ನವದೆಹಲಿ:ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ಶನಿವಾರ (ಜೂನ್ 29) ನಡೆದ ಐಸಿಸಿ ಟಿ-20 ವಿಶ್ವಕಪ್ನ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಬಗ್ಗುಬಡಿದು ಎರಡನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿದ ಭಾರತ ಕ್ರಿಕೆಟ್ ತಂಡಕ್ಕೆ ಮೋದಿ ಶುಭಾಶಯ ಕೋರಿದ್ದಲ್ಲದೇ, ಸ್ವತಃ ಫೋನ್ ಕರೆ ಮಾಡಿ ಪ್ರತಿ ಆಟಗಾರರನ್ನು ಮಾತನಾಡಿಸಿದ್ದಾರೆ.
ಸಂಭಾಷಣೆಯ ವೇಳೆ ರೋಹಿತ್ ಶರ್ಮಾ ನಾಯಕತ್ವವನ್ನು ಪ್ರಧಾನಿ ಶ್ಲಾಘಿಸಿದ್ದಾರೆ. ವಿಶ್ವಕಪ್ ಗೆಲುವಿನ ಮೂಲಕ ಟಿ20 ವೃತ್ತಿಜೀವನಕ್ಕೆ ವಿದಾಯ ಹೇಳಿದ್ದನ್ನೂ ಅವರು ಮೆಚ್ಚಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ ಆಟವನ್ನು ಮೋದಿ ಪ್ರಸ್ತಾಪಿಸಿದರು. ಭಾರತೀಯ ಕ್ರಿಕೆಟ್ಗೆ ಕೊಹ್ಲಿ ಕೊಡುಗೆಗಳನ್ನು ವಿಶೇಷವಾಗಿ ಹೊಗಳಿದರು.
ದ್ರೋಣ ದ್ರಾವಿಡ್ಗೆ ಬಹುಪರಾಕ್:ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ರ ಸಾಧನೆಯನ್ನು ಇದೇ ವೇಳೆ ಪ್ರಧಾನಿ ಬಣ್ಣಿಸಿ, ವಿಶ್ವಕಪ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಕ್ಕೆ ಧನ್ಯವಾದ ಹೇಳಿದರು. ಜೊತೆಗೆ, ತಂಡವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ 'ದ್ರೋಣ'ರ ಕ್ರಿಕೆಟ್ ಜೀವನವನ್ನೂ ಹೊಗಳಿದ್ದಾರೆ.
ಫೈನಲ್ ಪಂದ್ಯದ ಹೀರೋಗಳಾದ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾರ ಬಗ್ಗೆಯೂ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯ ಓವರ್ನಲ್ಲಿ ಬೇಕಾಗಿದ್ದ 16 ರನ್ಗಳನ್ನು ಬಿಟ್ಟುಕೊಡದೆ ಬೌಲಿಂಗ್ ಮಾಡಿದ ಪಾಂಡ್ಯ, ಬೌಂಡರಿ ಗೆರೆಯಲ್ಲಿ ಅತ್ಯದ್ಭುತವಾಗಿ ಕ್ಯಾಚ್ ಹಿಡಿದು ಪಂದ್ಯವನ್ನೇ ತಿರುಗಿಸಿದ ಸೂರ್ಯಕುಮಾರ್, 18ನೇ ಓವರ್ ಎಸೆದು ತಂಡದ ಗೆಲುವಿನ ಆಸೆಯನ್ನು ಮರು ಚಿಗುರೊಡಿಸಿದ ಬುಮ್ರಾ ಬೌಲಿಂಗ್ ಅನ್ನು ಮೋದಿ ಬಹುವಾಗಿ ಮೆಚ್ಚಿಕೊಂಡರು. ಅದರಲ್ಲೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಬುಮ್ರಾಗೆ ವಿಶೇಷ ಹೊಗಳಿಕೆ ಸಿಕ್ಕಿತು.