ಕರ್ನಾಟಕ

karnataka

By ETV Bharat Karnataka Team

Published : Aug 29, 2024, 3:25 PM IST

ETV Bharat / international

ಹಮಾಸ್​ ತಕ್ಷಣ ಬೇಷರತ್ತಾಗಿ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿ: ಭಾರತದ ಆಗ್ರಹ - release Israeli hostages

ಹಮಾಸ್​ ತಾನು ಹಿಡಿದಿಟ್ಟುಕೊಂಡಿರುವ ಇಸ್ರೇಲಿ ಒತ್ತೆಯಾಳುಗಳನ್ನು ತಕ್ಷಣವೇ ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ಭಾರತ ಒತ್ತಾಯಿಸಿದೆ.

17 ನೇ ಭಾರತ-ಇಸ್ರೇಲ್ ವಿದೇಶಾಂಗ ಕಚೇರಿ ಸಮಾಲೋಚನೆ ಸಭೆ
17 ನೇ ಭಾರತ-ಇಸ್ರೇಲ್ ವಿದೇಶಾಂಗ ಕಚೇರಿ ಸಮಾಲೋಚನೆ ಸಭೆ (IANS)

ನವದೆಹಲಿ: ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ನಡೆದ ಭಯೋತ್ಪಾದಕ ದಾಳಿಯ ವಿರುದ್ಧ ಭಾರತ ಬುಧವಾರ ತನ್ನ ಬಲವಾದ ಮತ್ತು ನಿಸ್ಸಂದಿಗ್ಧ ಖಂಡನೆಯನ್ನು ಪುನರುಚ್ಚರಿಸಿದ್ದು, ಹಮಾಸ್​ ಹಿಡಿದಿಟ್ಟುಕೊಂಡಿರುವ ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ತಕ್ಷಣ ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಮತ್ತು ಕದನ ವಿರಾಮಕ್ಕೆ ಮುಂದಾಗುವಂತೆ ಒತ್ತಾಯಿಸಿದೆ.

ನವದೆಹಲಿಯಲ್ಲಿ ನಡೆದ 17 ನೇ ಭಾರತ-ಇಸ್ರೇಲ್ ವಿದೇಶಾಂಗ ಕಚೇರಿ ಸಮಾಲೋಚನೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಇಸ್ರೇಲ್-ಹಮಾಸ್​ ಯುದ್ಧದ ಬಗ್ಗೆ ಭಾರತದ ನಿಲುವನ್ನು ಪುನರುಚ್ಚರಿಸಿದರು. ಸಭೆಯಲ್ಲಿ ಎರಡೂ ದೇಶಗಳು ತಮ್ಮ ಕಾರ್ಯತಂತ್ರದ ಪಾಲುದಾರಿಕೆಯ ಬಲವನ್ನು ಶ್ಲಾಘಿಸಿದವು.

"ಎರಡೂ ದೇಶಗಳು ದ್ವಿಪಕ್ಷೀಯ ಹಿತಾಸಕ್ತಿಯ ವಿವಿಧ ವಿಷಯಗಳ ಬಗ್ಗೆ ಆಳವಾಗಿ ಚರ್ಚಿಸಿದವು ಮತ್ತು ದ್ವಿಪಕ್ಷೀಯ ಪ್ರಯತ್ನಗಳ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸಿದವು. ಪಶ್ಚಿಮ ಏಷ್ಯಾ ಮತ್ತು ಇಂಡೋ-ಪೆಸಿಫಿಕ್​ನಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ಎರಡೂ ದೇಶಗಳು ಅಭಿಪ್ರಾಯಗಳನ್ನು ಹಂಚಿಕೊಂಡವು" ಎಂದು ಮಾತುಕತೆಯ ನಂತರ ವಿದೇಶಾಂಗ ಸಚಿವಾಲಯ (ಎಂಇಎ) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ವಿವರಿಸಲಾಗಿದೆ.

"ಇಸ್ರೇಲ್ ಮೇಲೆ ಅಕ್ಟೋಬರ್ 7 ರಂದು ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಭಾರತದ ಬಲವಾದ ಮತ್ತು ನಿಸ್ಸಂದಿಗ್ಧ ಖಂಡನೆಯನ್ನು ಪುನರುಚ್ಚರಿಸಿದ ವಿದೇಶಾಂಗ ಕಾರ್ಯದರ್ಶಿ, ಎಲ್ಲಾ ಒತ್ತೆಯಾಳುಗಳನ್ನು ಬೇಷರತ್ತಾಗಿ ಮತ್ತು ತಕ್ಷಣ ಬಿಡುಗಡೆ ಮಾಡುವಂತೆ, ಕದನ ವಿರಾಮ, ಮಾನವೀಯ ಸಹಾಯವನ್ನು ಮುಂದುವರಿಸುವ ಅಗತ್ಯ ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನಿಗೆ ಬದ್ಧರಾಗಿರಲು ಕರೆ ನೀಡಿದರು. ಅದೇ ಸಮಯದಲ್ಲಿ, ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಯುದ್ಧ ಉದ್ವಿಗ್ನತೆಯ ಬಗ್ಗೆ ಭಾರತದ ಕಳವಳವನ್ನು ಅವರು ಹಂಚಿಕೊಂಡರು ಮತ್ತು ಸಂಯಮ, ಸಂವಾದ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಿದರು" ಎಂದು ಅದು ಹೇಳಿದೆ.

ಇಂದಿನ ಚರ್ಚೆಗಳು ಫಲಪ್ರದವಾಗಿವೆ ಎಂದು ಇಸ್ರೇಲ್ ಹೇಳಿದ್ದು, ಸವಾಲಿನ ಸಮಯದಲ್ಲಿ ಭಾರತದ ಸ್ನೇಹಕ್ಕಾಗಿ ಧನ್ಯವಾದ ಅರ್ಪಿಸಿದೆ.

"ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳಲ್ಲಿನ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಎರಡೂ ದೇಶಗಳು ಸಮಾನ ದೃಷ್ಟಿಕೋನ ಹೊಂದಿರುವುದನ್ನು ನೋಡಿ ತೃಪ್ತಿಯಾಗಿದೆ" ಎಂದು ಭಾರತದಲ್ಲಿನ ಇಸ್ರೇಲ್​ನ ಹೊಸ ರಾಯಭಾರಿ ರುವೆನ್ ಅಜರ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸುರಕ್ಷಿತ ಮತ್ತು ಮಾನ್ಯತೆ ಪಡೆದ ಗಡಿಗಳೊಂದಿಗೆ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ಪ್ಯಾಲೆಸ್ಟೈನ್ ದೇಶವನ್ನು ಸ್ಥಾಪಿಸುವ ಮತ್ತು ಆ ರಾಷ್ಟ್ರವು ಪಕ್ಕದ ಇಸ್ರೇಲ್​ನೊಂದಿಗೆ ಶಾಂತಿಯಿಂದ ವಾಸಿಸುವ ದ್ವಿರಾಷ್ಟ್ರ ನೀತಿಗೆ ಭಾರತ ಹಿಂದಿನಿಂದಲೂ ಬೆಂಬಲ ನೀಡಿದೆ.

ಇದನ್ನೂ ಓದಿ : ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸಲು ಶಾಂತಿದೂತನಾಗಲಿದೆಯಾ ಭಾರತ? ವಿಶ್ಲೇಷಣೆ - Russia Ukraine Peace Talks

ABOUT THE AUTHOR

...view details