ಕರ್ನಾಟಕ

karnataka

ಕರಾವಳಿ ಪ್ರದೇಶದ ಜನರೇ ಎಚ್ಚರ: ಮಳೆಗಾಲದಲ್ಲಿ ಮಿದುಳು ಸೋಂಕಿನ ಅಪಾಯ ಹೆಚ್ಚು - Monsoon Brain Infections

By ETV Bharat Karnataka Team

Published : Jul 18, 2024, 11:18 AM IST

ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನದ ಅನುಸಾರ, ಕರ್ನಾಟಕ ಮತ್ತು ಒಡಿಶಾ ಕರಾವಳಿ ಪ್ರದೇಶದಲ್ಲಿ ಮಿದುಳು ಸೋಂಕಿನ ಅಪಾಯ ಹೆಚ್ಚಿದೆ.

living in coastal and rice belt regions  vulnerable for viral encephalitis
ಸಾಂದರ್ಭಿಕ ಚಿತ್ರ (ETV Bharat)

ಫರೀದಾಬಾದ್​: ಮಳೆಗಾಲ ಅನೇಕ ಸೋಂಕುಗಳನ್ನು ಹೊತ್ತು ತರುತ್ತದೆ. ಈ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕ. ಅದರಲ್ಲೂ ಭಾರತದ ಕರಾವಳಿ ಮತ್ತು ಅಕ್ಕಿ ಬೆಳೆಯುವ ಪ್ರದೇಶಗಳಲ್ಲಿ ಮಕ್ಕಳು ಮತ್ತು ವೃದ್ಧರು ಮಾರಣಾಂತಿಕ ಎನ್ಸೆಫಾಲಿಟಿಸ್​ ವೈರಲ್​ ಮತ್ತು ಇತರೆ ಮಿದುಳು ಸೋಂಕಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಫರೀದಾಬಾದ್​ನ ಅಮೃತಾ ಆಸ್ಪತ್ರೆಯ ನರರೋಗ ತಜ್ಞರು ಎಚ್ಚರಿಸಿದ್ದಾರೆ. ಈ ಪ್ರದೇಶಗಳಲ್ಲಿ ಹೆಚ್ಚಿನ ಆರ್ದ್ರತೆ ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿ ಕೂಡ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ.

ಮಿದುಳು ಗಂಭೀರ ಪ್ರಮಾಣದ ಉರಿಯೂತ ಅನುಭವಿಸಿದಾಗ ಎನ್ಸೆಫಾಲಿಟಿಸ್ ಎಂದು ಕರೆಯುವ ಮಿದುಳಿನ ಸೋಂಕು ಸಂಭವಿಸುತ್ತದೆ. ಇದು ಮಿದುಳಿನ ಅಂಗಾಂಶವನ್ನು ಹಾನಿ ಮಾಡಬಲ್ಲದು. ಜೊತೆಗೆ, ನರಗಳ ಸಮಸ್ಯೆಯ ಲಕ್ಷಣಗಳೂ ಉಂಟಾಗಬಹುದು.

ಮಿದುಳಿನ ಸೋಂಕುಗಳಲ್ಲಿ ವೈರಲ್, ಬ್ಯಾಕ್ಟೀರಿಯಾ, ಟ್ಯೂಬರ್ಕ್ಯುಲರ್, ಫಂಗಲ್ ಅಥವಾ ಪ್ರೊಟೊಜೋಲ್​ನಂತಹ ಹಲವು ವಿಧಗಳಿದೆ. ಇವುಗಳ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ತಲೆನೋವು, ವಾಂತಿ ಎಂದು ಅಮೃತಾ ಆಸ್ಪತ್ರೆ ನರರೋಗತಜ್ಞ ಡಾ.ಸಂಜಯ್​ ಪಾಂಡೆ ಮಾಹಿತಿ ನೀಡಿದರು.

ಮಕ್ಕಳು ಮತ್ತು ಹಿರಿಯ ನಾಗರಿಕರು ಹೆಚ್ಚು ದುರ್ಬಲರಾಗಿರುವ ಹಿನ್ನೆಲೆಯಲ್ಲಿ ಈ ಸೋಂಕಿಗೆ ಗುರಿಯಾಗುವ ಸಾಧ್ಯತೆ ಹೆಚ್ಚು. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಕೆ ಮಾಡಿದಾಗ ಮೆದುಳಿನ ಸೋಂಕುಗಳು ಭಾರತ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಉಳಿದಿದೆ.

ಮಳೆಗಾಲ ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣವಾಗಿದ್ದು, ಈ ಸಮಯದಲ್ಲಿ ಡೆಂಗ್ಯೂ ಮತ್ತು ಜಪಾನೀಸ್ ಎನ್ಸೆಫಾಲಿಟಿಸ್​ನಂತಹ ಹಲವು ಸೋಂಕುಗಳ ಹರಡುವಿಕೆಯ ಪ್ರಮಾಣ ಜಾಸ್ತಿ ಇರುತ್ತದೆ.

ಇತ್ತೀಚಿಗೆ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನದ ಅನುಸಾರ, ಕರ್ನಾಟಕ ಮತ್ತು ಒಡಿಶಾ ಕರಾವಳಿ ಪ್ರದೇಶ, ಅಸ್ಸಾಂ, ತ್ರಿಪುರಾ, ಬಿಹಾರ ಮತ್ತು ಉತ್ತರ ಪ್ರದೇಶದಂತಹ ಅಕ್ಕಿ ಬೆಳೆಯುವ ಪ್ರದೇಶಗಳು ಭಾರತದಲ್ಲಿ ವೈರಲ್ ಎನ್ಸೆಫಾಲಿಟಿಸ್‌ಗೆ ಸ್ಥಳೀಯ ವಲಯಗಳಾಗಿವೆ ಎಂದು ಗುರುತಿಸಲಾಗಿದೆ.

ಸಕಾಲದಲ್ಲಿ ಈ ಸೋಂಕು ಪತ್ತೆ ಮತ್ತು ಚಿಕಿತ್ಸೆ ನೀಡದೇ ಹೋದಲ್ಲಿ ಮಾರಣಾಂತಿಕವಾಗಬಹುದು. ಈ ಹಿನ್ನೆಲೆಯಲ್ಲಿ ಆರಂಭಿಕ ಹಂತದಲ್ಲಿ ಸೋಂಕಿನ ಪತ್ತೆ ಅಗತ್ಯವಾಗಿದ್ದು, ತೀವ್ರತೆಯ ಅನುಸಾರ ಚಿಕಿತ್ಸೆ ನೀಡಬೇಕಿದೆ. ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣ ಉಂಟುಮಾಡದೇ ಇರುವುದು, ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳುವುದು ಸೋಂಕು ಹರಡದಂತೆ ತಡೆಯುವ ಮುಖ್ಯ ಕ್ರಮಗಳಾಗಿವೆ.

ಇದನ್ನೂ ಓದಿ: ರಾಜ್ಯದಲ್ಲಿ ಒಂದೇ ದಿನ 424 ಮಂದಿಗೆ ಡೆಂಗ್ಯೂ ಪ್ರಕರಣ ಪತ್ತೆ: 119 ಸಕ್ರಿಯ ಪ್ರಕರಣಗಳು

ABOUT THE AUTHOR

...view details