ಕರ್ನಾಟಕ

karnataka

ಚೆನ್ನೈ ಬೌಲರ್ಸ್​ ಬೆಂಡೆತ್ತಿದ ಡಿಕೆ, ಅನುಜ್​ ರಾವತ್;​ ​ಋತುರಾಜ್​ ಪಡೆಗೆ 174 ರನ್​ಗಳ ಗುರಿ ನೀಡಿದ ಆರ್​ಸಿಬಿ - IPL 2024 Opening Match

By PTI

Published : Mar 22, 2024, 8:23 PM IST

Updated : Mar 22, 2024, 10:41 PM IST

ಇಂಡಿಯನ್​ ಪ್ರೀಮಿಯರ್​ ಲೀಗ್​ 2024ರ ಉದ್ಘಾಟನೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್​ ಕಿಂಗ್ಸ್​ ಗೆ 174 ರನ್​ಗಳ ಟಾರ್ಗೆಟ್​ ನೀಡಿದೆ.

ಐಪಿಎಲ್ 2024 ಉದ್ಘಾಟನೆ ಪಂದ್ಯ
ಐಪಿಎಲ್ 2024 ಉದ್ಘಾಟನೆ ಪಂದ್ಯ

ಚೆನ್ನೈ ( ತಮಿಳುನಾಡು) :ಇಲ್ಲಿನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವಇಂಡಿಯನ್​ ಪ್ರೀಮಿಯರ್​ ಲೀಗ್​ 2024ರ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 174 ರನ್​ಗಳ ಗುರಿ ನೀಡಿದೆ.

ಕುಸಿದ ಆರ್​ಸಿಬಿ ತಂಡಕ್ಕೆ ಆಸರೆಯಾದ ದಿನೇಶ್ ಕಾರ್ತಿಕ್ ಮತ್ತು ಅನುಜ್ ರಾವತ್ ಜೋಡಿ 50 ಎಸೆತಗಳಲ್ಲಿ 95 ರನ್ ಜೊತೆಯಾಟವಾಡಿತು. ಈ ಮೂಲಕ ಆರ್​ಸಿಬಿ ಬೃಹತ್​ ರನ್​ ಕಲೆ ಹಾಕಲು ಸಾಧ್ಯವಾಯಿತು. ಚೆನ್ನೈ ಪರ ​ಮುಸ್ತಾಫಿಜುರ್ ರೆಹಮಾನ್ ಪ್ರಮುಖ ನಾಲ್ಕು ವಿಕೆಟ್​ಗಳನ್ನು ಪಡೆದರೆ, ದೀಪಕ್ ಚಹಾರ್ ತಲಾ ಒಂದು ವಿಕೆಟ್​ ಪಡೆದು ತೃಪ್ತಿ ಪಟ್ಟರು.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಅವರು ವಿರಾಟ್​ ಕೊಹ್ಲಿ ಜೊತೆ ಇನ್ನಿಂಗ್ಸ್​ ಆರಂಭಿಸಿದರು. ಆರ್ಕಷಕ ಹೊಡೆತಗಳನ್ನು ಹೊಡೆಯುವ ಮೂಲಕ ಬೃಹತ್​ ರನ್​ ಕಲೆಹಾಕುವ ಲೆಕ್ಕಚಾರದಲ್ಲಿದ ಫಾಫ್ ಡು ಪ್ಲೆಸಿಸ್ (35) ಮುಸ್ತಾಫಿಜುರ್ ರೆಹಮಾನ್ ಬೌಲಿಂಗ್​ನಲ್ಲಿ ರಚಿನ್ ರವೀಂದ್ರಗೆ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಬಳಿಕ ಬಂದ ರಜತ್ ಪಾಟಿದಾರ್ ನನ್ನು ಶೂನ್ಯಕ್ಕೆ ಮುಸ್ತಾಫಿಜುರ್​ ಔಟ್​ ಮಾಡಿದರು. ಹಿಂದೆಯೇ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಗೋಲ್ಡನ್​ ಡಕ್​ ಔಟ್​ ಆಗುವ ಮೂಲಕ ದೀಪಕ್ ಚಹರ್​ಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು.

ಪ್ರಮುಖ ಮೂರು ವಿಕೆಟ್​ ಕೆಳೆದುಕೊಂಡು ಸಂಕಷ್ಟ ಪರಿಸ್ಥಿತಿಯಲ್ಲಿದ ಆರ್​ಸಿಬಿ ತಂಡಕ್ಕೆ ಭರವಸೆ ಆಟಗಾರ ಕ್ಯಾಮೆರಾನ್ ಗ್ರೀನ್ ಮತ್ತು ವಿರಾಟ್​ ಕೊಹ್ಲಿ ಆಸರೆಯಾಗುವ ಮುನ್ಸೂಚನೆ ನೀಡಿದರು. ಆದರೆ, ಮತ್ತೆ ದಾಳಿಗೆ ಇಳಿದ ಬಾಂಗ್ಲಾ ವೇಗಿ ಮುಸ್ತಾಫಿಜುರ್ ಒಂದೇ ಓವರ್​ನಲ್ಲಿ ವಿರಾಟ್​ ಕೊಹ್ಲಿ (21) ಮತ್ತು ಕ್ಯಾಮೆರಾನ್ ಗ್ರೀನ್ (18) ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು.

ಕೊನೆಯಲ್ಲಿ ಕ್ರೀಸ್​ಗೆ ಬಂದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಮತ್ತು ಯುವ ಬ್ಯಾಟರ್​ ಅನುಜ್ ರಾವತ್ ತಾಳ್ಮೆಯುಕ್ತ ಆಟವಾಡಿದರು. ನಂತರ ಸ್ಪೋಟಕ ಬ್ಯಾಟಿಂಗ್​ ಪ್ರಾರಂಭಿಸಿದ ಈ ಜೋಡಿ ಆರ್​ಸಿಬಿ ರನ್​ ವೇಗ ಹೆಚ್ಚಿಸಿದರು. ಅಂತಿಮವಾಗಿ ಈ ಜೋಡಿ ಚೆನ್ನೈ ಬೌಲಿಂಗ್​ ವಿಭಾಗವನ್ನು ಎದುರಿಸುವಲ್ಲಿ ಯಶ ಕಂಡಿತು. ಬಿರುಸಿನ ಬ್ಯಾಟಿಂಗ್​ ಮಾಡಿದ ಅನುಜ್​ ರಾವತ್​​ (49) ನಾಲ್ಕು ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ ಅರ್ಧಶತಕದಿಂದ ವಂಚಿತರಾಗಿ ರನ್ ಔಟ್​ ಆದರು​. ಇತ್ತ ದಿನೇಶ್​ ಕಾರ್ತಿಕ್ (38) ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಸಿ ಮಿಂಚಿದರು.​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 173 ರನ್​ಗಳನ್ನು ಗಳಿಸಲು ಆರ್​ಸಿಬಿ ಶಕ್ತವಾಯಿತು.

ಹಾಲಿ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಋತುರಾಜ್ ಗಾಯಕ್ವಾಡ್ ಚೆನ್ನೈ ತಂಡವನ್ನು ಮುನ್ನಡೆಸುತ್ತಿದ್ದಾರೆ.

ತಂಡಗಳು: ರಾಯಲ್ ಚಾಲೆಂಜರ್ಸ್ ಬೆಂಗಳೂರು:ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೀ), ಅನುಜ್ ರಾವತ್ , ಕರ್ಣ್ ಶರ್ಮಾ, ಅಲ್ಜಾರಿ ಜೋಸೆಫ್, ಮಯಾಂಕ್ ದಾಗರ್, ಮೊಹಮ್ಮದ್ ಸಿರಾಜ್.

ಚೆನ್ನೈ ಸೂಪರ್ ಕಿಂಗ್ಸ್:ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೀ), ದೀಪಕ್ ಚಾಹರ್, ಮಹೇಶ್ ತೀಕ್ಷಣ, ಮುಸ್ತಾಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ.

Last Updated : Mar 22, 2024, 10:41 PM IST

ABOUT THE AUTHOR

...view details