ಕರ್ನಾಟಕ

karnataka

ETV Bharat / state

ಜನಪ್ರಿಯ ಸಿದ್ದರಾಮಯ್ಯ ವಿರುದ್ಧ ರಾಜಕೀಯ ದುರುದ್ದೇಶದಿಂದ ಪ್ರಾಸಿಕ್ಯೂಷನ್​ಗೆ ಅನುಮತಿ: ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ವಾದ - CM Plea Against Prosecution - CM PLEA AGAINST PROSECUTION

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ (ಮುಡಾ) ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದರಲ್ಲಿ ರಾಜಕೀಯ ದುರುದ್ದೇಶವಿದೆ ಎಂದು ಮುಖ್ಯಮಂತ್ರಿಗಳ ಪರ ವಕೀಲ ಪ್ರೊ.ರವಿವರ್ಮ ಕುಮಾರ್ ತಿಳಿಸಿದರು.

siddaramaiah
ಸಿದ್ದರಾಮಯ್ಯ, ಹೈಕೋರ್ಟ್ (IANS and ETV Bharat)

By ETV Bharat Karnataka Team

Published : Sep 12, 2024, 7:45 PM IST

ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಮಾತ್ರ ಕಳೆದ 50 ವರ್ಷಗಳಲ್ಲಿ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸಿದ್ದಾರೆ. ಐದು ವರ್ಷಗಳ ನಂತರವೂ ಮತ್ತೊಮ್ಮೆ ಮುಖ್ಯಮಂತ್ರಿಗಳಾಗಿದ್ದು, ಜನಪ್ರಿಯ ನಾಯಕರ ವಿರುದ್ಧ ರಾಜಕೀಯ ದುರುದ್ದೇಶದಿಂದ ಅನುಮತಿ ನೀಡಿದ್ದಾರೆ ಎಂದು ಹೈಕೋರ್ಟ್​​ನಲ್ಲಿ ಮುಖ್ಯಮಂತ್ರಿ ಪರ ವಕೀಲ ಪ್ರೊ.ರವಿವರ್ಮ ಕುಮಾರ್ ನ್ಯಾಯಪೀಠಕ್ಕೆ ವಿವರಿಸಿದರು.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠಕ್ಕೆ ವಿವರಿಸಿದ ಅವರು, ''ಜನಪ್ರಿಯ ನಾಯಕನ ವಿರುದ್ಧ ರಾಜ್ಯಪಾಲರು ಈ ರೀತಿ ಅನುಮತಿ ನೀಡಬಾರದಿತ್ತು. ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ. ಅಧಿಕಾರದಲ್ಲಿದ್ದಾಗ ಸಂಬಂಧಿಕರು, ಅಧಿಕಾರಿಗಳು ಅಸೂಯೆಯಿಂದ ಏನಾದರೂ ಮಾಡಿರಬಹುದು. ಅಲ್ಲದೆ, ಪರಿಹಾರದ ನಿವೇಶನ ಕೊಟ್ಟಿರುವುದು ಮುಡಾವೇ ಹೊರತು ಸಿದ್ದರಾಮಯ್ಯ ಅಲ್ಲ. ಆದರೂ ಅದಕ್ಕೆಲ್ಲಾ ಮುಖ್ಯಮಂತ್ರಿಗಳನ್ನು ಹೊಣೆ ಮಾಡುವುದು ಸರಿಯಾದ ಕ್ರಮವಲ್ಲ'' ಎಂದು ತಿಳಿಸಿದರು.

ರಾಜ್ಯಪಾಲರ ಆದೇಶವೇ ಕಾನೂನು ಬಾಹಿರ: ''ಜಮೀನು ಸ್ವಾಧೀನವಾದ ಬಳಿಕ ಪರಿಹಾರದ ನೋಟಿಸ್ ವಿಳಂಬವಾಗಿ ತಲುಪಿದೆ. ಮುಡಾ ಜಮೀನನ್ನು ಭೌತಿಕವಾಗಿ ಸ್ವಾಧೀನಕ್ಕೆ ಪಡೆದಿರಲಿಲ್ಲ. ನಂತರ ಸೆ. 48 ಅಡಿ ಜಮೀನನ್ನು ಡಿನೋಟಿಫಿಕೇಷನ್ ಮಾಡಲಾಗಿದೆ. ಮಹಜರು ಮಾಡಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿರಲಿಲ್ಲ. ಆದರೂ ರಾಜ್ಯಪಾಲರು ಮುಡಾ ಸ್ವಾಧೀನದಲ್ಲಿತ್ತು ಎಂದು ಹೇಳಿದ್ದಾರೆ. ಹೀಗಾಗಿ, ರಾಜ್ಯಪಾಲರ ಆದೇಶವೇ ಕಾನೂನು ಬಾಹಿರವಾಗಿದೆ'' ಎಂದು ರವಿವರ್ಮ ಕುಮಾರ್​​ ವಿವರಿಸಿದರು

''ರಾಜ್ಯಪಾಲರ ಆದೇಶದಲ್ಲಿ ಫೋರ್ಜರಿ ಸೇರಿದಂತೆ ಮತ್ತಿತರ 25 ಸೆಕ್ಷನ್‌ಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಫೋರ್ಜರಿ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ. ಮುಡಾ ಬಡಾವಣೆ ನಕ್ಷೆಯಲ್ಲಿ ಮುಖ್ಯಮಂತ್ರಿಗಳ ಸಂಬಂಧಿಕರ ಜಮೀನು ಇರಲಿಲ್ಲ. ಹೀಗಾಗಿ, ಬಡಾವಣೆ ನಿರ್ಮಾಣ ಸಂದರ್ಭದಲ್ಲಿ ವಿರೋಧಿಸುವ ಅಗತ್ಯವಿರಲಿಲ್ಲ. ಪ್ರಕರಣದಲ್ಲಿ ಸಿದ್ದರಾಮಯ್ಯ ಪಾತ್ರವೇನು ಎಂಬುದಕ್ಕೆ ಯಾರೂ ಉತ್ತರಿಸಿಲ್ಲ. ಜಮೀನು ಮುಡಾ ಸ್ವಾಧೀನದಲ್ಲಿತ್ತು ಎಂಬ ಭಾವನೆ ಆಧಾರದಲ್ಲಿ ರಾಜ್ಯಪಾಲರು ಆದೇಶಿಸಿದ್ದಾರೆ'' ಎಂದರು.

''ಟಿ.ಜೆ.ಅಬ್ರಹಾಂ ಮೊದಲು ನೀಡಿದ ದೂರಿನ ಮೇರೆಗೆ ಕಡತವನ್ನು ಸಿದ್ಧಪಡಿಸಲಾಗಿದೆ. ಬಳಿಕ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಆದರೆ ಕಡತದಲ್ಲಿ ಅದರ ಉಲ್ಲೇಖವಿಲ್ಲ'' ಎಂದು ವಿವರಿಸಿದರು.

''ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಆದೇಶ ನೀಡುವುದಕ್ಕೂ ಮುನ್ನ ಸ್ವತಂತ್ರ ವಿವೇಚನೆ ಬಳಸಿ ಆದೇಶಿಸಿರುವುದಾಗಿ ರಾಜ್ಯಪಾಲರು ಹೇಳಿದ್ದಾರೆ. ಇದನ್ನು ಗಮನಿಸಿದರೆ ಹರಿ ನೆನೆಸಿಕೊಳ್ಳುತ್ತಾ, ಶಿವಭಕ್ತ ವೈಕುಂಠಕ್ಕೆ ಹೋದ ಕಥೆಯಂತಿದೆ. ಸಚಿವ ಸಂಪುಟದ ಆದೇಶ ತಿರಸ್ಕರಿಸಿದ ನಂತರ ರಾಜ್ಯಪಾಲರು ಏನು ಮಾಡಿದ್ದಾರೆ. ಸಿದ್ದರಾಮಯ್ಯ ನೀಡಿದ ಉತ್ತರಕ್ಕೂ ರಾಜ್ಯಪಾಲರು ಪ್ರತಿಕ್ರಿಯೆ ನೀಡಿಲ್ಲ'' ಎಂದು ವಾದದಲ್ಲಿ ಪ್ರಸ್ತಾಪಿಸಿದರು.

ಸರ್ಕಾರದ ಪರ ಎ.ಜಿ. ಶಶಿಕಿರಣ್ ಶೆಟ್ಟಿ, ''ಯಾವುದೇ ತನಿಖೆಯ ಆಧಾರವಿಲ್ಲದೇ 17ಎ ಅನುಮತಿಯೇ ತರಾತುರಿಯ ನಿರ್ಧಾರವಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ರಾಜ್ಯಪಾಲರು ಪಾಲಿಸಿಲ್ಲ. ಹೀಗಾಗಿ, ರಾಜ್ಯಪಾಲರ ಅನುಮತಿ ಕಾನೂನು ಬಾಹಿರವಾಗಿದೆ'' ಎಂದು ಪೀಠಕ್ಕೆ ತಿಳಿಸಿದರು.

ಅಬ್ರಹಾಂ ಪರ ವಕೀಲರು ಹೇಳಿದ್ದೇನು?: ದೂರುದಾರ ಟಿ.ಜೆ. ಅಬ್ರಹಾಂ ಪರ ವಕೀಲರಾದ ರಂಗನಾಥ್ ರೆಡ್ಡಿ, ''ಉದ್ದೇಶಿದ ಜಮೀನನ್ನು ಒಂದೇ ಕಡೆ ಕೃಷಿ ಜಮೀನೆಂದು ಹೇಳುತ್ತಿದ್ದಾರೆ. ಮತ್ತೊಂದೆಡೆ, ಮುಡಾ ಜಮೀನು ಒತ್ತುವರಿ ಮಾಡಿದೆ ಎಂದು ತಿಳಿಸುತ್ತಿದ್ದಾರೆ. ಎರಡೆರಡು ರೀತಿಯಲ್ಲಿ ಮುಖ್ಯಮಂತ್ರಿಗಳ ಪರ ವಕೀಲರು ವಾದಿಸಿದ್ದಾರೆ'' ಎಂದು ತಿಳಿಸಿದರು.

''ಅಲ್ಲದೆ, ದೂರುದಾರ ಟಿ.ಜೆ. ಅಬ್ರಹಾಂ ವಿರುದ್ಧ ಮುಖ್ಯಮಂತ್ರಿ ಪರ ವಕೀಲರು ಆರೋಪ ಮಾಡಿದ್ದಾರೆ'' ಎಂದ ರಂಗನಾಥ್ ರೆಡ್ಡಿ, ಮೇಲ್ಮನವಿಯೊಂದರ ವಿಚಾರಣೆ ವೇಳೆ ವಿಧಿಸಿದ್ದ ದಂಡ 25 ಲಕ್ಷ ರೂ.ಗಳನ್ನು 1 ಲಕ್ಷಕ್ಕೆ ಇಳಿಸಿರುವ ಸುಪ್ರೀಂಕೋರ್ಟ್ ಆದೇಶದ ಪ್ರತಿ ನೀಡಿ ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಸಿಎಂ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್​: ಸಿದ್ದರಾಮಯ್ಯ ಪಾತ್ರ ಏನೆಂಬುದನ್ನು ರಾಜ್ಯಪಾಲರು ತಿಳಿಸಿಲ್ಲ- ಸಿಂಘ್ವಿ ವಾದ - CM Siddaramaiah Plea In HC

ABOUT THE AUTHOR

...view details