ಕರ್ನಾಟಕ

karnataka

ಕಾರವಾರ ಅರ್ಬನ್ ಬ್ಯಾಂಕ್​​ನಲ್ಲಿ 54 ಕೋಟಿ ವಂಚನೆ ಆರೋಪ: ಮ್ಯಾನೇಜರ್ ಸಾವಿನ ಬಳಿಕ ಬೆಳಕಿಗೆ ಬಂದ ಪ್ರಕರಣ - Karwar Urban Cooperative Bank

By ETV Bharat Karnataka Team

Published : May 24, 2024, 9:33 PM IST

Updated : May 24, 2024, 10:40 PM IST

ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್​ನಲ್ಲಿ 54 ಕೋಟಿ ಹಣ ವಂಚನೆ ಕುರಿತಾಗಿ ನಗರದ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆತಂಕಗೊಂಡ ಗ್ರಾಹಕರು ಇಟ್ಟಿರುವ ಠೇವಣಿ ಹಣ ಹಿಂಪಡೆಯಲು ಬ್ಯಾಂಕ್​ಗೆ ಮುಗಿಬಿದ್ದಿದ್ದಾರೆ.

Karwar Urban Cooperative Bank
ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ (Etv Bharat)

ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್​ (ETV Bharat)

ಕಾರವಾರ:ನೂರು ವರ್ಷಕ್ಕೂ ಅಧಿಕ ಕಾಲ ಇತಿಹಾಸವಿರುವ ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್​ದಲ್ಲಿ 54 ಕೋಟಿ ಹಣ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗ್ರಾಹಕರಲ್ಲಿ ಆತಂಕ ಶುರುವಾಗಿದೆ. ನೂರಾರು ಕೋಟಿ ವ್ಯವಹಾರ ನಡೆಸುತ್ತಿದ್ದ ಈ ಬ್ಯಾಂಕ್ ಮ್ಯಾನೇಜರ್​ ವಿರುದ್ಧವೇ ವಂಚನೆ ಆರೋಪ ಕೇಳಿಬಂದಿದೆ. ಇದರಿಂದಾಗಿ ಠೇವಣಿ ಇಟ್ಟಿದ್ದ ಗ್ರಾಹಕರು ಹಣ ಪಡೆಯಲು ಮುಗಿಬಿದ್ದಿದ್ದಾರೆ. ಇದೀಗ ಮ್ಯಾನೇಜರ್ ಅಪಘಾತದಲ್ಲಿ ಮೃತಪಟ್ಟಿರುವುದು ಆಡಳಿತ ಮಂಡಳಿಗೆ ದೊಡ್ಡ ತಲೆ ನೋವಾಗಿ ಪರಿಣಿಮಿಸಿದೆ.

ಸಂಬಂಧಿಕರ ಖಾತೆಗೆ ಹಣ ವರ್ಗಾವಣೆ:ನಗರದ ಪ್ರತಿಷ್ಟಿತ ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಗುರುದಾಸ್ ಬಾಂದೇಕರ್ ಎಂಬುವರು ಕಳೆದ ಮೂರ್ನಾಲ್ಕು ವರ್ಷದಿಂದ ಬ್ಯಾಂಕ್​ದಲ್ಲಿ ಠೇವಣಿ ಇಟ್ಟಿದ್ದ ಸುಮಾರು 54 ಕೋಟಿ ಹಣವನ್ನು ತಮ್ಮ ಸಂಬಂಧಿ ಹಾಗೂ ಪರಿಚಯಸ್ಥರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಲ್ಲದೇ, ಪ್ರತಿ ಬಾರಿಯೂ ಆಡಿಟ್ ಮಾಡುವಾಗ ವಂಚನೆ ಮಾಡಿ ಆಡಿಟ್ ಮಾಡಿಸಿದ ಆರೋಪ ಕೇಳಿಬಂದಿದೆ. ಕಳೆದ ಒಂದು ವರ್ಷದ ಹಿಂದೆ ಮ್ಯಾನೇಜರ್ ಗುರುದಾಸ್ ಅಪಘಾತದಲ್ಲಿ ಮೃತಪಟ್ಟಿದ್ದು, ಸದ್ಯ ಆಡಿಟ್ ಮಾಡಲು ಮುಂದಾದ ವೇಳೆ ಸುಮಾರು 54 ಕೋಟಿ ಹಣ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ.

ಆಡಳಿತ ಮಂಡಳಿಯಿಂದ ದೂರು: ಇನ್ನು ಬ್ಯಾಂಕ್​​ನಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಗ್ರಾಹಕರಿದ್ದು, ಕಾರವಾರದಲ್ಲಿ ಎರಡು ಶಾಖೆಗಳಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿತ್ತು. ಸುಮಾರು 80 ಕೋಟಿಗೂ ಅಧಿಕ ಹಣ ಠೇವಣಿ ಇದ್ದು, 9 ಕೋಟಿ ಸಾಲವನ್ನು ಬ್ಯಾಂಕಿನಿಂದ ನೀಡಲಾಗಿತ್ತು. ಸದ್ಯ 54 ಕೋಟಿ ಹಣ ವಂಚನೆ ಮಾಡಿದ್ದು, ಯಾರ ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದರ ಬಗ್ಗೆ ತನಿಖೆ ನಡೆಸಲು ಆಡಳಿತ ಮಂಡಳಿ ಕಾರವಾರ ನಗರ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದೆ.

ಬ್ಯಾಂಕ್​ಗೆ ಮುಗಿಬಿದ್ದ ಗ್ರಾಹಕರು:ಇನ್ನು ಬ್ಯಾಂಕ್​​ನಲ್ಲಿ ಠೇವಣಿ ಇಟ್ಟಿದ್ದ ಹಣ ವಂಚನೆಯಾಗಿರುವ ವಿಷಯ ತಿಳಿದು ಗ್ರಾಹಕರು ಬ್ಯಾಂಕ್​​ಗೆ ಮುಗಿಬಿದ್ದಿದ್ದು ತಾವು ಠೇವಣಿ ಇಟ್ಟಿದ್ದ ಹಣವನ್ನು ವಾಪಾಸ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಆಡಳಿತ ಮಂಡಳಿ ವಿರುದ್ದವೂ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಪೊಲೀಸರು ಸಮಗ್ರ ತನಿಖೆ:ಸದ್ಯ ಬ್ಯಾಂಕಿನ ಆಡಳಿತ ಮಂಡಳಿ ಪ್ರಕಾರ ಐದು ಲಕ್ಷದ ವರೆಗೆ ಡಿಪಾಸಿಟ್ ಇರುವವರಿಗೆ ಇನ್ಸುರೆನ್ಸ್ ಇರುವುದರಿಂದ ಯಾವುದೇ ಸಮಸ್ಯೆ ಬರುವುದಿಲ್ಲ. ಜನರು ಹಣ ವಾಪಾಸ್​ ಮರಳಿಸುತ್ತೇವೆ ಎನ್ನುತ್ತಿದೆ ಆಡಳಿತ ಮಂಡಳಿ. ಆದರೆ, ಗ್ರಾಹಕರು ಮಾತ್ರ ತಮ್ಮ ಹಣ ಹಿಂದೆ ವಾಪಸ್​ ಸಿಗುತ್ತದೆಯೋ ಇಲ್ಲವೋ ಅನ್ನುವ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯಿಂದ ಇಂತಹ ವಂಚನೆ ಆಗುವುದು ಅಸಾಧ್ಯ. ಇದರ ಹಿಂದೆ ಹಲವರು ಇದ್ದಾರೆ ಎನ್ನುವ ಆರೋಪಗಳು ಹರಿದಾಡುತ್ತಿದೆ.

ಈಗ ಸದ್ಯ 54 ಕೋಟಿ ಹಣ ವಂಚನೆ ಕುರಿತಾಗಿ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ. ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್​ದಲ್ಲಿ ವಂಚನೆ ಪ್ರಕರಣವನ್ನು ಭೇದಿಸಿ ಪೊಲೀಸರು ಠೇವಣಿ ಇಟ್ಟಿರುವ ಗ್ರಾಹಕರ ಹಿತವನ್ನು ಕಾಪಾಡುವರೋ ಎನ್ನುವುದನ್ನು ಕಾದು ನೋಡಬೇಕು.

ಇದನ್ನೂಓದಿ:ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣ: ಸಿಐಡಿ ಅಧಿಕಾರಿಗಳಿಂದ ಸ್ಥಳ ಮಹಜರು - Anjali murder case

Last Updated : May 24, 2024, 10:40 PM IST

ABOUT THE AUTHOR

...view details