ಚಿಕ್ಕಬಳ್ಳಾಪುರ:ಅಕ್ಕ-ಪಕ್ಕದ ಮನೆಯವರು ವಿವಾದಿತ ರಸ್ತೆ ಜಾಗದ ವಿಚಾರವಾಗಿ ಮಾಡಿದ ಜಗಳದಿಂದ ಮನನೊಂದು ಬಾಲಕನೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕವರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್ ಹಾಗೂ ಪುಷ್ಪ ದಂಪತಿಗಳ 16 ವರ್ಷದ ಮಗ ಮೃತ ಬಾಲಕ.
ಮೃತ ಬಾಲಕನ ತಂದೆ ಹೇಳಿಕೆ: 'ಶನಿವಾರ ಸಂಜೆ ಗ್ರಾಮದ ರಾಮಯ್ಯ ಹಾಗೂ ಲಕ್ಷ್ಮಮ್ಮ ದಂಪತಿ, ಹಾಗೂ ಲಕ್ಷಯ್ಯ ಹಾಗೂ ಆಶಮ್ಮ ದಂಪತಿ ಎಂಬುವವರು ಪುತ್ರ ಸುದೀಪ್ ಹಾಗೂ ಆತನ ತಂಗಿಯ ಮೇಲೆ ವಿವಾದಿತ ರಸ್ತೆಯಲ್ಲಿ ಓಡಾಡಿದ ಕಾರಣ ಜಗಳ ಮಾಡಿ ಹಲ್ಲೆ ಮಾಡಿದ್ದರು. ಈ ವೇಳೆ ಕೋಪಗೊಂಡ ಮಗ ಇಟ್ಟಿಗೆ ತೆಗೆದುಕೊಂಡು ಎಸೆದಿದ್ದು ರಾಮಯ್ಯ ಎಂಬುವವರು ಗಾಯಗೊಂಡಿದ್ದರು. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ನನ್ನ ಹಾಗೂ ಮಗನ ವಿರುದ್ಧ ದೂರು ನೀಡಿದ್ದಾರೆ. ದೂರು ನೀಡಿ ಸುಮ್ನನಾಗದೆ ನಿಮ್ಮನ್ನು ಜೈಲಿಗೆ ಹಾಕಿಸದೆ ಬಿಡುವುದಿಲ್ಲ ಎಂದು ಎರಡು ಕುಟುಂಬದವರು ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ನನ್ನ ಮಗ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ಮೃತ ಬಾಲಕನ ತಂದೆ ಮಂಜುನಾಥ್ ತಿಳಿಸಿದ್ದಾರೆ.