ಕರ್ನಾಟಕ

karnataka

ETV Bharat / international

ಸುಡಾನ್​ನಲ್ಲಿ 18 ತಿಂಗಳಿಂದ ಸಂಘರ್ಷ: 30 ಲಕ್ಷ ಜನರ ಪಲಾಯನ, ಕಾಲರಾಗೆ 700 ಮಂದಿ ಬಲಿ

ಸುಡಾನ್​ನಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಸುಮಾರು 30 ಲಕ್ಷ ಜನರು ದೇಶದಿಂದ ಪಲಾಯನ ಮಾಡಿದ್ದಾರೆ.

By IANS

Published : 4 hours ago

ಸುಡಾನ್ ನಿರಾಶ್ರಿತರು
ಸುಡಾನ್ ನಿರಾಶ್ರಿತರು (IANS)

ವಿಶ್ವಸಂಸ್ಥೆ: ಸುಡಾನ್​ನಲ್ಲಿ ಕಳೆದ 18 ತಿಂಗಳಿಂದ ನಡೆಯುತ್ತಿರುವ ಸಂಘರ್ಷದಿಂದಾಗಿ ಸುಮಾರು 30 ಲಕ್ಷ ನಿರಾಶ್ರಿತರು ಹಾಗೂ ದೇಶಕ್ಕೆ ಮರಳಿ ಬಂದಿದ್ದವರು ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ತಿಳಿಸಿದೆ. ಜೀವದ ಸುರಕ್ಷತೆಯನ್ನು ಹುಡುಕಿಕೊಂಡು ಇವರಲ್ಲಿ ಬಹುತೇಕರು ಮುಖ್ಯವಾಗಿ ಮಧ್ಯ ಆಫ್ರಿಕನ್ ಗಣರಾಜ್ಯ, ಚಾಡ್, ಈಜಿಪ್ಟ್, ಇಥಿಯೋಪಿಯಾ, ಲಿಬಿಯಾ, ದಕ್ಷಿಣ ಸುಡಾನ್ ಮತ್ತು ಉಗಾಂಡಾಕ್ಕೆ ತೆರಳಿದ್ದಾರೆ.

ಸುಡಾನ್​ನ ಹಲವಾರು ಭಾಗಗಳಲ್ಲಿ ಸಂಘರ್ಷದಿಂದ ಜನರು ಸ್ಥಳಾಂತರಗೊಳ್ಳುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಚ್ಎ) ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮುಂದುವರೆದ ಸಂಘರ್ಷ:ಮಳೆಗಾಲ ಮುಗಿಯುತ್ತಿರುವ ಈ ಹೊತ್ತಿನಲ್ಲಿ ಸಂಘರ್ಷ ಮುಂದುವರೆದಿದ್ದು, ಅಕ್ಟೋಬರ್ ಮೊದಲಾರ್ಧದಲ್ಲಿ ಸುಡಾನ್ ಒಳಗೆ ಸುಮಾರು 40,000 ಜನರು ಹೊಸದಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಅಂದಾಜಿಸಿದೆ. ಅಲ್ಲಿಗೆ ಕಳೆದ ವರ್ಷ ಏಪ್ರಿಲ್​ನಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಸುಡಾನ್​ನಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡವರ ಒಟ್ಟು ಸಂಖ್ಯೆ ಸುಮಾರು 8.2 ಮಿಲಿಯನ್​ಗೆ ಏರಿಕೆಯಾಗಿದೆ.

ಪಶ್ಚಿಮ ಡಾರ್ಫುರ್​ನಲ್ಲಿ, ಕಳೆದ ವಾರದ ಆರಂಭದಲ್ಲಿ ಜಬಲ್ ಮೂನ್​ನ ಸೆಲಿಯಾ ಪಟ್ಟಣ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಂದಾಜು 27,500 ಜನರು ಅಭದ್ರತೆ ಮತ್ತು ದಾಳಿಗಳ ಕಾರಣದಿಂದ ಪಲಾಯನ ಮಾಡಿದ್ದಾರೆ ಎಂದು ಐಒಎಂ ವರದಿ ಮಾಡಿದೆ.

ಪೂರ್ವ ಚಾಡ್​​ಗೆ 25 ಸಾವಿರ ಜನರ ಪಲಾಯನ:ಡಾರ್ಫುರ್​ನಲ್ಲಿ ತೀವ್ರಗೊಳ್ಳುತ್ತಿರುವ ಸಂಘರ್ಷದಿಂದಾಗಿ, ಅಕ್ಟೋಬರ್ ಮೊದಲ ವಾರದಲ್ಲಿ ಸುಮಾರು 25,000 ಜನರು ಪೂರ್ವ ಚಾಡ್​ಗೆ ತೆರಳಿದ್ದಾರೆ. ಇದು 2024 ರಲ್ಲಿ ಪೂರ್ವ ಚಾಡ್​ಗೆ ಒಂದೇ ವಾರದಲ್ಲಿ ಅತಿ ಹೆಚ್ಚಿನ ವಲಸೆಯಾಗಿದೆ. ಚಾಡ್​ನಲ್ಲಿ ಸುಮಾರು 6,81,944 ಸುಡಾನ್ ನಿರಾಶ್ರಿತರು ಸದ್ಯ ಆಶ್ರಯ ಪಡೆದುಕೊಂಡಿದ್ದಾರೆ. ಬೇರೆ ಯಾವುದೇ ದೇಶಕ್ಕಿಂತ ಚಾಡ್​ನಲ್ಲಿ ಅತ್ಯಧಿಕ ಸುಡಾನ್ ನಿರಾಶ್ರಿತರಿದ್ದಾರೆ ಎಂದು ಒಸಿಎಚ್ಎ ತಿಳಿಸಿದೆ.

ಸಂಘರ್ಷ ನಿಲ್ಲಿಸುವಂತೆ ಒಸಿಎಚ್​ಎ ಮನವಿ:ನಾಗರಿಕರ ರಕ್ಷಣೆ ಮತ್ತು ಪರಿಹಾರ ಸಾಮಗ್ರಿಗಳ ಪೂರೈಕೆಗೆ ಅನುಕೂಲ ಮಾಡಿಕೊಡಲು ಸಂಘರ್ಷವನ್ನು ನಿಲ್ಲಿಸಬೇಕೆಂದು ಹೋರಾಟ ನಿರತ ಎಲ್ಲ ಗುಂಪುಗಳಿಗೆ ಒಸಿಎಚ್ಎ ಮನವಿ ಮಾಡಿದೆ. ಮಳೆ ಕಡಿಮೆಯಾಗುತ್ತಿರುವುದರಿಂದ ಮತ್ತು ಬಹುತೇಕ ರಸ್ತೆಗಳು ಈಗ ಸಂಚಾರಕ್ಕೆ ಯೋಗ್ಯವಾಗಿರುವುದರಿಂದ ಅವಶ್ಯವಿರುವ ಸ್ಥಳಗಳಿಗೆ ಅಗತ್ಯ ಸಾಮಗ್ರಿಗಳನ್ನು ಪೂರೈಸಲು ಇದು ಸೂಕ್ತ ಸಮಯವಾಗಿದೆ ಎಂದು ಒಸಿಎಚ್ಎ ಹೇಳಿದೆ. ಜುಲೈ ಮಧ್ಯಭಾಗದಿಂದ ಈವರೆಗೆ ದೇಶದಲ್ಲಿ 24 ಸಾವಿರಕ್ಕೂ ಹೆಚ್ಚು ಕಾಲರಾ ಪ್ರಕರಣಗಳು ವರದಿಯಾಗಿದ್ದು, ಕಾಲರಾದಿಂದ ಸುಮಾರು 700 ಜನ ಸಾವಿಗೀಡಾಗಿದ್ದಾರೆ ಎಂದು ಒಸಿಎಚ್ಎ ತಿಳಿಸಿದೆ.

ಇದನ್ನೂ ಓದಿ :ಲೆಬನಾನ್​​ನಲ್ಲಿ ಇಸ್ರೇಲ್​​ ವೈಮಾನಿಕ ದಾಳಿಗೆ 2,367 ಮಂದಿ ಸಾವು: 11,088 ಜನರಿಗೆ ಗಾಯ - ಆರೋಗ್ಯ ಸಚಿವಾಲಯ

For All Latest Updates

ABOUT THE AUTHOR

...view details