ಕರ್ನಾಟಕ

karnataka

ETV Bharat / state

ಚಾಮರಾಜನಗರ ಯುವ ದಸರಾಗೆ ಚಾಲನೆ ನೀಡಿದ ನಟ ನಾಗಭೂಷಣ್: 'ಇಲ್ಲೇ ಪಿಡಿಒ ಆಗಿದ್ದೆ' ಎಂದ ಟಗರುಪಲ್ಯ ನಟ

ಚಾಮರಾಜನಗರ ಜಿಲ್ಲಾ ದಸರಾಗೆ ಸಚಿವ ಕೆ. ವೆಂಕಟೇಶ್​ ಅವರು ಸೋಮವಾರ ಚಾಲನೆ ನೀಡಿದ್ದು, ಒಟ್ಟು ಮೂರು ದಿನಗಳ ಕಾಲ ಅದ್ಧೂರಿಯಾಗಿ ದಸರಾ ಕಾರ್ಯಕ್ರಮಗಳು ಜರುಗಲಿವೆ.

By ETV Bharat Karnataka Team

Published : 7 hours ago

Updated : 4 hours ago

Actor Nagabhushan in Yuva Dasara
ಯುವ ದಸರಾದಲ್ಲಿ ನಟ ನಾಗಭೂಷಣ್​ (ETV Bharat)

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ದಸರಾಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದ್ದು, ಯುವ ದಸರಾ- ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೋಮವಾರ ನಟ ನಾಗಭೂಷಣ್​ ಅವರು ಚಾಲನೆ ನೀಡಿದರು. ಸೋಮವಾರದಿಂದ ಮೂರು ದಿನಗಳ ಕಾಲ ದಸರಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿವೆ.

ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ನಾಗಭೂಷಣ್​, ಕೊಳ್ಳೇಗಾಲ ತಾಲೂಕಿನ ಟಗರಪುರ ನಮ್ಮೂರು, ಪಚ್ವಪ್ಪ ಹೋಟೆಲ್​ನಲ್ಲಿ ದೋಸೆ ತಿಂದು, ನವೋದಯ ಶಾಲೆಗೆ ಹೋಗಲು ಬಸ್​ಗಾಗಿ ಕಾಯುತ್ತಿದ್ದೆ. ನಾನು ನಿಮ್​ ಕಾಡಿನವನು, ಇಲ್ಲೇ ಪಿಡಿಒ ಆಗಿದ್ದೆ" ಎಂದು ಹೇಳಿದರು.

ಚಾಮರಾಜನಗರ ಜಿಲ್ಲಾ ದಸರಾ (ETV Bharat)

2009-10ರ ಬ್ಯಾಚ್​ನ ಪಿಡಿಒ ಆಗಿದ್ದ ನಾಗಭೂಷಣ್ ತಮ್ಮ ಕೆಲಸವನ್ನು ನೆನೆದು, "ಆಗೆಲ್ಲ ಡಿಸಿ ಆಫೀಸ್​ನಿಂದ ಮೀಟಿಂಗ್​ಗೆ ಫೋನ್ ಮಾಡುತ್ತಿದ್ದರು. ಈಗ ಕಾರ್ಯಕ್ರಮಗಳಿಗೆ ಕರೆಯುತ್ತಾರೆ. ಮೊದಲೆಲ್ಲ ಮೆಮೊ ಕೊಡುತ್ತಿದ್ದರು. ಈಗ ಇನ್ವಿಟೇಷನ್ ಕೊಡುತ್ತಿದ್ದಾರೆ. ನಮ್ಮ‌ ಜಿಲ್ಲೆ ಶ್ರೀಮಂತ ಜಿಲ್ಲೆ, ನೈಸರ್ಗಿಕವಾಗಿ ಸಂಪತ್ತಿರುವ ಜಿಲ್ಲೆ. ಇವ ನಮ್​ ಊರವಾ ಕಡ ಅಂದ್ರೆ ನನಗೆ ಖುಷಿ ಆಗುತ್ತದೆ. ನಮ್ಮ‌ ಊರಿನ ಭಾಷೆಯನ್ನು ನಾವೇ ಮಾತನಾಡಬೇಕು- ನಾವೇ ಬೆಳೆಸಬೇಕು. ಅದೇ ರೀತಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ನಾವೇ ತೆಗೆದು ಹಾಕಬೇಕು. ಕೀಳರಿಮೆ ಬಿಟ್ಟು ಕೆಲಸ ಮಾಡಬೇಕು. ಶಿಕ್ಷಣವನ್ನೇ ಅಸ್ತ್ರ ಮಾಡಿಕೊಳ್ಳಬೇಕು" ಎಂದು ಯುವಕರಿಗೆ ಸಲಹೆ ನೀಡಿದರು.

"ಚಾಮರಾಜನಗರ ರಾಯಭಾರಿಯಾಗಿದ್ದ ಅಪ್ಪು ಸರ್​ನ ನೆನೆಸಿಕೊಳ್ಳುತ್ತೇನೆ. ಚಾಮರಾಜನಗರ ಎಂದರೆ ಅವರಿಗೆ ಬಹಳ ಪ್ರೀತಿ" ಎಂದು ಪುನೀತ್ ಅವರನ್ನು ನೆನೆದರು. "ವಿದ್ಯಾಪತಿ ಚಿತ್ರ ಸದ್ಯದಲ್ಲೇ ಬಿಡಗಡೆಯಾಗಲಿದ್ದು, ಈ ಚಿತ್ರದಲ್ಲಿ ನಿಮ್ಮನ್ನು ಚೆನ್ನಾಗಿ ನಗಿಸುತ್ತೇನೆ" ಎಂದರು.

ಚಾಮರಾಜನಗರ ಯುವ ದಸರಾಗೆ ಚಾಲನೆ ನೀಡಿದ ನಟ ನಾಗಭೂಷಣ್ (ETV Bharat)

40 ವರ್ಷಗಳ ಬಳಿಕ ಖಾಸಗಿ ದರ್ಬಾರ್​: ದಸರಾ ಮಹೋತ್ಸವದ ಅಂಗವಾಗಿ ಸೋಮವಾರ ನಗರದ ಜನನ ಮಂಟಪದಲ್ಲಿ ಆಯೋಜಿಸಿದ್ದ ಖಾಸಗಿ ದರ್ಬಾರ್​ನಲ್ಲಿ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 40 ವರ್ಷಗಳ ನಂತರ ಕೆಂಪನಂಜಾಂಬ ಸಮೇತ ಚಾಮರಾಜೇಶ್ವರ ಸ್ವಾಮಿ ಹೆಸರಿನಲ್ಲಿ ಖಾಸಗಿ ದರ್ಬಾರ್ ಪೂಜಾ ಕೈಂಕರ್ಯಗಳು ನಡೆದವು. ಸ್ವಾಮಿಗೆ ಬಹುಪರಾಕ್ ಹೇಳಲಾಯಿತು.

ಖಾಸಗಿ ದರ್ಬಾರ್ ಪೂಜಾ ಕೈಂಕರ್ಯ (ETV Bharat)

ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ನಗರಸಭೆ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತ ಬಾಲಸುಬ್ರಹ್ಮಣ್ಯಂ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ವಿವಿಧ ಸಂಘಟನೆಗಳ ಮುಖಂಡರು ಸ್ವಾಮಿಗೆ ನಮಿಸಿದರು. ಗಣ್ಯರ ಹೆಸರಿನಲ್ಲಿ ಬಹುಪರಾಕ್ ಹೇಳಲಾಯಿತು. ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಸಬ್‍ ಇನ್​ಸ್ಪೆಕ್ಟರ್ ಬಿ.ಎಂ. ಪರಶಿವಮೂರ್ತಿ ನೇತೃತ್ವದಲ್ಲಿ ಪೊಲೀಸರು ಗೌರವ ವಂದನೆ ಸಲ್ಲಿಸಿದರು. ಬಹಳಷ್ಟು ವರ್ಷಗಳ ಬಳಿಕ ನಡೆದ ಈ ವಿಶೇಷ ಖಾಸಗಿ ದರ್ಬಾರ್ ಅನ್ನು ಸಾಕಷ್ಟು ಜನರು ಕಣ್ತುಂಬಿಕೊಂಡರು.

ಖಾಸಗಿ ದರ್ಬಾರ್ ಪೂಜಾ ಕೈಂಕರ್ಯ (ETV Bharat)

ಕಲ್ಲಂಗಡಿಯಲ್ಲಿ ಅರಳಿದ ಸಿಎಂ ಚಿತ್ರ, ಹೂವಲ್ಲಿ ಮೂಡಿಬಂತು ಗೋಪಾಲಸ್ವಾಮಿ ಬೆಟ್ಟ:ಚಾಮರಾಜನಗರ ಜಿಲ್ಲಾಡಳಿತ ಆವರಣದಲ್ಲಿ ಫಲ-ಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ವಿವಿಧ ಹೂವುಗಳಿಂದ ಪ್ರಸಿದ್ಧ ಯಾತ್ರಾ ಸ್ಥಳವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮೂಡಿ ಬಂದಿದೆ. ಹಿಮವದ್ ಗೋಪಾಲನ ಸನ್ನಧಿಯೇ ಚಾಮರಾಜನಗರದಲ್ಲಿ ಸ್ಥಾಪಿತವಾದಂತೆ ಹೂವುಗಳಿಂದ ಬೆಟ್ಟದ ಪ್ರತಿಕೃತಿ ಕಂಗೊಳಿಸುತ್ತಿದೆ.

ದಸರಾ ಫಲಪುಷ್ಪ ಪ್ರದರ್ಶನ (ETV Bharat)

ಕಲ್ಲಂಗಡಿಯಲ್ಲಿ ರಾಜಕಾರಣಿಗಳು:ಕಲ್ಲಂಗಡಿಯಲ್ಲಿ ರಾಜಕಾರಣಿಗಳ ಮುಖವನ್ನು ಚಿತ್ರಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಸಂಸದ ಸುನೀಲ್ ಬೋಸ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಡಾ.ಬಿ.ಆರ್.ಅಂಬೇಡ್ಕರ್ ಚಿತ್ರಗಳನ್ನು ಕೆತ್ತಲಾಗಿದೆ. ಇನ್ನು, ಕುಂಬಳಕಾಯಿ ಹಾಗೂ ವಿವಿಧ ತರಕಾರಿ ಬಳಸಿಕೊಂಡು ಗಣಪತಿ, ವಿವಿಧ ಆಕೃತಿಗಳನ್ನು, ಹೂವುಗಳಿಂದ ವೀಣೆ, ತಬಲ, ನವಿಲಿನ ಆಕೃತಿಗಳನ್ನು ರಚಿಸಲಾಗಿದೆ.

ದಸರಾಗೆ ಚಾಲನೆ ನೀಡಿದ ಸಚಿವ ವೆಂಕಟೇಶ್:ಚಾಮರಾಜನಗರ ಜಿಲ್ಲಾ ದಸರಾ ಸೋಮವಾರದಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಚಾಮರಾಜೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಚಿವ ವೆಂಕಟೇಶ್​ ಅವರು ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ, ಜಿಲ್ಲಾಡಳಿತ ಭವನ ಆವರಣದಲ್ಲಿ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ಕೊಟ್ಟರು.

ದಸರಾ ಫಲಪುಷ್ಪ ಪ್ರದರ್ಶನ (ETV Bharat)

ಕ್ಯಾಬಿನೆಟ್ ಸಭೆ ಬಳಿಕ ಜಾತಿಗಣತಿ ಬಿಡುಗಡೆ:ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಕೆ. ವೆಂಕಟೇಶ್, "ಕ್ಯಾಬಿನೆಟ್ ಸಭೆಯ ಬಳಿಕ ಜಾತಿ ಗಣತಿಯ ವರದಿ ಬಿಡುಗಡೆ ಮಾಡಲಾಗುತ್ತದೆ. ಇದು ನಮ್ಮ ಮ್ಯಾನಿಫೆಸ್ಟೋದಲ್ಲೇ ಇದೆ. ಹಾಗಾಗಿ ವರದಿ ಬಿಡುಗಡೆ ಮಾಡುವುದು ನಮ್ಮ ಕರ್ತವ್ಯ" ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಯಾವ ಕ್ಷಣದಲ್ಲಿ ಬೇಕಾದರೂ ರಾಜೀನಾಮೆ ಕೊಡ್ತಾರೆ ಎಂಬ ಬಿ.ವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, "ಬಿಜೆಪಿಯವರು ಹಗಲುಗನಸು ಕಾಣ್ತಾ ಇದ್ದಾರೆ. ಕಾಣ್ಲಿ ಬಿಡಿ. ಸಿಎಂ ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡ್ಬೇಕು ಹೇಳಿ?" ಎಂದು ಪ್ರಶ್ನಿಸಿದರು.

ಕಲ್ಲಂಗಡಿಯಲ್ಲಿ ಮೂಡಿಬಂದ ಗಣ್ಯರ ಚಿತ್ರ (ETV Bharat)

ದಲಿತ ಸಿಎಂ ಪ್ರಸ್ತಾಪದ ಬಗ್ಗೆ ಮಾತನಾಡಿ, "ದಲಿತ ಸಿಎಂ ಪ್ರಸ್ತಾಪ ನಮ್ಮಲ್ಲಿ ಇಲ್ಲ. ಸಿಎಂ ಖುರ್ಚಿ ಖಾಲಿಯಿಲ್ಲ. ಹಾಗಾಗಿ ದಲಿತ ಸಿಎಂ ಕೂಗು ಎಂಬ ವಿಚಾರ ಅಪ್ರಸ್ಥುತ" ಎಂದರು.

ಇದನ್ನೂ ಓದಿ:ಮೈಸೂರು ದಸರಾ: ಆಗಸದಲ್ಲಿ ಮೂಡಿದ ಸಹಸ್ರಾರು ಡ್ರೋನ್‌ಗಳ ಕಲರವ; ವಿಜಯ್​ ಪ್ರಕಾಶ್ ಗಾಯನ ಮೋಡಿ

Last Updated : 4 hours ago

ABOUT THE AUTHOR

...view details