ಕರ್ನಾಟಕ

karnataka

ETV Bharat / international

ಹಮಾಸ್​ ನಾಯಕರ ಮಧ್ಯೆ ಭಿನ್ನಮತ ಉಲ್ಬಣ: ಶಾಂತಿ ಮಾತುಕತೆಯಿಂದ ಹಿಂದೆ ಸರಿದ ಇಸ್ರೇಲ್

ಕದನವಿರಾಮದ ಷರತ್ತುಗಳ ವಿಷಯದಲ್ಲಿ ಹಮಾಸ್​ನ ಇಬ್ಬರು ಉನ್ನತ ನಾಯಕರಾದ ಸಿನ್ವರ್ ಮತ್ತು ಹನಿಯೆಹ್ ಮಧ್ಯೆ ಭಿನ್ನಮತ ಉಂಟಾಗಿದೆ ಎಂದು ಇಸ್ರೇಲ್ ಮೂಲಗಳು ಹೇಳಿವೆ.

By ETV Bharat Karnataka Team

Published : Feb 15, 2024, 2:23 PM IST

Rift widens between top Hamas leaders Yahya Sinwar, Ismael Haniyeh
Rift widens between top Hamas leaders Yahya Sinwar, Ismael Haniyeh

ಟೆಲ್ ಅವೀವ್ : ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಮಾತುಕತೆಗಳು ಸಕಾರಾತ್ಮಕವಾಗಿ ಪ್ರಗತಿಯಾಗದಿರುವ ನಡುವೆ, ಹಮಾಸ್ ನ ಉನ್ನತ ನಾಯಕತ್ವದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಇಸ್ರೇಲ್ ಮಿಲಿಟರಿ ಇಂಟೆಲಿಜೆನ್ಸ್ ಮತ್ತು ಶಿನ್ ಬೆಟ್-ಇಸ್ರೇಲ್ ಗುಪ್ತಚರ ಸಂಸ್ಥೆಯ ಮೂಲಗಳ ಪ್ರಕಾರ, ಹಮಾಸ್​ನ ಇಬ್ಬರು ಉನ್ನತ ನಾಯಕರಾದ ಯಾಹ್ಯಾ ಸಿನ್ವರ್ ಮತ್ತು ಇಸ್ಮಾಯೆಲ್ ಹನಿಯೆಹ್ ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತಿಲ್ಲ.

ಹಮಾಸ್ ನಾಯಕತ್ವದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ ಎಂಬ ಗುಪ್ತಚರ ಮಾಹಿತಿಯ ನಂತರ ಇಸ್ರೇಲ್ ಕದನ ವಿರಾಮ ಮಾತುಕತೆಯನ್ನು ಹಠಾತ್ತನೆ ರದ್ದುಗೊಳಿಸಿದೆ ಮತ್ತು ನಾಯಕರ ಮಧ್ಯದ ಭಿನ್ನಾಭಿಪ್ರಾಯಗಳು ವಿಕೋಪಕ್ಕೆ ಹೋದ ನಂತರ ಶಾಂತಿ ಮಾತುಕತೆಗಳಲ್ಲಿ ಲಾಭ ಪಡೆಯಲು ಇಸ್ರೇಲ್ ಅವಕಾಶಕ್ಕಾಗಿ ಕಾಯುತ್ತಿದೆ.

ಇಸ್ರೇಲ್ ಗುಪ್ತಚರ ಮೂಲಗಳ ಪ್ರಕಾರ, ಅಕ್ಟೋಬರ್ 7 ರ ಹತ್ಯಾಕಾಂಡದ ಮಾಸ್ಟರ್​ಮೈಂಡ್ ಎಂದು ನಂಬಲಾದ ಮತ್ತು ಗಾಜಾದಲ್ಲಿ ತಲೆಮರೆಸಿಕೊಂಡಿರುವ ಯಾಹ್ಯಾ ಸಿನ್ವರ್ ಆರು ವಾರಗಳ ಕದನ ವಿರಾಮ ಬಯಸುತ್ತಿದ್ದಾನೆ. ಆದರೆ, ಹಮಾಸ್​ನ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್​ ಶಾಶ್ವತ ಕದನ ವಿರಾಮ ಅಥವಾ ಇಸ್ರೇಲ್ ಪಡೆಗಳು ಶಾಶ್ವತವಾಗಿ ಗಾಜಾ ಪಟ್ಟಿಯಿಂದ ಹಿಂದೆ ಸರಿಯಬೇಕು ಎಂಬ ಬೇಡಿಕೆ ಇಟ್ಟಿದ್ದಾನೆ.

ಏತನ್ಮಧ್ಯೆ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಸಿನ್ವರ್ ಅವರನ್ನು ಕೊಲ್ಲಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್​ ಸಾರ್ವಜನಿಕವಾಗಿಯೇ ಘೋಷಿಸಿದ್ದಾರೆ. ಮಂಗಳವಾರ ರಾತ್ರಿ ಪತ್ರಿಕಾ ಹೇಳಿಕೆ ಹೊರಡಿಸಿದ ಐಡಿಎಫ್ ವಕ್ತಾರ ರಿಯಲ್ ಅಡ್ಮಿರಲ್ ಡೇನಿಯಲ್ ಹಗರಿ, ಐಡಿಎಫ್ ಸಿನ್ವರ್ ಅವರನ್ನು ಪತ್ತೆ ಮಾಡುವ ಸನಿಹದಲ್ಲಿದೆ ಮತ್ತು ಅವರನ್ನು ಜೀವಂತವಾಗಿ ಸೆರೆಹಿಡಿಯಬಹುದು ಅಥವಾ ಸಾಯಿಸಬಹುದು ಎಂದು ಬಹಿರಂಗವಾಗಿ ಹೇಳಿದ್ದರು.

ಸಿನ್ವರ್ ಗಾಜಾದಲ್ಲಿ ತನ್ನ ನೆಲೆಯನ್ನು ಒಂದು ಸುರಂಗ ಜಾಲದಿಂದ ಇನ್ನೊಂದಕ್ಕೆ ಸ್ಥಳಾಂತರಿಸುತ್ತ ತಲೆಮರೆಸಿಕೊಂಡಿದ್ದಾನೆ. ಹಮಾಸ್​ನ ರಾಜಕೀಯ ಮುಖ್ಯಸ್ಥ ಹನಿಯೆಹ್ ಕತಾರ್ ರಾಜಧಾನಿ ದೋಹಾದಲ್ಲಿ ಆರಾಮದಾಯಕ ಜೀವನ ಕಳೆಯುತ್ತಿದ್ದಾನೆ.

ಕೈರೋದಲ್ಲಿ ಇತ್ತೀಚೆಗೆ ನಡೆದ ಕದನ ವಿರಾಮ ಮಾತುಕತೆಯಲ್ಲಿ, ಹನಿಯೆಹ್ ತಾವೇ ಎಲ್ಲ ನಿರ್ಧಾರಗಳನ್ನು ಕೈಗೊಂಡು ಶಾಂತಿ ಮಾತುಕತೆಗಳನ್ನು ವಿಫಲಗೊಳಿಸಿದರು. ಮೂಲಗಳ ಪ್ರಕಾರ, ಇದು ಸಿನ್ವರ್ ಮತ್ತು ಅವರ ಸಹೋದರ ಮೊಹಮ್ಮದ್ ಸಿನ್ವರ್ ಅವರನ್ನು ಕೆರಳಿಸಿದೆ ಎಂದು ಇಸ್ರೇಲ್ ಗುಪ್ತಚರ ಇಲಾಖೆ ಮಾಹಿತಿ ಪಡೆದುಕೊಂಡಿದೆ. ಸಿನ್ವರ್ ಮತ್ತು ಹನಿಯೆಹ್ ತಮ್ಮ ಮಧ್ಯದ ಸಂಘರ್ಷವನ್ನು ಮುಂದುವರಿಸಿದರೆ ಅಮೆರಿಕ, ಈಜಿಪ್ಟ್ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ಶಾಂತಿ ಮಾತುಕತೆಗಳು ರದ್ದಾಗಲಿವೆ.

ಇದನ್ನೂ ಓದಿ : ಪಾಕಿಸ್ತಾನ ಭಾರತಕ್ಕೆ ದೊಡ್ಡ ಆಸ್ತಿ, ಅವರ ಆತಿಥ್ಯ ದೊಡ್ಡದು: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್

ABOUT THE AUTHOR

...view details