ಕರ್ನಾಟಕ

karnataka

ಹಾವು ಕಡಿತದ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಕ್ರಿಯಾ ಯೋಜನೆ: ಆರೋಗ್ಯ ಸಚಿವ ಗುಂಡೂರಾವ್ - State Action Plan

By ETV Bharat Karnataka Team

Published : Jul 10, 2024, 9:28 PM IST

ಹಾವು ಕಡಿತದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯ ಕುರಿತಂತೆ ಮಾಹಿತಿ ಹೊಂದಿರುವುದು ಅಗತ್ಯ. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.

Health Minister Dinesh Gundu Rao with officials
ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (ETV Bharat)

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಚಿವಾಲಯವು ಹಾವು ಕಡಿತದ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ (SBPC) ಯಶಸ್ವಿ ಅನುಷ್ಠಾನ ಮತ್ತು ಹಾವು ಕಡಿತದ ಎನ್ವಿನೋಮಿಂಗ್ ಕುರಿತು ರಾಜ್ಯ ಕ್ರಿಯಾ ಯೋಜನೆ (SAPSE) ರೂಪಿಸುತ್ತಿದೆ.

ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (ETV Bharat)

ಆರೋಗ್ಯಸೌಧದಲ್ಲಿ ಇಂದು ಹಮ್ಮಿಕೊಂಡಿದ್ದ ಹಾವು ಕಡಿತ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಕಾರ್ಯಕ್ರಮದಲ್ಲಿ ರಾಜ್ಯ ಕ್ರಿಯಾ ಯೋಜನೆ ತಯಾರಿಸಲು ಅಂತರ್ ಇಲಾಖೆಗಳ ನಡುವೆ ಆಯೋಜಿಸಿದ್ದ ವಿಶೇಷ ಕಾರ್ಯಾಗಾರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸಚಿವರು, ಇಂದಿಗೂ ಹಾವು ಕಡಿತದಿಂದ ಜನರು ಸಾವು ನೋವಿಗೆ ತುತ್ತಾಗುತ್ತಿದ್ದು, ಸರಿಯಾದ ಮಾಹಿತಿ ಹೊಂದದೇ ಇರುವುದೇ ಇದಕ್ಕೆ ಕಾರಣವಾಗಿದೆ. ಹಾವು ಕಡಿತದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯ ಕುರಿತಂತೆ ಮಾಹಿತಿ ಹೊಂದಿರುವುದು ಅಗತ್ಯ. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಸಲಹೆ ನೀಡಿದರು.

ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (ETV Bharat)

ಹಾವು ಕಡಿತವು ನಿರ್ಲಕ್ಷಿಸಲ್ಪಟ್ಟ ಉಷ್ಣವಲಯದ ಕಾಯಿಲೆಯಾಗಿದೆ (NTD), ಇದು ಪ್ರಪಂಚದಾದ್ಯಂತ ಗಮನಾರ್ಹವಾದ ಅಂಗವೈಕಲ್ಯ, ಅಸ್ವಸ್ಥತೆ ಮತ್ತು ಮರಣವನ್ನು ಉಂಟುಮಾಡುತ್ತದೆ. One Health ವಿಧಾನವನ್ನು ಬಳಸಿಕೊಂಡು ವಿವಿಧ ಇಲಾಖೆಗಳನ್ನೊಳಗೊಂಡ ಒಂದು ಸಂಘಟಿತ ಪ್ರಯತ್ನದ ಮೂಲಕ ಹಾವು ಕಡಿತದ ಪರಿಣಾಮಕಾರಿ ತಡೆಗಟ್ಟುವಿಕೆ ಮತ್ತು ನಿಯಂತ್ರಣವನ್ನು ಸಾಧಿಸಬಹುದು ಎಂದರು.

2023-24 ರಲ್ಲಿ ಕರ್ನಾಟಕ ರಾಜ್ಯವು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಎಲ್ಲಾ ಜಿಲ್ಲೆಗಳಲ್ಲಿ SBPC ಅನುಷ್ಠಾನವನ್ನು ಪ್ರಾರಂಭಿಸಿತು. 2030ರ ವೇಳೆಗೆ ಹಾವು ಕಡಿತದಿಂದ ಉಂಟಾಗುವ ಸಾವುಗಳು ಮತ್ತು ಅಂಗವೈಕಲ್ಯಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (ETV Bharat)

ಜಾಗತಿಕವಾಗಿ, ಸರಿಸುಮಾರು 2,000 ಜಾತಿಯ ಹಾವುಗಳಿವೆ, ಭಾರತದಲ್ಲಿ 310 ಜಾತಿಗಳು ಮಾತ್ರ ಕಂಡುಬರುತ್ತವೆ. ಇವುಗಳಲ್ಲಿ, 66 ಜಾತಿಗಳು ವಿಷಕಾರಿ ಮತ್ತು ಮಾನವನ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತವೆ. ಭಾರತದಲ್ಲಿನ "ಬಿಗ್ ಫೋರ್" ವಿಷಕಾರಿ ಪ್ರಭೇದಗಳಲ್ಲಿ ಇಂಡಿಯನ್ ಕೋಬ್ರಾ, ಕಾಮನ್ ಕ್ರೈಟ್, ರಸೆಲ್ಸ್ ವೈಪರ್ ಮತ್ತು ಸಾ-ಸ್ಕೇಲ್ಡ್ ವೈಪರ್ ಸೇರಿವೆ.

ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (ETV Bharat)

ಕರ್ನಾಟಕವು ಹಲವಾರು ಪ್ರದೇಶ - ನಿರ್ದಿಷ್ಟ ವಿಷಕಾರಿ ಹಾವುಗಳಿಗೆ ನೆಲೆಯಾಗಿದೆ. ಉದಾಹರಣೆಗೆ ಕಿಂಗ್ ಕೋಬ್ರಾ, ಮಲಬಾರ್ ಪಿಟ್ ವೈಪರ್ ಮತ್ತು ಹಂಪ್-ನೋಸ್ಡ್ ಪಿಟ್ ವೈಪರ್. ಕರ್ನಾಟಕದಲ್ಲಿ ಹಾವಿನ ಜಾತಿಗಳ ವೈವಿಧ್ಯತೆಯು ಹಾವು ಕಡಿತದಿಂದ ಎದುರಾಗುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಕ್ರಿಯಾ ಯೋಜನೆಯ ಅಗತ್ಯವನ್ನು ತೋರಿಸುತ್ತದೆ.

ಹಾವು ಕಡಿತದ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ ಪ್ರಾರಂಭವಾದ ನಂತರ ಕರ್ನಾಟಕದಲ್ಲಿ ಕೈಗೊಂಡ ಪ್ರಮುಖ ಕಾರ್ಯಗಳು ಕೆಳಗೆ ಕೆಳಕಂಡಂತಿದೆ:

  • ಫೆಬ್ರವರಿ 12, 2024 ರಂದು, ಕರ್ನಾಟಕದಲ್ಲಿ ಹಾವು ಕಡಿತದ ಪ್ರಕರಣಗಳು ಮತ್ತು ಸಾವುಗಳನ್ನು "ಅಧಿಸೂಚಿತ ರೋಗಗಳು" ಎಂದು ಘೋಷಿಸಲಾಯಿತು.
  • ಎಲ್ಲ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳಿಂದ ವರದಿಯಾಗುವ ಹಾವು ಕಡಿತದ ಪ್ರಕರಣಗಳನ್ನು ಭಾರತ ಸರ್ಕಾರದ ಇಂಟೆಗ್ರೇಟೆಡ್ ಹೆಲ್ತ್ ಇನ್ಫರ್ಮೇಷನ್ ಪ್ಲ್ಯಾಟ್ ಫಾರ್ಮ್​​ನಲ್ಲಿ (IHIP) ವರದಿ ಸಲ್ಲಿಸಲು ಕಡ್ಡಾಯಗೊಳಿಸಲಾಗಿದೆ.
  • 2024 ರಲ್ಲಿ, IHIP ನಲ್ಲಿ ಒಟ್ಟು 5,418 ಪ್ರಕರಣಗಳು ಮತ್ತು 36 ಹಾವು ಕಡಿತದ ಸಾವುಗಳು ವರದಿಯಾಗಿವೆ.
  • ಎಲ್ಲಾ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು (ಒಟ್ಟು 172), ಮತ್ತು ಕೆಲ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು (CHCಗಳು) ಹಾವು ಕಡಿತ ಚಿಕಿತ್ಸಾ ಕೇಂದ್ರಗಳು ಎಂದು ಗುರುತಿಸಲಾಗಿದೆ.
  • ಆಶಾ ಕಾರ್ಯಕರ್ತೆಯರಿಂದ ಆರಂಭಿಸಿ ವೈದ್ಯಕೀಯ ಅಧಿಕಾರಿಗಳವರೆಗೆ ವಿವಿಧ ಹಂತಗಳಲ್ಲಿ ಹಾವು ಕಡಿತದ ಪ್ರಕರಣಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಗೆ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ವಿವರಿಸುವ ಮಾರ್ಗಸೂಚಿಗಳನ್ನು ನೀಡಲಾಗಿದೆ.
  • ಆಂಟಿ ಸ್ನೇಕ್ ವೆನಮ್ (ASV) ಅನ್ನು ಅಗತ್ಯ ಔಷಧ ಪಟ್ಟಿಯ ಅಡಿ ಪಟ್ಟಿ ಮಾಡಲಾಗಿದೆ.
  • ತ್ವರಿತ ಚಿಕಿತ್ಸೆಗಾಗಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೊಳಗೊಂಡಂತೆ ಸರ್ಕಾರಿ ಆರೋಗ್ಯ ಸೌಲಭ್ಯಗಳಲ್ಲಿ ASV ಅನ್ನು ಲಭ್ಯವಾಗುವಂತೆ ಮಾಡಲಾಗಿದೆ.
  • ಹಾವು ಕಡಿತಕ್ಕೆ ಒಳಗಾದವರಿಗೆ ಚಿಕಿತ್ಸೆಯನ್ನು ಎಲ್ಲ ಸರ್ಕಾರಿ ಆರೋಗ್ಯ ಸೌಲಭ್ಯಗಳಲ್ಲಿ ಮತ್ತು ಎಲ್ಲ BPL ಕಾರ್ಡುದಾರರಿಗೆ AB_ArK ಯೋಜನೆಯಡಿ ಉಚಿತವಾಗಿ ನೀಡಲಾಗುತ್ತದೆ.
  • ಹಾವು ಕಡಿತದ ಸಂದರ್ಭದಲ್ಲಿ ತಕ್ಷಣದ ನೆರವಿಗಾಗಿ 108ಗೆ ಕರೆಮಾಡಿ ಆ್ಯಂಬುಲೆನ್ಸ್​ ಸೇವೆಯನ್ನು ಉಚಿತವಾಗಿ ಪಡೆಯಬಹುದು.
  • ಹಾವು ಕಡಿತದಿಂದ ಮರಣ ಹೊಂದವರ Death Audit ಅನ್ನು ಗೊತ್ತುಪಡಿಸಿದ ತಂಡದಿಂದ ನಡೆಸಲಾಗುತ್ತಿದೆ.
  • ಹಾವು ಕಡಿತದ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ, ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ತರಬೇತಿಗಳನ್ನು ನಡೆಸಲಾಗಿದೆ.
  • ಹಾವು ಕಡಿತದ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ ಬಲಪಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸರ್ಕಾರದ ವಿವಿಧ ಸಚಿವಾಲಯ ಮತ್ತು ಪ್ರಮುಖ stakeholders ಗಳ ಸಹಯೋಗದೊಂದಿಗೆ ಹಾವು ಕಡಿತದ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ (SAPSE) ರಾಜ್ಯ ಕ್ರಿಯಾ ಯೋಜನೆ ಸಿದ್ದಪಡಿಸುವ ಕಾರ್ಯಾಗಾರವನ್ನು ಆಯೋಜಿಸುತ್ತಿದೆ.
  • ಈ ಕಾರ್ಯಾಗಾರವು ಹಾವು ಕಡಿತದ ಪ್ರಕರಣ ಮತ್ತು ಸಾವುಗಳನ್ನು ಕಡಿಮೆ ಮಾಡಲು ಕಾರ್ಯತಂತ್ರದ ಚೌಕಟ್ಟನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ ಹಾಗೂ 2030ರ ವೇಳೆಗೆ ಹಾವು ಕಡಿತದಿಂದ ಉಂಟಾಗುವ ಸಾವುಗಳು ಮತ್ತು ಅಂಗವೈಕಲ್ಯವನ್ನು ಅರ್ಧದಷ್ಟು ಕಡಿಮೆ ಮಾಡುವ ಗುರಿ ಇದೆ.
  • ಅರಿವು, ತಡೆಗಟ್ಟುವಿಕೆ ಕ್ರಮಗಳು ಮತ್ತು ಆಂಟಿ ಸ್ನೇಕ್ ವೆನಮ್ (ASV) ಸೇರಿದಂತೆ ಸಕಾಲಿಕ ವೈದ್ಯಕೀಯ ಚಿಕಿತ್ಸೆಯಿಂದ ಹಾವು ಕಡಿತದ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ (SBPC) ಯಶಸ್ವಿ ಅನುಷ್ಠಾನ ಸಾಧ್ಯವಾಗುತ್ತದೆ.
  • ಹಾವು ಕಡಿತಕ್ಕೆ ಸಂಬಂಧಿಸಿದ ರಾಜ್ಯ ಕ್ರಿಯಾಯೋಜನೆಯ ವಿವಿಧ ಇಲಾಖೆಗಳಿಗೆ ಮಾರ್ಗದರ್ಶಿಯ ದಾಖಲೆಯಾಗಿರುತ್ತದೆ ಮುಂದುವರೆದು ಸಾರ್ವಜನಿಕ ಆರೋಗ್ಯ ಸವಾಲನ್ನು ಎದುರಿಸಲು ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಂತೆ, ಸಂಬಂಧಿತ ಎಲ್ಲಾ ಇಲಾಖೆಯನ್ನು ಪ್ರೇರೇಪಿಸಿ ಕಾರ್ಯೋನ್ಮುಖವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನೂ ಓದಿ:ಪ್ರಾಣಿಗಳಿಗೆ ಬರುವ ಎಲ್ಲಾ ರೋಗಗಳು ಮಾನವರಿಗೆ ಸಾಂಕ್ರಾಮಿಕವಲ್ಲ: ಪಶುಸಂಗೋಪನೆ ಇಲಾಖೆ ಮಾಹಿತಿ - World Zoonoses Day

ABOUT THE AUTHOR

...view details