ಕರ್ನಾಟಕ

karnataka

ನಾಳೆ "ರಾನಿ" ಸಿನಿಮಾ ಬಿಡುಗಡೆ: ನಿನ್ನೆ ಅಪಘಾತಕ್ಕೊಳಗಾದ ಕಿರಣ್ ರಾಜ್, ಇಂದು ಹೇಗಿದ್ದಾರೆ? - Kiran Raj Accident

By ETV Bharat Karnataka Team

Published : Sep 11, 2024, 5:01 PM IST

ಬಹುನಿರೀಕ್ಷಿತ ಚಿತ್ರ "ರಾನಿ" ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಸಿನಿಮಾ ತೆರೆಕಾಣಲಿದ್ದು, ನಿನ್ನೆ ರಾತ್ರಿ ನಾಯಕ ನಟ ಕಿರಣ್ ರಾಜ್ ಅಪಘಾತಕ್ಕೊಳಗಾಗಿದ್ದಾರೆ. ಇಂದು ವಿಡಿಯೋ ಸಂದೇಶದ ಮೂಲಕ ಸುರಕ್ಷಿತನಾಗಿರುವುದಾಗಿ ತಿಳಿಸಿದ್ದಾರೆ.

Kiran Raj
ನಟ ಕಿರಣ್​ ರಾಜ್​ (ETV Bharat)

ಬೆಂಗಳೂರು: ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಕಿರಣ್ ರಾಜ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ "ರಾನಿ" ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಸಿನಿಮಾ ಬಿಡುಗಡೆಯಾಗಲಿದ್ದು, ನಿನ್ನೆ(ಮಂಗಳವಾರ) ರಾತ್ರಿ ನಾಯಕ ನಟ ಅಪಘಾತಕ್ಕೊಳಗಾಗಿದ್ದಾರೆ. ಇಂದು ಸುರಕ್ಷಿತನಾಗಿರುವ ಬಗ್ಗೆ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಕಿರಣ್ ರಾಜ್ (ETV Bharat)

ರಾನಿ ಚಿತ್ರದ ನಾಯಕ ನಟ ಕಳೆದ ರಾತ್ರಿ ಬೆಂಗಳೂರು ಹೊರಹೊಲಯದಲ್ಲಿ ಕಾರು ಅಪಘಾತಕ್ಕೊಳಗಾಗಿದ್ದಾರೆ. ಕಾರು ಭಾಗಶಃ ಜಖಂ ಆಗಿದೆ. ಜೊತೆಯಲ್ಲಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೀಟ್ ಬೆಲ್ಟ್ ಧರಿಸಿದ್ದರಿಂದ ಸುರಕ್ಷಿತವಾಗಿದ್ದಾರೆ. ನಟ ಕೆಂಗೇರಿ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವಿಷಯ ತಿಳಿದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು. ನಟ ಇಂದು ವಿಡಿಯೋ ಸಂದೇಶದ ಮೂಲಕ ಫ್ಯಾನ್ಸ್​​ ಚಿಂತೆಯನ್ನು ದೂರ ಮಾಡಿದ್ದಾರೆ.

ಚಿಕಿತ್ಸೆ ಪಡೆದ ನಟ ಕಿರಣ್​ ರಾಜ್​​ (ETV Bharat)

ವಿಡಿಯೋದಲ್ಲಿ, ''ಎಲ್ಲರಿಗೂ ನಮಸ್ಕಾರ. ನಿಮಗೆ ಈಗಾಗಲೇ ಮಾಹಿತಿ ತಲುಪಿರುತ್ತದೆ. ಗಾಬರಿಯಾಗಿ ನನಗೆ ಮೆಸೇಜ್​​ ಮಾಡುತ್ತಿದ್ದೀರ. ಆದ್ರೆ ಚಿಂತೆ ಮಾಡುವಂಥ ವಿಚಾರವಿಲ್ಲ. ನಾನು ಆರಾಮಾಗಿದ್ದೇನೆ. ಸ್ವಲ್ಪ ಏಟಾಗಿತ್ತು. ವೈದ್ಯರು ಸೂಕ್ತ ಚಿಕಿತ್ಸೆ ಒದಗಿಸಿದ್ದಾರೆ. ಯಾರೂ ಭಯ ಪಡಬೇಡಿ. ನನ್ನ ಬಗ್ಗೆ ಕಾಳಜಿ ತೋರಿದ ಅಭಿಮಾನಿಗಳೂ ಸೇರಿದಂತೆ ಎಲ್ಲಾ ಮಾಧ್ಯಮದವರಿಗೆ ಧನ್ಯವಾದಗಳು. ನಾನು ಚೇತರಿಸಿಕೊಂಡಿದ್ದೇನೆ'' ಎಂದು ಬರೆದುಕೊಂಡಿದ್ದಾರೆ.

ಕಿರಣ್ ರಾಜ್ ಕಾರು ಅಪಘಾತ (ETV Bharat)

ಇನ್ನು ಕಿರಣ್ ರಾಜ್ ನಾಯಕನಾಗಿ ನಟಿಸಿರುವ "ರಾನಿ" ಚಿತ್ರದ ಟ್ರೇಲರ್​​ ಒಂದು ವಾರದ ಹಿಂದಷ್ಟೇ ಬಿಡುಗಡೆ ಆಗಿತ್ತು. ಟೈಟಲ್ ಸಾಂಗ್ ಸಹ ಇತ್ತೀಚೆಗೆ ಅನಾವರಣಗೊಂಡಿದೆ. ಗೀತರಚನೆಕಾರ ಪ್ರಮೋದ್ ಮರವಂತೆ ಬರೆದು, ಸಚಿನ್ ಬಸ್ರೂರ್ ಸಂಗೀತ ನೀಡಿರುವ "ರಾನಿ" ಚಿತ್ರದ ಟೈಟಲ್ ಸಾಂಗ್ ಅನ್ನು ಖ್ಯಾತ ಚಿತ್ರಲೇಖಕರಾದ ಜೆ.ಕೆ.ಭಾರವಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಕಿರಣ್ ರಾಜ್ ನಟನೆಯ 'ರಾನಿ' ಪ್ರಮೋಶನಲ್​​ ಈವೆಂಟ್​​ (ETV Bharat)

ಈವೆಂಟ್​ನಲ್ಲಿ ಮಾತನಾಡಿದ್ದ ಚಿತ್ರದ ನಿರ್ದೇಶಕ ಗುರುತೇಜ್ ಶೆಟ್ಟಿ, ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು. ಆ್ಯಕ್ಷನ್, ಸೆಂಟಿಮೆಂಟ್, ಥ್ರಿಲ್ಲರ್ ಎಲ್ಲದರ ಸಂಗಮವೇ ರಾನಿ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳಿರುವ ಈ ಚಿತ್ರ ಟೀಸರ್, ಹಾಡುಗಳು ಹಾಗೂ ಟ್ರೇಲರ್ ಮೂಲಕ ಈಗಾಗಲೇ ಜನ ಮನ ಗೆದ್ದಿದೆ. ಯಾವುದೇ ಕೊರತೆ ಬಾರದಂತೆ ನಿರ್ಮಾಪಕರು ಅದ್ಧೂರಿಯಾಗಿ ನಿರ್ಮಾಣ‌ ಮಾಡಿದ್ದಾರೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

ಕಿರಣ್ ರಾಜ್ ನಟನೆಯ 'ರಾನಿ' ಪ್ರಮೋಶನಲ್​​ ಈವೆಂಟ್​​ (ETV Bharat)

ಇದನ್ನೂ ಓದಿ:''ಲೆಕ್ಕವಿಲ್ಲದಷ್ಟು ಬಾರಿ ನನ್ನ ಮದುವೆ ಮಾಡಿಸಿಬಿಟ್ಟಿರಿ'': ಮದುವೆ ವದಂತಿ ಬಗ್ಗೆ ಅಸಮಧಾನಗೊಂಡ ನಟಿ ರಮ್ಯಾ - Ramya Reacts Wedding Rumors

ನಂತರ ಕಿರಣ್ ರಾಜ್ ಮಾತನಾಡಿ, ಇದು ಕೇವಲ ಚಿತ್ರವಲ್ಲ. ನನ್ನ ಕನಸು. ನನ್ನ ಕನಸಿಗೆ ಆಸರೆಯಾದವರು ನಮ್ಮ ನಿರ್ಮಾಪಕರು.‌ ನನ್ನ ಮೇಲೆ ಭರವಸೆಯಿಟ್ಟು ಅಪಾರ ವೆಚ್ಚದಲ್ಲಿ ಈ ಚಿತ್ರವನ್ನು ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗಡೆ ನಿರ್ಮಿಸಿದ್ದಾರೆ. ಗುರುತೇಜ್ ಶೆಟ್ಟಿ ನಿರ್ದೇಶನ, ಪ್ರಮೋದ್ ಮರವಂತೆ ಸಾಹಿತ್ಯ, ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ ಹಾಗೂ ಮಣಿಕಾಂತ್ ಕದ್ರಿ ಅವರ ಸಂಗೀತ ಎಲ್ಲವೂ ಉತ್ತಮವಾಗಿದೆ. ಆ್ಯಕ್ಷನ್ ಸನ್ನಿವೇಶಗಳು ಈ ಚಿತ್ರದ ಹೈಲೆಟ್ ಎನ್ನಬಹುದು. ನಾನು ರಾನಿ ಹಾಗೂ ರಾಘವ ಎಂಬ ಎರಡು ಲುಕ್​​ಗಳಲ್ಲಿ ಕಾಣಿಸಿಕೊಂಡಿದ್ದೇನೆ.‌ ಚಿತ್ರ ಪ್ರೇಕ್ಷಕರಿಗೆ ಬಹಳ ಇಷ್ಟ ಆಗಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ತಮ್ಮೂರಿನ ಗಣೇಶೋತ್ಸವದಲ್ಲಿ ರಕ್ಷಿತ್​​ ಶೆಟ್ಟಿ ಭಾಗಿ: ಖ್ಯಾತ ನಟನನ್ನು ನೋಡಲು ಮುಗಿಬಿದ್ದ ಜನ - Rakshit Shetty

ಇದೊಂದು ಗ್ಯಾಂಗ್​ಸ್ಟರ್ ಸಿನಿಮಾ ಆದರೂ ಕುಟುಂಬ ಸಮೇತ ನೋಡುವಂತಹ ಭಾವನಾತ್ಮಕ ವಿಷಯಗಳಿವೆ. ರವಿಶಂಕರ್ ಮೈಕೋ ನಾಗರಾಜ್, ಉಗ್ರಂ ರವಿ, ಉಗ್ರಂ ಮಂಜು, ಬಿ ಸುರೇಶ, ಮಂಡ್ಯ ರಮೇಶ್​​, ಸುಜಯ್ ಶಾಸ್ತ್ರಿ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರು, ಗಿರೀಶ್ ಹೆಗ್ಡೆ ಹೀಗೆ ದೊಡ್ಡ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಸಮೀಕ್ಷಾ, ಅಪೂರ್ವ, ರಾದ್ಯಾ ಮೂವರು ಈ ಚಿತ್ರದ ನಾಯಕಿಯರು. ಸೆಪ್ಟೆಂಬರ್ 12 ರಂದು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಾನಿ ಬಿಡುಗಡೆಯಾಗಲಿದೆ.

ABOUT THE AUTHOR

...view details