ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾ ವಿಜಯೋತ್ಸವದಲ್ಲಿ ನೂಕುನುಗ್ಗಲು; ಹಲವರಿಗೆ ಗಾಯ - Fans Injured During Victory Parade

ಟೀಂ ಇಂಡಿಯಾ ವಿಜಯೋತ್ಸವ ಮೆರವಣಿಗೆಯಲ್ಲಿ ಅಭಿಮಾನಿಗಳು ಕಿಕ್ಕಿರಿದು ಜಮಾಯಿಸಿದ್ದು, ಜನಸಂದಣಿ ಮಧ್ಯೆ ಹಲವು ಅಭಿಮಾನಿಗಳು ಗಾಯಗೊಂಡಿದ್ದರೆ. ಓರ್ವ ವ್ಯಕ್ತಿ ಉಸಿರುಗಟ್ಟಿ ಪ್ರಜ್ಞೆತಪ್ಪಿ ಬಿದ್ದಿರುವ ಕುರಿತೂ ವರದಿಯಾಗಿದೆ.

By ETV Bharat Karnataka Team

Published : Jul 5, 2024, 10:14 AM IST

Victory parade of World Cup winning team India
ಗುರುವಾರ ರಾತ್ರಿ ಮುಂಬೈನಲ್ಲಿ ನಡೆದ ಟಿ20 ವಿಶ್ವಕಪ್​ ವಿಜೇತ ಟೀಂ ಇಂಡಿಯಾ ವಿಜಯೋತ್ಸವ (ANI)

ಮುಂಬೈ(ಮಹಾರಾಷ್ಟ್ರ): ಟಿ-20 ವಿಶ್ವಕಪ್​ ಗೆದ್ದ ಟೀಂ ಇಂಡಿಯಾದ ಭವ್ಯ ಮೆರವಣಿಗೆ ಗುರುವಾರ ಸಂಜೆ ಮುಂಬೈ ನಗರಿಯ ಅರಬ್ಬೀ ಸಮುದ್ರ ತೀರದ ಮರೀನ್​ ಡ್ರೈವ್​ನಲ್ಲಿ ಅದ್ಧೂರಿಯಾಗಿ ನಡೆಯಿತು. ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಹಲವರು ಗಾಯಗೊಂಡಿದ್ದಾರೆ. ಕೆಲವರು ಉಸಿರಾಟದ ತೊಂದರೆ ಅನುಭವಿಸಿದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿ ರವಿ ಸೋಲಂಕಿ ಎಂಬವರು ಮಾತನಾಡಿ, "ನಾನು ಕಚೇರಿಯಿಂದ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದೆ. ಈ ವೇಳೆ ಭಾರತ ಕ್ರಿಕೆಟ್​ ತಂಡದ ಆಟಗಾರರು ಸಂಜೆ 5-6 ಗಂಟೆಯ ವೇಳೆಗೆ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಯಿತು. ಆದರೆ, ನಿಗದಿತ ಸಮಯಕ್ಕೆ ಮೆರವಣಿಗೆ ಆರಂಭವಾಗಲಿಲ್ಲ. ಜನಸಂದಣಿ ಮಾತ್ರ ಹೆಚ್ಚುತ್ತಲೇ ಇತ್ತು. ದೊಡ್ಡ ಸಂಖ್ಯೆಯಲ್ಲಿ ಪೊಲೀಸರಿದ್ದರೂ ಪರಿಸ್ಥಿತಿಯನ್ನು ನಿಭಾಯಿಸುತ್ತಿರಲಿಲ್ಲ. ನೂಕುನುಗ್ಗಲಿನಲ್ಲಿ ಒಬ್ಬರ ಮೇಲೊಬ್ಬರು ಬೀಳುತ್ತಿದ್ದರು. ಜನರು ಜೋರಾಗಿ ಕಿರುಚುತ್ತಿದ್ದರು" ಎಂದರು.

ವಿಜಯೋತ್ಸವ ಮೆರವಣಿಗೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಸಂತ್ರಸ್ತ ರಿಷಬ್​ ಮಹೇಶ್​ ಯಾದವ್​ ಮಾತನಾಡಿ, "ಜನರ ಮಧ್ಯೆ ಸಿಲುಕಿ ನನಗೆ ಉಸಿರುಗಟ್ಟಿದಂತಾಯಿತು. ನಾನು ಪ್ರಜ್ಞೆ ಕಳೆದುಕೊಂಡು ಬಿದ್ದೆ. ನನ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆ ಪಡೆದು ಈಗ ಚೇತರಿಸಿಕೊಂಡಿದ್ದೇನೆ. ಅಗತ್ಯಕ್ಕಿಂತ ಹೆಚ್ಚು ಜನಸಂದಣಿ ಇತ್ತು. ನಿರ್ವಹಣೆ ಸರಿಯಾಗಿರಲಿಲ್ಲ. ಪೊಲೀಸರೂ ಎಚ್ಚೆತ್ತುಕೊಂಡಿರಲಿಲ್ಲ. ಹಾಗಾಗಿ ಸಮಸ್ಯೆಯಾಯಿತು" ಎಂದು ವಿವರಿಸಿದರು.

ರೋಹಿತ್​ ಶರ್ಮಾ ನಾಯಕತ್ವದ ಭಾರತೀಯ ಕ್ರಿಕೆಟ್​ ತಂಡ ಮರೀನ್​ ಡ್ರೈವ್‌ನಿಂದ ತೆರೆದ ಬಸ್ಸಿನ ಮೇಲ್ಛಾವಣಿಯಲ್ಲಿ ನಿಂತು ಭವ್ಯ ಮೆರವಣಿಗೆಯಲ್ಲಿ ಸಾಗಿದರು. ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ಲಕ್ಷಾಂತರ ಕ್ರಿಕೆಟ್‌ ಅಭಿಮಾನಿಗಳು ನೆರೆದಿದ್ದರು. ಮೆರವಣಿಗೆಯುದ್ದಕ್ಕೂ ಆಟಗಾರರು ಟ್ರೋಫಿಯನ್ನು ಎತ್ತಿ ಹಿಡಿದು ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಅರ್ಪಿಸುತ್ತಿದ್ದರು.

ಮರೀನ್​ ಡ್ರೈವ್​ನಲ್ಲಿ ಆರಂಭವಾದ ವಿಜಯೋತ್ಸವ ವಾಂಖೆಡೆ ಕ್ರೀಡಾಂಗಣದಲ್ಲಿ ಕೊನೆಗೊಂಡಿತು. ಕ್ರೀಡಾಂಗಣದಲ್ಲಿ ಇಡೀ ತಂಡವನ್ನು ಸನ್ಮಾನಿಸಲಾಯಿತು. ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) ಪದಾಧಿಕಾರಿಗಳು ವಿಶ್ವಕಪ್‌ ಗೆದ್ದ ತಂಡಕ್ಕೆ 125 ಕೋಟಿ ರೂಪಾಯಿಗಳ ಚೆಕ್​ ವಿತರಿಸಿದರು.

ಇದನ್ನೂ ಓದಿ:ಮುಂಬೈನಲ್ಲಿ ವಿಶ್ವಕಪ್​ ವಿಜೇತ ಭಾರತಕ್ಕೆ 'ಅಭಿಮಾನಿ ಸಾಗರ'ದ ಸ್ವಾಗತ; ಕ್ರಿಕೆಟಿಗರ ಭವ್ಯ ಮೆರವಣಿಗೆ! - Team India Victory Parade

ABOUT THE AUTHOR

...view details