ಕರ್ನಾಟಕ

karnataka

ETV Bharat / sports

ಮುಂಬೈ ಮರೀನ್ ಡ್ರೈವ್​ನಲ್ಲಿ ಟಿ20 ವಿಶ್ವ ಚಾಂಪಿಯನ್ನರ ವಿಜಯೋತ್ಸವ ಪರೇಡ್ - Team India Victory Parade

ಮುಂಬೈನ ಮರೀನ್ ಡ್ರೈವ್​ನಿಂದ ವಾಂಖೆಡೆ ಸ್ಟೇಡಿಯಂವರೆಗೆ ವಿಶೇಷ ತೆರೆದ ಬಸ್​ನಲ್ಲಿ ಇಂದು​ ಟಿ20 ವಿಶ್ವ ಚಾಂಪಿಯನ್ನರ ವಿಜಯೋತ್ಸವ ಪರೇಡ್ ನಡೆಯಲಿದೆ.

By ETV Bharat Karnataka Team

Published : Jul 4, 2024, 4:50 PM IST

ಮುಂಬೈ: ಮರೀನ್ ಡ್ರೈವ್​ನಲ್ಲಿ ವಿಶ್ವ ಚಾಂಪಿಯನ್ನರ ವಿಜಯೋತ್ಸವ ಪರೇಡ್
ಮರೈನ್ ಡ್ರೈವ್​ನಲ್ಲಿ ವಿಶ್ವ ಚಾಂಪಿಯನ್ನರ ವಿಜಯೋತ್ಸವ ಪರೇಡ್ (IANS)

ಮುಂಬೈ(ಮಹಾರಾಷ್ಟ್ರ): ಟಿ20 ವಿಶ್ವಕಪ್‌ ವಿಜೇತ ಟೀಂ ಇಂಡಿಯಾ ಆಟಗಾರರ ವಿಜಯೋತ್ಸವ ಪರೇಡ್ ಮುಂಬೈನ ಮರೀನ್ ಡ್ರೈವ್​ನಲ್ಲಿ ಇಂದು ಸಂಜೆ ನಡೆಯಲಿದೆ. ಇದಕ್ಕಾಗಿ ವಿಶೇಷವಾದ ತೆರೆದ ಬಸ್​ ಸಿದ್ಧಪಡಿಸಲಾಗಿದೆ. ವಾಂಖೆಡೆ ಮೈದಾನದವರೆಗೆ 1 ಕಿ.ಮೀ ವಿಜಯೋತ್ಸವ ಮೆರವಣಿಗೆ ನಡೆಯಲಿದೆ. ಬಳಿಕ ಸ್ಟೇಡಿಯಂನಲ್ಲಿ ನಡೆಯುವ ಕಾರ್ಯಕ್ರಮಕ್ಕೂ ಅಭಿಮಾನಿಗಳಿಗೆ ಉಚಿತ ಪ್ರವೇಶಾವಕಾಶ ನೀಡಲಾಗಿದೆ.

ಜೂನ್​ 29ರಂದು ಬಾರ್ಬಡೋಸ್‌ನಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಭಾರತ ವಿಶ್ವ ಚಾಂಪಿಯನ್​ ಆಗಿತ್ತು. ಬೆರಿಲ್ ಚಂಡಮಾರುತದ ಹಿನ್ನೆಲೆಯಲ್ಲಿ ತವರಿಗೆ ಮರಳುವುದು ವಿಳಂಬವಾಗಿತ್ತು. ಇಂದು ಬೆಳಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಯಕ ರೋಹಿತ್​ ಶರ್ಮಾ ನೇತೃತ್ವದ ತಂಡ ಬಂದಿಳಿಯಿತು.

ಚಾಂಪಿಯನ್‌ ಕ್ರಿಕೆಟಿಗರು ಪ್ರಧಾನಿ ಮೋದಿ ನಿವಾಸಕ್ಕೆ ಭೇಟಿ ನೀಡಿದರು. ಪ್ರಧಾನಿಯೊಂದಿಗೆ ಔತಣಕೂಟವಾದ ಬಳಿಕ ಸಂತಸದ ಕ್ಷಣಗಳನ್ನು ಹಂಚಿಕೊಂಡಿತು. ಇದೀಗ ದೆಹಲಿಯಿಂದ ಮುಂಬೈಗೆ ತಂಡ ಆಗಮಿಸಿದೆ.

ದೇಶದ ವಾಣಿಜ್ಯ ರಾಜಧಾನಿ ಮುಂಬೈನ ಮರೀನ್ ಡ್ರೈವ್​ನಲ್ಲಿ ವಿಜಯೋತ್ಸವ ಪರೇಡ್ ಅನ್ನು ಬಿಸಿಸಿಐ ಹಮ್ಮಿಕೊಂಡಿದೆ. ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆ ಮೈದಾನದವರೆಗೆ ಮೆರವಣಿಗೆ ಜರುಗಲಿದೆ. ನಂತರ ಸ್ಟೇಡಿಯಂನಲ್ಲಿ ವಿಶ್ವಕಪ್​ ವಿಜೇತ ಆಟಗಾರರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ಈಗಾಗಲೇ ಸಾವಿರಾರು ಅಭಿಮಾನಿಗಳು ಮುಂಬೈ ರಸ್ತೆಗಳಲ್ಲಿ ಜಮಾವಣೆಗೊಂಡಿದ್ದಾರೆ.

ಮುಂಬೈ ಕ್ರಿಕೆಟ್ ಸಂಸ್ಥೆಯು ವಾಂಖೆಡೆ ಸ್ಟೇಡಿಯಂನಲ್ಲಿನ ಸಮಾರಂಭಕ್ಕೆ ಅಭಿಮಾನಿಗಳಿಗೆ ಉಚಿತ ಪ್ರವೇಶ ಒದಗಿಸಿದೆ. ಮತ್ತೊಂದೆಡೆ, ವಿಜಯೋತ್ಸವ ಪರೇಡ್ ಹಿನ್ನೆಲೆಯಲ್ಲಿ ಇಂದು ರಾತ್ರಿ 9ರವರೆಗೆ ವಿಶೇಷ ಸಂಚಾರ ವ್ಯವಸ್ಥೆಯನ್ನು ಮುಂಬೈ ಪೊಲೀಸರು ಮಾಡಿದ್ದಾರೆ. ಈ ಸಮಯದಲ್ಲಿ ಪ್ರಯಾಣಿಕರಿಗೆ ಪರ್ಯಾಯ ಮಾರ್ಗಗಳ ಬಗ್ಗೆಯೂ ಸೂಚಿಸಿದ್ದಾರೆ.

ಇದನ್ನೂ ಓದಿ:ಪ್ರಧಾನಿ ಮೋದಿ ಭೇಟಿ ಮಾಡಿದ ಟೀಂ ಇಂಡಿಯಾ : ವಿಡಿಯೋ ರಿಲೀಸ್​

ABOUT THE AUTHOR

...view details