ಕರ್ನಾಟಕ

karnataka

By ETV Bharat Karnataka Team

Published : May 18, 2024, 9:27 AM IST

ETV Bharat / sports

ಆರ್​ಸಿಬಿ-ಸಿಎಸ್​ಕೆ ಪಂದ್ಯಕ್ಕೆ ವರುಣ ಕಾಡಿದರೇನಂತೆ ಚಿನ್ನಸ್ವಾಮಿಯಲ್ಲಿದೆ ಸಬ್ ಏರ್ ವ್ಯವಸ್ಥೆ - Sub Air System in Chinnaswamy

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆ ಬಂದರೂ ಕೂಡ ತ್ವರಿತವಾಗಿ ಆಟ ಪುನಾರಂಭಿಸಲು ಅತ್ಯಾಧುನಿಕ 'ಸಬ್ ಏರ್ ಸಿಸ್ಟಮ್' ಬಹಳ ನೆರವಾಗುತ್ತಿದೆ.

bengaluru Stadium
ಚಿನ್ನಸ್ವಾಮಿ ಕ್ರೀಡಾಂಗಣ (Pic: IANS)

ಬೆಂಗಳೂರು:ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಪ್ಲೇ ಆಫ್ ಹಂತಕ್ಕೇರಲು ಉಭಯ ತಂಡಗಳಿಗೆ ಇಂದಿನ ಪಂದ್ಯ ಪ್ರಮುಖವಾಗಿದೆ. ಹೀಗಾಗಿ, ಕ್ರಿಕೆಟ್ ಅಭಿಮಾನಿಗಳ ಚಿತ್ತ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದತ್ತ ನೆಟ್ಟಿದೆ. ಮತ್ತೊಂದೆಡೆ, ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಭೀತಿ ಸಹ ಎದುರಾಗಿದೆ. ಬೆಂಗಳೂರಿನಲ್ಲಿ ಇಂದು ತೀವ್ರ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಆದರೆ, ಮಳೆ ಬಂದು ಪಂದ್ಯ ರದ್ದಾಗುವ ಸಾಧ್ಯತೆ ಚಿನ್ನಸ್ವಾಮಿ ಕ್ರೀಡಾಂಗಣಗದಲ್ಲಿ ವಿರಳವೆಂದೇ ಹೇಳಬಹುದು. ಯಾಕೆಂದರೆ ಮಳೆ ನಿಂತ ಕೆಲವೇ ಕ್ಷಣಗಳಲ್ಲಿ ಮೈದಾನವನ್ನು ಪಂದ್ಯಕ್ಕೆ ಸಿದ್ಧಪಡಿಸುವ ಅತ್ಯಾಧುನಿಕ 'ಸಬ್ ಏರ್ ಸಿಸ್ಟಮ್' ಅನ್ನು ಚಿನ್ನಸ್ವಾಮಿ ಕ್ರೀಡಾಂಗಣ ಹೊಂದಿದೆ. ಈ ಅತ್ಯಾಧುನಿಕ ವ್ಯವಸ್ಥೆ ಅಳವಡಿಸಿಕೊಂಡಿರುವ ವಿಶ್ವದ ಮೊದಲ ಕ್ರಿಕೆಟ್ ಮೈದಾನ ಎಂಬ ಹೆಗ್ಗಳಿಕೆ ಚಿನ್ನಸ್ವಾಮಿ ಮೈದಾನಕ್ಕಿದೆ.

2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ತೀವ್ರ ಮಳೆ ಬಂದು ನಿಂತ ಬಳಿಕವೂ ಯಾವುದೇ ಓವರ್‌ಗಳ ಕಡಿತವಿಲ್ಲದೆ ನಡೆದು ಫಲಿತಾಂಶ ಕಂಡಿತ್ತು. ಇದು ಸಬ್ ಏರ್ ಸಿಸ್ಟಮ್​​ನ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿ ಎನ್ನುವುದು ಅನೇಕ ಕ್ರಿಕೆಟ್ ವಿಶ್ಲೇಷಕರ ವಾದ. 2023ರ ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಕ್ರೀಡಾಂಗಣಗಳ ಸಿದ್ಧತೆ ಪರಿಶೀಲನೆಗಾಗಿ ಆಗಮಿಸಿದ್ದ ಐಸಿಸಿಯ ತಜ್ಞರ ಸಮಿತಿ ಸಹ ಚಿನ್ನಸ್ವಾಮಿ ಕ್ರೀಡಾಂಗಣದ ಸಬ್ ಏರ್ ಸಿಸ್ಟಮ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತ್ತು.

ಏನಿದು ಸಬ್‌ ಏರ್‌ ಸಿಸ್ಟಮ್‌?:ಮಳೆಯ ಬಂದಾಗ ಎದುರಾಗುವ ಸವಾಲನ್ನು ತ್ವರಿತವಾಗಿ ನಿಭಾಯಿಸುವಲ್ಲಿ ಸಬ್ ಏರ್ ಸಿಸ್ಟಮ್ (Subsurface Aeration And Vacuum-Powered Drainage System) ಉಪಯುಕ್ತವಾಗಿದೆ. ಸಾಮಾನ್ಯವಾಗಿ ಯಾವುದೇ ಕ್ರೀಡಾಂಗಣದಲ್ಲಿ ಮಳೆಯಾದಾಗ ಪಿಚ್​ನ್ನು ಕವರ್ ಮಾಡಲಾಗುತ್ತದೆ. ಜೊತೆಗೆ, ಅದರ ಹೊರಾಂಗಣವನ್ನು ಒಣಗಿಸಲು ರೋಲರ್, ಮತ್ತು ನೀರನ್ನು ಇಂಗಿಸುವ ಯಂತ್ರಗಳ ಮೊರೆಹೋಗಲಾಗುತ್ತದೆ. ಆದರೆ ಸಬ್ ಏರ್ ಸಿಸ್ಟಮ್ ನೀರಿನಿಂದ ತೊಯ್ದ ಹೊರಾಂಗಣವನ್ನು ಕೆಲವೇ ನಿಮಿಷಗಳಲ್ಲಿ ಒಣಗಿಸುತ್ತದೆ.

ಇದನ್ನೂ ಓದಿ:ನಾಳೆ ಮಾಡು ಇಲ್ಲವೇ ಮಡಿ ಪಂದ್ಯ; ವಿರಾಟ್​ ಜೆರ್ಸಿ ನಂಬರ್​ 18, ಪಂದ್ಯ ಮೇ 18, ರನ್​ 18, ಓವರ್​ 18!: ಏನಿದರ ನಂಟು!? - Number 18 Special

ಸಬ್ ಏರ್ ಸಿಸ್ಟಮ್​ನಲ್ಲಿ ಮೈದಾನದ ಹೊರಾಂಗಣದ ಒಳಗೆ ಅಂದರೆ ಸುಮಾರು ಅರ್ಧದಿಂದ ಒಂದು ಅಡಿ ಅಳದಲ್ಲಿ ಪೈಪ್​ಗಳನ್ನು ಅಳವಡಿಸಲಾಗಿರುತ್ತದೆ. ಆ ಪೈಪುಗಳಲ್ಲಿ ಸಂಗ್ರಹವಾಗುವ ನೀರನ್ನು ಹೀರಲು ಅತ್ಯಾಧುನಿಕ ಯಂತ್ರವನ್ನೂ ಕ್ರೀಡಾಂಗಣದಲ್ಲಿ ಅಳವಡಿಕೆ ಮಾಡಲಾಗಿರುತ್ತದೆ. ಒಮ್ಮೆ ಮಳೆ ಆರಂಭವಾದ ತಕ್ಷಣ ಸಬ್‌ ಏರ್‌ ಸಿಸ್ಟಮ್​​ ನೀರನ್ನು ಹೀರುವ ಕಾರ್ಯದಲ್ಲಿ ತೊಡಗುತ್ತದೆ. ಅಲ್ಲದೆ, ನೀರನ್ನು ಸಂಪೂರ್ಣವಾಗಿ ಹೀರಿದ ಬಳಿಕ ಅದೇ ಪೈಪ್​ಗಳ ಮೂಲಕ ಬಿಸಿ ಗಾಳಿಯನ್ನು ಹೊರಸೂಸುತ್ತದೆ. ಇದರಿಂದಾಗಿ ಮೈದಾನದ ಹೊರಾಂಗಣದ ನೀರನ್ನು ತೆಗೆದು ಮೈದಾನವನ್ನು ಒಣಗಿಸಲು ನೆರವಾಗುತ್ತದೆ. ಈಗಾಗಲೇ ವಿಶ್ವದ ಕೆಲ ಬೇಸ್‌ಬಾಲ್‌, ಫುಟ್ಬಾಲ್‌, ರಗ್ಬಿ ಹಾಗೂ ಗಾಲ್ಫ್ ಕ್ರೀಡಾಂಗಣಗಳಲ್ಲಿ ಸಬ್ ಏರ್ ಸಿಸ್ಟಮ್​ ಕಾರ್ಯ ನಿರ್ವಹಿಸುತ್ತಿದೆ.

ನೀರನ್ನು ಮಾತ್ರ ಹೇಗೆ ಹೀರುತ್ತದೆ?:ಸಬ್ ಏರ್ ಸಿಸ್ಟಮ್​ ಮಳೆಯ ನೀರಿನ ಜೊತೆ ಮೈದಾನದ ಹೊರಾಂಗಣದ ಮಣ್ಣು ಒಳ ಸೇರದಂತೆ ಎಚ್ಚರಿಕೆ ವಹಿಸಲು ಜಲ್ಲಿಕಲ್ಲುಗಳ ವ್ಯವಸ್ಥೆ ಇದೆ. ಆದ್ದರಿಂದ ಮೈದಾನದ ಹುಲ್ಲಿನ ಮೇಲೆ ಬೀಳುವ ಮಳೆ ನೀರು ಸಣ್ಣ ಸಣ್ಣ ಪೈಪ್​ಗಳ ಮೂಲಕ ಸೇರಿ ಬಳಿಕ ಮುಖ್ಯ ಪೈಪ್​ಗೆ ತಲುಪುತ್ತದೆ. ಬಳಿಕ ಆ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ಒಂದು ಸಬ್ ಏರ್ ಯಂತ್ರದ ಬೆಲೆ 3.5 ಕೋಟಿ ರೂ. ಇದ್ದು, ಈಗಾಗಲೇ 2017ರಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣ ಈ ವ್ಯವಸ್ಥೆ ಅಳವಡಿಸಿಕೊಂಡಿದೆ. ಯುಎಸ್ಎ ಮೂಲದ ಸಬ್ ಏರ್ ಕಂಪನಿಯ ಸಹಯೋಗದೊಂದಿಗೆ ಹೈದರಾಬಾದ್‌ ಮೂಲದ ಗ್ರೇಟ್‌ ಸ್ಪೋರ್ಟ್ಸ್‌ ಇನ್‌ಫ್ರಾ ಎನ್ನುವ ಸಂಸ್ಥೆ ಈ ವ್ಯವಸ್ಥೆ ಅಳವಡಿಸಿಕೊಟ್ಟಿದೆ.

ಇದನ್ನೂ ಓದಿ:IPL 2024: ಗೆಲುವಿನೊಂದಿಗೆ ಐಪಿಎಲ್​ ಅಭಿಯಾನ ಮುಗಿಸಿದ ಲಕ್ನೋ - LSG Beat MI

ABOUT THE AUTHOR

...view details