ನಿಮ್ಮ ಕಾಲು ಕೆಳಗೆ ಬೆಳೆಯುವ 'ಪುನರ್ನವ' ಎಂಬ ಗಿಡಮೂಲಿಕೆಯೊಂದು ನಿಮ್ಮ ಸಣ್ಣ- ಪುಟ್ಟ ಯಾತನೆಗಳನ್ನು ನಿವಾರಿಸಬಲ್ಲದು ಎಂಬುದರ ಬಗ್ಗೆ ನಿಮಗೆ ಗೊತ್ತಾ? ಗೊತ್ತಿರದಿದ್ದರೆ ಗೊತ್ತು ಮಾಡಿಕೊಳ್ಳಿ. ಆಯುರ್ವೇದ ಔಷಧಗಳಲ್ಲಿ ಹೆಚ್ಚಾಗಿ ಬಳಕೆ ಮಾಡುವ ಈ ಕಿಡಮೂಲಿಕೆಯಲ್ಲಿ ಜೀರ್ಣಕ್ರಿಯೆ ಸಮಸ್ಯೆಯಿಂದ ಹಿಡಿದು ಹತ್ತಾರು ರೋಗಗಳನ್ನು ನಿವಾರಿಸಬಲ್ಲ ಶಕ್ತಿ ಅಡಗಿದೆ. ಹೊಲ -ಗದ್ದೆಗಳ ಬದು, ಹಿತ್ತಲದಲ್ಲಿ, ಬೇಲಿಯಲ್ಲಿ, ಪಾಳುಭೂಮಿಗಳಲ್ಲಿ ಯಥೇಚ್ಛವಾಗಿ ಬೆಳೆಯುವ ಈ 'ಪುನರ್ನವ'(ಕೊಮ್ಮೆ ಗಿಡ) ಗಿಡಕ್ಕೆ ಅತ್ಯದ್ಭುತ ಹಾಗೂ ದೈವಿಕ ಔಷಧವಾಗಿ ಕಾರ್ಯನಿರ್ವಹಿಸುವ ಶಕ್ತಿ ಇದೆ ಎನ್ನುತ್ತಾರೆ ಆಯುರ್ವೇದ ವೈದ್ಯರು.
ಮಳೆಗಾಲದಲ್ಲಿ ಮನೆಯ ಆಸುಪಾಸಿನಲ್ಲಿಯೂ ಬೆಳೆಯುವ, ಹಳ್ಳಿಯಲ್ಲಿ ಪ್ರತಿ ಹೆಜ್ಜೆಗೂ ಸಿಗುವ ಈ 'ಪುನರ್ನವ' ಗಿಡವು ಹಲವು ಔಷಧಗಳ ಗುಣಗಳನ್ನು ಹೊಂದಿದ್ದರಿಂದ ಇದರ ಎಲೆಯನ್ನು ಬೇಯಿಸಿ ತಿನ್ನುವುದು ಉಂಟು. ಅದರಲ್ಲಿ ಬಿಳಿ 'ಪುನರ್ನವ' ಮತ್ತು ಕೆಂಪು 'ಪುನರ್ನವ' ಎಂಬ ಎರಡು ವಿಧಗಳಿವೆ. ಇದಕ್ಕೆ ತೆಲುಗು ಭಾಷೆಯಲ್ಲಿ ಗಾಳಿಜೆರು, ತೆಲ್ಲ ಗಾಳಿಜೆರುನೆ, ಪುನರ್ನವ, ಆಟಿಕಮಾಮಿಡಿ, ಪಪ್ಪಕು ಅಂತಲೂ ಕರೆಯುದುಂಟು. ಕಾಲ ಬುಡದಲ್ಲಿ ಸಿಗುವ ಈ ಸಂಜೀವಿನಿಗೆ ಕನ್ನಡದಲ್ಲಿ 'ಕೊಮ್ಮೆ ಗಿಡ' ಅಂತಲೂ ಕರೆಯುತ್ತಾರೆ. 'ಪುನರ್ನವ' ಎಂಬುವುದು ಸಂಸ್ಕೃತ ಪದವಾಗಿದ್ದು, ಇದಕ್ಕೆ ಕನ್ನಡದಲ್ಲಿ ನವೀನತೆ, ಹೊಸತನ, ನವ್ಯತೆ, ಹೊಸದು, ಮತ್ತೆ ಯೌವನ ಎಂದರ್ಥ ಬರುತ್ತದೆ.
ಇದಕ್ಕೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುದುಂಟು. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಈ ಕಿಡಮೂಲಿಕೆಯನ್ನು ಸೇವಿಸಿದರೆ ಅನೇಕ ಆರೋಗ್ಯ ಲಾಭಗಳನ್ನು ಪಡೆಯಬಹುದು ಎನ್ನುತ್ತಾರೆ ಹೈದರಾಬಾದಿನ ಬಿಆರ್ಕೆಆರ್ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಡಾ.ಚಿಲುವೇರು ರವೀಂದರ್.
ಕಿಡ್ನಿ ಸಮಸ್ಯೆಗಳಿಗೆ ಪರಿಹಾರ: ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರದ ಭಾಗವಾಗಿ ಈ ಗಿಡದ ಎಲೆಗಳನ್ನು ಸೇವಿಸುವುದರಿಂದ ಹೆಚ್ಚಿನ ಪ್ರಯೋಜನ ಇದೆ. ಈ ಎಲೆಯು ಮೂತ್ರಪಿಂಡಗಳನ್ನು ಆರೋಗ್ಯವಾಗಿಡುವುದರ ಜೊತೆಗೆ ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಈ ಕಿಡಮೂಲಿಕೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳು ಮೂತ್ರದ ಹರಿವನ್ನು ಹೆಚ್ಚಿಸುವುದರ ಜೊತೆಗೆ ಮೂತ್ರಪಿಂಡದ ಕಲ್ಲುಗಳನ್ನು ಮೂತ್ರದ ಮೂಲಕ ಹಾದುಹೋಗಲು ಸಹಾಯ ಕೂಡ ಮಾಡುತ್ತದೆ. ಅದೇ ರೀತಿ ದೇಹದಲ್ಲಿ ನೀರು ಹೆಚ್ಚಾದಾಗ ಅದರಲ್ಲಿರುವ ನೀರನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಅಲ್ಲದೇ, ಇದರಲ್ಲಿರುವ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಮೂತ್ರನಾಳದ ಸೋಂಕು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದು. ಖನಿಜಾಂಶಗಳು ಅಧಿಕವಾಗಿರುವುದರಿಂದ ಇದನ್ನು ತಿಂದರೆ ಯಕೃತ್ತಿನ ಆರೋಗ್ಯ ಕೂಡ ಸುಧಾರಿಸುತ್ತದೆ ಎನ್ನುತ್ತಾರೆ ಆಯುರ್ವೇದ ವೈದ್ಯರು.