ಕರ್ನಾಟಕ

karnataka

By ETV Bharat Karnataka Team

Published : Mar 11, 2024, 4:13 PM IST

ETV Bharat / international

ಇಂಡೋನೇಷ್ಯಾದಲ್ಲಿ ಪ್ರವಾಹ: 26 ಸಾವು, 11 ಜನ ಕಣ್ಮರೆ

ಇಂಡೋನೇಷ್ಯಾದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಪ್ರವಾಹಕ್ಕೆ 26 ಜನ ಬಲಿಯಾಗಿದ್ದಾರೆ.

At least 26 dead and 11 missing after flash floods and landslides on Indonesia's Sumatra island
At least 26 dead and 11 missing after flash floods and landslides on Indonesia's Sumatra island

ಪಡಾಂಗ್ : ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂಕುಸಿತದ ನಂತರ ನೀರಿನ ಮಟ್ಟ ಕಡಿಮೆಯಾಗಲು ಆರಂಭಿಸಿದೆ. ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆಯೇ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಹಲವಾರು ಮೃತರ ಶವಗಳನ್ನು ಹೊರತೆಗೆದಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಮಾನ್ಸೂನ್ ಮಳೆ ಮತ್ತು ಉಕ್ಕಿ ಹರಿಯುತ್ತಿರುವ ನದಿಗಳು ಗುರುವಾರದಿಂದ ಪಶ್ಚಿಮ ಸುಮಾತ್ರಾ ಪ್ರಾಂತ್ಯದ ಒಂಬತ್ತು ಜಿಲ್ಲೆಗಳು ಮತ್ತು ನಗರಗಳನ್ನು ಮುಳುಗಿಸಿವೆ. ಶುಕ್ರವಾರ ತಡರಾತ್ರಿ ಪೆಸಿಸಿರ್ ಸೆಲಾಟನ್ ಜಿಲ್ಲೆಯಲ್ಲಿ ನದಿಯು ಬೆಟ್ಟಗಾಡಿನ ಗ್ರಾಮಗಳ ಮೂಲಕ ಹರಿದು ಅವಾಂತರ ಸೃಷ್ಟಿಸಿತು.

ವಿದ್ಯುತ್ ಕಡಿತ, ಹಾನಿಗೊಳಗಾದ ಸೇತುವೆಗಳು, ಮಣ್ಣು ಮತ್ತು ಅವಶೇಷಗಳಿಂದ ಮುಚ್ಚಲ್ಪಟ್ಟ ರಸ್ತೆಗಳ ಕಾರಣದಿಂದ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಪೆಸಿಸಿರ್ ಸೆಲಾಟನ್ ಮತ್ತು ಅದರ ನೆರೆಯ ಪಡಂಗ್ ಪರಿಯಾಮನ್ ಜಿಲ್ಲೆಯ ಹೆಚ್ಚು ಹಾನಿಗೊಳಗಾದ ಹಳ್ಳಿಗಳಲ್ಲಿ ಅತಿ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಈ ಪ್ರದೇಶದಲ್ಲಿ ಪ್ರವಾಹದಿಂದ ಈವರೆಗೆ ಒಟ್ಟಾರೆ 26 ಜನ ಮೃತಪಟ್ಟಿದ್ದಾರೆ ಎಂದು ಏಜೆನ್ಸಿಯ ವಕ್ತಾರ ಅಬ್ದುಲ್ ಮುಹಾರಿ ತಿಳಿಸಿದ್ದಾರೆ.

ಭೂಕುಸಿತದಿಂದಾಗಿ ಕನಿಷ್ಠ 14 ಮನೆಗಳು ಹೂತುಹೋಗಿವೆ ಎಂದು ಅವರು ಹೇಳಿದರು. ಕನಿಷ್ಠ ಇಬ್ಬರು ಗ್ರಾಮಸ್ಥರು ಗಾಯಗೊಂಡಿದ್ದಾರೆ ಮತ್ತು ಕಾಣೆಯಾದ 11 ಜನರಿಗಾಗಿ ರಕ್ಷಣಾ ಸಿಬ್ಬಂದಿ ಇನ್ನೂ ಶೋಧ ನಡೆಸುತ್ತಿದ್ದಾರೆ. ಪಶ್ಚಿಮ ಸುಮಾತ್ರಾ ಪ್ರಾಂತ್ಯದಲ್ಲಿ ಮಾನ್ಸೂನ್ ಮಳೆಯಿಂದಾಗಿ 37,000 ಕ್ಕೂ ಹೆಚ್ಚು ಮನೆಗಳು ಮತ್ತು ಕಟ್ಟಡಗಳು ಮುಳುಗಿವೆ ಎಂದು ಮುಹಾರಿ ಹೇಳಿದರು. ಇಲ್ಲಿ ಪ್ರವಾಹದಲ್ಲಿ ಕನಿಷ್ಠ ಮೂರು ಮನೆಗಳು ಕೊಚ್ಚಿಹೋಗಿವೆ ಮತ್ತು 666 ಜನ ಬಾಧಿತರಾಗಿದ್ದಾರೆ.

ಪ್ರವಾಹದಿಂದಾಗಿ 26 ಸೇತುವೆಗಳು, 45 ಮಸೀದಿಗಳು ಮತ್ತು 25 ಶಾಲೆಗಳಿಗೆ ಹಾನಿಯಾಗಿದೆ. 13 ರಸ್ತೆಗಳು, ಎರಡು ನೀರಾವರಿ ವ್ಯವಸ್ಥೆ ಘಟಕಗಳು ನಾಶವಾಗಿವೆ. 113 ಹೆಕ್ಟೇರ್ (279 ಎಕರೆ) ಭತ್ತದ ಗದ್ದೆಗಳು ಮತ್ತು 300 ಚದರ ಮೀಟರ್ (3,220 ಚದರ ಅಡಿ) ತೋಟ ಪ್ರವಾಹದಿಂದ ನಾಶವಾಗಿವೆ. 17,000 ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ದ್ವೀಪಸಮೂಹ ರಾಷ್ಟ್ರವಾದ ಇಂಡೋನೇಷ್ಯಾದಲ್ಲಿ ಭಾರಿ ಮಳೆಯಿಂದ ಆಗಾಗ ಭೂಕುಸಿತ ಮತ್ತು ಹಠಾತ್ ಪ್ರವಾಹ ಸಂಭವಿಸುತ್ತಿರುತ್ತವೆ. ಇಂಡೋನೆಷ್ಯಾದಲ್ಲಿ ಲಕ್ಷಾಂತರ ಜನರು ಪರ್ವತ ಪ್ರದೇಶಗಳಲ್ಲಿ ಅಥವಾ ಪ್ರವಾಹ ಸಂಭವನೀಯ ಪ್ರದೇಶಗಳ ಬಳಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ : 3 ದಿನಗಳ ಮಾರಿಷಸ್ ಅಧಿಕೃತ ಭೇಟಿಗೆ ತೆರಳಿದ ರಾಷ್ಟ್ರಪತಿ ಮುರ್ಮು

ABOUT THE AUTHOR

...view details