ಕರ್ನಾಟಕ

karnataka

ETV Bharat / sports

ಬಾರ್ಡರ್-ಗವಾಸ್ಕರ್ ಸರಣಿಗೆ ಆಯ್ಕೆಯಾಗದ ಬಗ್ಗೆ ಮೌನಮುರಿದ ಶಮಿ: ಕಮ್​ಬ್ಯಾಕ್​ ಬಗ್ಗೆ ಹೇಳಿದ್ದೇನು?

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗದ ಬೆನ್ನಲ್ಲೇ ವೇಗಿ ಮೊಹಮ್ಮದ್ ಶಮಿ ವಿಡಿಯೋ ಪೋಸ್ಟ್ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

mohammed shami
ಮೊಹಮ್ಮದ್ ಶಮಿ (IANS)

By ETV Bharat Karnataka Team

Published : 5 hours ago

ಹೈದರಾಬಾದ್​:ಮುಂಬರುವ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ತಂಡ ಪ್ರಕಟಗೊಂಡಿದ್ದು, ಟೀಂನಲ್ಲಿ ಸ್ಥಾನ ಪಡೆಯದ ಬಗ್ಗೆ ಸ್ಟಾರ್ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ ಮೌನ ಮುರಿದಿದ್ದಾರೆ.

2023ರ ನವೆಂಬರ್‌ನಲ್ಲಿ ತವರಿನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಪಾದದ ಗಾಯದ ಬಳಿಕ ಶಮಿ ಕ್ರಿಕೆಟ್​​ ಮೈದಾನದಿಂದ ಹೊರಗುಳಿದಿದ್ದಾರೆ. ಫೆಬ್ರವರಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಸಹ, ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ, ಕಾರ್ಯಕ್ರಮವೊಂದರಲ್ಲಿ ಗಾಯದ ಬಗ್ಗೆ ಪ್ರತಿಕ್ರಿಯಿಸಿದ್ದ ಶಮಿ, ಸದ್ಯ ನೋವು ಕಂಡುಬರುತ್ತಿಲ್ಲ ಎಂದು ಹೇಳಿದ್ದರು. ಇದಕ್ಕೂ ಕೆಲ ದಿನಗಳ ಹಿಂದೆ, ಭಾರತೀಯ ನಾಯಕ ರೋಹಿತ್ ಶರ್ಮಾ ಈ ತಿಂಗಳ ಆರಂಭದಲ್ಲಿ ಎನ್‌ಸಿಎಯಲ್ಲಿ ಅಭ್ಯಾಸದ ವೇಳೆ ಮೊಣಕಾಲು ಊದಿಕೊಂಡಿದೆ ಎಂಬುದನ್ನು ಬಹಿರಂಗಪಡಿಸಿದ್ದರು. ಬಹುಶಃ ಇದೇ ಕಾರಣದಿಂದ ಮುನ್ನೆಚ್ಚರಿಕೆಯಾಗಿ, ಬಿಸಿಸಿಐ ಅವರನ್ನು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಇನ್ನೂ ಪರಿಗಣಿಸಿಲ್ಲ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿಲ್ಲ ಎನ್ನಲಾಗುತ್ತಿದೆ.

ಬಿಸಿಸಿಐ, ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ಶಮಿ:ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡ ಪ್ರಕಟಗೊಂಡ ಒಂದು ದಿನದ ನಂತರ, ಶಮಿ ತಮ್ಮ ಚೇತರಿಕೆಯ ಪ್ರಕ್ರಿಯೆಯನ್ನು ತೋರ್ಪಡಿಸುವ ಮತ್ತೊಂದು ವಿಡಿಯೋ ಪೋಸ್ಟ್ ಅನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ, ಬಿಸಿಸಿಐ ಹಾಗೂ ಅಭಿಮಾನಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಲಭ್ಯರಾಗದ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಶೀಘ್ರವೇ ಹಿಂದಿರುಗುವ ಭರವಸೆ ನೀಡಿದ್ದಾರೆ.

ಶಮಿ ಪೋಸ್ಟ್‌ ಹೀಗಿದೆ:''ನಾನು ನನ್ನ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದೇನೆ ಮತ್ತು ದಿನದಿಂದ ದಿನಕ್ಕೆ ನನ್ನ ಬೌಲಿಂಗ್ ಫಿಟ್‌ನೆಸ್ ಸುಧಾರಿಸುತ್ತಿದೆ. ಪಂದ್ಯಕ್ಕೆ ತಯಾರಿ ಮತ್ತು ದೇಶಿ ರೆಡ್ ಬಾಲ್ ಕ್ರಿಕೆಟ್ ಆಡಲು ನಾನು ಕಠಿಣ ಪರಿಶ್ರಮ ಮುಂದುವರೆಸುತ್ತೇನೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಮತ್ತು ಬಿಸಿಸಿಐಗೆ ನಾನು ಕ್ಷಮೆಯಾಚಿಸುತ್ತೇನೆ. ಆದರೆ ಶೀಘ್ರದಲ್ಲೇ ನಾನು ರೆಡ್ ಬಾಲ್ ಕ್ರಿಕೆಟ್ ಆಡಲು ಸಿದ್ಧನಾಗಿದ್ದೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ'' ಎಂದು ಪೋಸ್ಟ್​ನಲ್ಲಿ ಬರೆದಿದ್ದಾರೆ.

ಕ್ರಿಕೆಟ್‌ಗೆ ಮರಳಲು ಶಮಿ ರೆಡಿ:ಇತ್ತೀಚೆಗಿನ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಟೀಮ್ ಇಂಡಿಯಾಗೆ ಎಂಟ್ರಿಕೊಡುವ ಮುನ್ನ ಶಮಿ ಬಂಗಾಳ ರಣಜಿ ಟ್ರೋಫಿ-2024ರಲ್ಲಿ ಆಡಲಿದ್ದಾರೆ.

ಈಗಾಗಲೇ, ಪುಣೆ ಟೆಸ್ಟ್ ಸೋಲಿನ ಬಳಿಕ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯನ್ನು ಕಳೆದುಕೊಂಡಿದೆ. 2013ರ ನಂತರ, 12 ವರ್ಷಗಳಲ್ಲಿ ತವರಿನಲ್ಲಿ ಮೊದಲ ಸರಣಿ ಸೋಲು ಎದುರಾಗಿದೆ. ಕಾಂಗರೂ ನಾಡಿನಲ್ಲಿನ ಬಾರ್ಡರ್-ಗವಾಸ್ಕರ್ ಸರಣಿಗೂ ಮುನ್ನ ಭಾರತ ತಂಡ ದೊಡ್ಡ ಆಘಾತ ಅನುಭವಿಸಿದೆ. ಅಲ್ಲದೆ, ಶಮಿ ಅನುಪಸ್ಥಿತಿಯಲ್ಲಿ ರೋಹಿತ್​ ಪಡೆ ಆಸೀಸ್​ ವಿರುದ್ಧ ಕಣಕ್ಕಿಳಿಯಬೇಕಿದೆ.

ಇದನ್ನೂ ಓದಿ:ಹಿರಿಯ ಆಟಗಾರರಿಗೆ ಗಂಭೀರ್​ ಖಡಕ್​ ವಾರ್ನಿಂಗ್​: ಇನ್ಮುಂದೆ ಎಲ್ಲರಿಗೂ ಪ್ರಾಕ್ಟಿಸ್​ ಸೆಷನ್‌ ಕಡ್ಡಾಯ ಎಂದ ಕೋಚ್​!

ABOUT THE AUTHOR

...view details