ಮೈಸೂರು: ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವ ರೀತಿ ತಂತ್ರಜ್ಞಾನ ಬಳಸಿ ನಕಲಿ ಫೋಟೋ ರಚಿಸಿ ವೈರಲ್ ಮಾಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ನಗರದ ಲಕ್ಷ್ಮೀಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ತಮ್ಮ ದೂರಿನ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ನಾನು ಎಂದಾದರೂ ಧರ್ಮದ ಬಗ್ಗೆ ಮಾತನಾಡಿದ್ದೀನಾ?. ಇವರುಗಳು ಧರ್ಮ-ಧರ್ಮದ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದೇ ಅವರ ಕೆಲಸವಾಗಿಬಿಟ್ಟಿದೆ. ಪ್ರಶಾಂತ್ ಸಂಬರಗಿ ಯಾರು ಅಂತಾನೇ ಗೊತ್ತಿಲ್ಲ. ಎಐ ತಂತ್ರಜ್ಞಾನ ಬಳಸಿ ನನ್ನ ನಕಲಿ ಫೋಟೋ ರಚಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ, ಪೊಲೀಸ್ ದೂರು ನೀಡಿ ಎಫ್.ಐ.ಆರ್ ದಾಖಲು ಮಾಡಿಸಿದ್ದೇನೆ ಎಂದು ಬಹುಭಾಷಾ ನಟ ತಿಳಿಸಿದರು.
ಕುಂಭಮೇಳ ಒಂದು ಪುಣ್ಯ ಸ್ಥಳ : ಮಹಾ ಕುಂಭಮೇಳ ಹಿಂದು ಧರ್ಮದವರಿಗೆ ಹಾಗೂ ದೇವರನ್ನು ನಂಬುವವರಿಗೆ ಒಂದು ಪುಣ್ಯ ಸ್ಥಳ. ಆದ್ರೆ ನನ್ನ ನಕಲಿ ಫೋಟೋ ವೈರಲ್ ಮಾಡುತ್ತಿದ್ದಾರೆ. ಅಂಥ ಪುಣ್ಯದ ಕೆಲಸದಲ್ಲಿ ರಾಜಕಾರಣ ನಡೆಯುತ್ತಿದೆ. ಇಂತಹವರು ಮೊದಲಿನಿಂದಲೂ ಪ್ರಕಾಶ್ ರಾಜ್ ಹಿಂದು ವಿರೋಧಿ ಎಂದು ಸುಳ್ಳು ಸುದ್ದಿ ಹಬ್ಬಿಸಿಕೊಂಡು ಬಂದಿದ್ದಾರೆ. ಪ್ರಶಾಂತ್ ಸಂಬರಗಿ ಪ್ರಖ್ಯಾತರೋ, ಕುಖ್ಯಾತರೋ ಎಂಬುದು ನನಗೆ ಗೊತ್ತಿಲ್ಲ. ಆದ್ರೆ ನನ್ನ ವಿರುದ್ಧ ದೇಶದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಅಭ್ಯಾಸವಾಗಿ ಬಿಟ್ಟಿದೆ. ಇದನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ! ದ್ವೇಷ ಹರಡಿಸುತ್ತಿದ್ದಾರೆ. ಇವರು ನಿಜವಾಗಿಯೂ ಧರ್ಮವನ್ನು ಅನುಸರಿಸುವವರಲ್ಲ ಎಂದರು.
ಸುಳ್ಳು ಕೇಸ್ ವಿರುದ್ಧ ಗೆದ್ದಿದ್ದೇನೆ : ಜನರ ನಂಬಿಕೆಗೆ ಅಘಾತವಾಗುತ್ತಿದೆ. ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಕೇಸ್ ಹಾಕಿ ಗೆದ್ದಿದ್ದೇನೆ ಕೂಡಾ. ಇದೀಗ ಪ್ರಶಾಂತ್ ಸಂಬರಗಿ ವಿರುದ್ಧ ದೂರು ನೀಡಿ ಎಫ್.ಐ.ಆರ್ ಮಾಡಿಸಿದ್ದೇನೆ. 15 ದಿನಗಳಲ್ಲಿ ಆ ವ್ಯಕ್ತಿ ಠಾಣೆಗೆ ಬಂದು ಉತ್ತರ ನೀಡಬೇಕು. ಸತ್ಯಾನುಸತ್ಯತೆ ಎಲ್ಲರಿಗೂ ತಿಳಿಯಬೇಕು. ಫೇಕ್ ನ್ಯೂಸ್ ಸಮಾಜವನ್ನು ಹಾಳು ಮಾಡುತ್ತಿದೆ. ಸುಳ್ಳು ಸುದ್ದಿ ಹರಡುವವರಿಗೆ ಇದೊಂದು ಪಾಠ ಆಗಬೇಕು ಎಂದು ಹೇಳಿದರು.
ನಟಿಯರಿಗೆ ತೊಂದರೆ : ಪ್ರಶಾಂತ್ ಸಂಬರಗಿ ಇದೇ ರೀತಿ ಸಾಕಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾರೆ. ಹಿಂದೆ ನಟಿಯರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಆರೋಪಿಸಿದ ಪ್ರಕಾಶ್ ರಾಜ್, ಈ ಮನುಷ್ಯನಿಗೆ ಪಾಠ ಕಲಿಸಿಬೇಕು ಎಂದು ತಿಳಿಸಿದರು. ಅನುಮತಿ ಇಲ್ಲದೇ ಯಾರೂ ಕೂಡಾ ಯಾರ ಫೋಟೋಗಳನ್ನು ಬಳಸಬಾರದು. ಇದು ಅಕ್ಷಮ್ಯ ಅಪರಾಧ ಎಂದು ತಮ್ಮ ಅಸಮಧಾನ ಹೊರಹಾಕಿದರು.
ಇದನ್ನೂ ಓದಿ: ಲೈವ್ ಪ್ರೋಗ್ರಾಮ್ನಲ್ಲೇ ಮಹಿಳಾ ಅಭಿಮಾನಿಗೆ ಚುಂಬಿಸಿದ ಗಾಯಕ ಉದಿತ್ ನಾರಾಯಣ್: ವಿಡಿಯೋ ವೈರಲ್
ಕುಂಭಮೇಳ ಪುಣ್ಯ ಸ್ನಾನ ಮಾಡಿದ್ರೆ ತಪ್ಪೇನು? ಪುಣ್ಯ ಸ್ನಾನ ಮಾಡುವುದರಲ್ಲಿ ತಪ್ಪೇನಿದೆ? ಅದು ಅವರವರ ನಂಬಿಕೆಗೆ ಬಿಟ್ಟದ್ದು. ನನಗೆ ದೇವರ ಮೇಲೆ ನಂಬಿಕೆ ಇಲ್ಲ. ನನಗೆ ಮನುಷ್ಯರ ಮೇಲೆ ನಂಬಿಕೆ. ದೇವರಿಲ್ಲದೇ ಬದುಕಬಹುದು, ಆದರೆ ಮನುಷ್ಯರಿಲ್ಲದೇ ಬದುಕಲು ಸಾಧ್ಯವಿಲ್ಲ. ಹಾಗಂತ, ಅವರ ನಂಬಿಕೆಯನ್ನು ನಾನು ಪ್ರಶ್ನೆ ಮಾಡಲ್ಲ. ಆದ್ರೆ ಇಂತಹ ವಿಚಾರಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ತಪ್ಪು ಎಂದು ಅಸಮಧಾನ ಹೊರಹಾಕಿದ್ರು.
ಇದನ್ನೂ ಓದಿ: ಅಲ್ಲಿಯೂ ಸೈ, ಇಲ್ಲಿಯೂ ಸೈ: ಸವಾಲಿನ ಸಂದರ್ಭ ಶಿವರಾಜ್ಕುಮಾರ್ ದಂಪತಿಗೆ ಧೈರ್ಯ ತುಂಬಿದ ಶಾಸಕ ಭೀಮಣ್ಣ
ಟೀಕೆಗೆ ಪ್ರತಿಕ್ರಿಯೆ : ಅವರವರ ಭಾವಕ್ಕೆ, ಅವರ ಭಕ್ತಿ. ನಾನು ಯಾರ ಬಗ್ಗೆಯೂ ಮಾತನಾಡೋದಿಲ್ಲ. ಯಾವ ನಂಬಿಕೆಯ ಬಗ್ಗೆಯೂ ಟೀಕೆ ಮಾಡಲ್ಲ. ನನ್ನ ಹೆಂಡತಿ- ಮಗಳು ದೇವಸ್ಥಾನಕ್ಕೆ ಹೋಗಿ ಹೋಮ ಹವನ ಮಾಡಿಸುತ್ತಾರೆ. ಆದ್ರೆ ನಾವು ಸಾಮರಸ್ಯದಿಂದ ಇದ್ದೇವೆ. ಮೂಢನಂಬಿಕೆಯನ್ನು ಮಾತ್ರ ಪ್ರಶ್ನೆ ಮಾಡುತ್ತೇನೆ ಎಂದರು.