ಓದಿ:5555 ಕೆಜಿ ನಾಣ್ಯಗಳಿಂದ ಆನೆ, ಅಂಬಾರಿಯೊಂದಿಗೆ ತುಲಾಭಾರ: ಬೃಹತ್ ತುಲಾಭಾರಕ್ಕೆ ಹುಬ್ಬಳ್ಳಿ ಸಜ್ಜು

Last Updated : Feb 1, 2024, 10:10 PM IST

ABOUT THE AUTHOR

...view details